ಕರ್ನಾಟಕ

karnataka

By

Published : Mar 4, 2022, 6:37 PM IST

Updated : Mar 4, 2022, 6:48 PM IST

ETV Bharat / state

ಚೊಚ್ಚಲ ಬಜೆಟ್ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಸಮರ್ಥನೆ ಏನು?

ಕಳೆದ ಸಲ ಕೇಂದ್ರ ಸರ್ಕಾರ ಕೋವಿಡ್ ಕಾರಣದಿಂದ ಶೇ.4ರ ಪ್ರಮಾಣದಲ್ಲಿ ಸಾಲ ಪಡೆಯಲು ಅವಕಾಶ ಕೊಟ್ಟಿತ್ತು, ಅದರ ಪ್ರಕಾರ 67,100 ಕೋಟಿ ಸಾಲ ಪಡೆಯಲು ಅವಕಾಶ ಇತ್ತು, ಆದರೆ ನಾವು 63,100 ಕೋಟಿ ರೂ. ಸಾಲ ಪಡೆದೆವು, 4 ಸಾವಿರ ಕೋಟಿ ಸಾಲ ಪಡೆಯದೇ ಆರ್ಥಿಕ‌ ಶಿಸ್ತು ಕಾಪಾಡಿದ್ದೇವೆ, ಈ ಸಲವೂ ಪೂರ್ಣ ಪ್ರಮಾಣದಲ್ಲಿ ಸಾಲ ಪಡೆಯಲ್ಲ, ಶೇ.3.26ರ ಮಿತಿಯಲ್ಲಿ ಸಾಲ ಪಡೆಯುತ್ತೇವೆ, 4 ಸಾವಿರ ಕೋಟಿ ರೂ. ಸಾಲ ಪಡೆಯದ ಮಿತಿಗೆ ಒಳಪಟ್ಟಿದ್ದೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

cm-basavaraj-bommai-press-meet-on-budget
ಚೊಚ್ಚಲ ಬಜೆಟ್ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಸಮರ್ಥನೆ

ಬೆಂಗಳೂರು:ಆದಾಯ ಕೊರತೆ ನಡುವೆಯೂ ಕಳೆದ ಬಾರಿಗಿಂತ ಹೆಚ್ಚಿನ ಮೊತ್ತದ ಬಜೆಟ್ ಮಂಡಿಸಿದ್ದು, ಈ ಬಾರಿ ಭರವಸೆ ಈಡೇರುವ ಬಜೆಟ್ ಅನ್ನೇ ಮಂಡಿಸಿದ್ದೇನೆ, ಮುಂದಿನ ವರ್ಷದ ಮಾರ್ಚ್​​ನಲ್ಲಿ ನಮ್ಮ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿರುವ ಬಗ್ಗೆ ಉತ್ತರ ಕೊಡಲಿದ್ದೇನೆ. ಎಲ್ಲರನ್ನು ಒಳಗೊಂಡ ಭರವಸೆಯ ಬಜೆಟ್ ಇದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಬಗೆಗಿನ ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ್ದಾರೆ.

ಬಜೆಟ್ ಮಂಡನೆ ನಂತರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದೆರಡು ವರ್ಷದಲ್ಲಿ ಆರ್ಥಿಕತೆಗೆ ಪೆಟ್ಟು ನೀಡಿದ ಕೊರೊನಾ, ನೈಸರ್ಗಿಕ ವಿಕೋಪಗಳಿಂದ ಆರ್ಥಿಕ ಹಿನ್ನಡೆ, 2021-22ರ ಅವಧಿ ಬಳಿಕ ಸರ್ಕಾರದ ಕ್ರಮಗಳಿಂದ ಆರ್ಥಿಕ ಚೇತರಿಕೆ ರಾಜಸ್ವ ಸಂಗ್ರಹ, ಸ್ವೀಕೃತಿಗಳು ನಮ್ಮ ಗುರಿ‌ ಮುಟ್ಟಲಿವೆ. 2022-23ರ ಬಜೆಟ್ ಗಾತ್ರ 2,65,720 ಕೋಟಿ ಆಗಿದೆ. 19,513 ಕೋಟಿ ರೂ. ಗಾತ್ರ ಹೆಚ್ಚಳ, 2006ರಿಂದ ಆದಾಯ ಕೊರತೆ ಇತ್ತು. ಕಳೆದ ಬಾರಿ ಆದಾಯ ಕೊರತೆ 15,134 ಕೋಟಿ ರೂ. ಇತ್ತು, ಈ ಬಾರಿ 14,699 ಕೋಟಿ ರೂ. ಆದಾಯ ಕೊರತೆ ಇದೆ, ಈ ಸಲ ಆದಾಯ ಕೊರತೆ ಪ್ರಮಾಣ 430 ಕೋಟಿ ಕಡಿಮೆಯಾಗಿದೆ, ಇದು ಉತ್ತಮ ಹಣಕಾಸು ನಿರ್ವಹಣೆಯಾಗಿದೆ ಎಂದು ತಿಳಿಸಿದರು.

ಕಳೆದ ಸಲ ಕೇಂದ್ರ ಸರ್ಕಾರ ಕೋವಿಡ್ ಕಾರಣದಿಂದ ಶೇ.4ರ ಪ್ರಮಾಣದಲ್ಲಿ ಸಾಲ ಪಡೆಯಲು ಅವಕಾಶ ಕೊಟ್ಟಿತ್ತು, ಅದರ ಪ್ರಕಾರ 67,100 ಕೋಟಿ ಸಾಲ ಪಡೆಯಲು ಅವಕಾಶ ಇತ್ತು, ಆದರೆ ನಾವು 63,100 ಕೋಟಿ ರೂ. ಸಾಲ ಪಡೆದೆವು, 4 ಸಾವಿರ ಕೋಟಿ ಸಾಲ ಪಡೆಯದೇ ಆರ್ಥಿಕ‌ ಶಿಸ್ತು ಕಾಪಾಡಿದ್ದೇವೆ, ಈ ಸಲವೂ ಪೂರ್ಣ ಪ್ರಮಾಣದಲ್ಲಿ ಸಾಲ ಪಡೆಯಲ್ಲ, ಶೇ.3.26ರ ಮಿತಿಯಲ್ಲಿ ಸಾಲ ಪಡೆಯುತ್ತೇವೆ, 4 ಸಾವಿರ ಕೋಟಿ ರೂ. ಸಾಲ ಪಡೆಯದ ಮಿತಿಗೆ ಒಳಪಟ್ಟಿದ್ದೇವೆ ಎಂದರು.

ಆರ್ಥಿಕ ಶಿಸ್ತು ಪಾಲನೆ, ಸಂಪನ್ಮೂಲಗಳ ಕ್ರೋಢೀಕರಣ, ಅನಗತ್ಯ ವೆಚ್ಚ ಕಡಿತ ನಮ್ಮ ಮುಂದಿನ ಗುರಿಯಾಗಿದೆ. ರಾಜಸ್ವ ಸ್ವೀಕೃತಿಗಳು 1,89,888 ಕೋಟಿ ಆಗಿದೆ, ಜಿಎಸ್​ಟಿ ಪರಿಹಾರ ಈ ಬಜೆಟ್​ನಲ್ಲಿ ಲೆಕ್ಕ ಹಾಕಿಕೊಂಡಿಲ್ಲ, ಜಿಎಸ್ಟಿ ಪರಿಹಾರ 11-13 ಸಾವಿರ ಕೋಟಿ ರೂ. ವಾರ್ಷಿಕ ಸಿಕ್ತಿತ್ತು, ಜಿಎಸ್​ಟಿ ಪರಿಹಾರ ಬರೋದು ಈ ವರ್ಷ ನಿಲ್ಲುತ್ತದೆ, ಇನ್ನೂ ಮೂರು ವರ್ಷ ಜಿಎಸ್ಟಿ ತೆರಿಗೆ ಪರಿಹಾರ ಮುಂದುವರೆಸಲು ಮನವಿ ಮಾಡಿದ್ದೇವೆ, ಕೇಂದ್ರದ ತೆರಿಗೆ ಪಾಲು 29,783 ಕೋಟಿ ರೂ ಆಗಿದೆ, ಕೇಂದ್ರದಿಂದ ಸಹಾಯಧನವೂ 17,281 ಕೋಟಿ ರೂ ಬರಲಿದೆ, ತೆರಿಗೆ ಸಂಗ್ರಹದಲ್ಲಿ ಕಳೆದ ವರ್ಷದ ಗುರಿಗಿಂತ ಹೆಚ್ಚು ಸಾಧನೆಯಾಗಿದೆ. ಜಿಎಸ್​ಟಿ, ಅಬಕಾರಿ, ತೆರಿಗೆ ರಹಿತ ಆದಾಯ, ಮುದ್ರಾಂಕದಲ್ಲಿ ಗುರಿ ಮುಟ್ಟಲಿದ್ದೇವೆ, ಕೋವಿಡ್ ಕಾರಣದಿಂದ ವಾಹನ ಮಾರಾಟ ಕಡಿತಗೊಂಡಿದ್ದು, ಮೋಟಾರು ತೆರಿಗೆ ಸಂಗ್ರಹದಲ್ಲಿ ಮಾತ್ರ ನಮಗೆ ಕಡಿಮೆಯಾಗಲಿದೆ. ತೆರಿಗೆಯೇತರ ಆದಾಯ ಹೆಚ್ಚಾದಷ್ಟೂ ಆರ್ಥಿಕ ಶಿಸ್ತು ಹೆಚ್ಚಲಿದೆ, ಗಣನೀಯ ಪ್ರಮಾಣದಲ್ಲಿ ತೆರಿಗೆಯೇತರ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.

ನಮ್ಮ ಬಜೆಟ್​​ನಲ್ಲಿ ಕೃಷಿ, ಉತ್ಪಾದನೆ, ಸೇವಾ ವಲಯ ಮೂರಕ್ಕೂ ಆದ್ಯತೆ ಕೊಡಲಾಗಿದೆ. ಯಶಸ್ವಿನಿ ಮರಳಿ ತರಬೇಕು ಎಂದು ರೈತರು ಬೇಡಿಕೆ ಇರಿಸಿದ್ದರು. ಯೋಜನೆಯಲ್ಲಿನ ಕೆಲ ನ್ಯೂನತೆ ಸರಿಪಡಿಸಿ ಮರು ಜಾರಿ ಮಾಡುತ್ತಿದ್ದೇವೆ. ಇದಕ್ಕಾಗಿ 300 ಕೋಟಿ ಹಣ ಇಡಲಾಗಿದೆ. 22 ಲಕ್ಷ ರೈತರಿಗೆ ಕಳೆದ ಬಾರಿ ಬಡ್ಡಿ ರಹಿತ ಸಾಲ ನೀಡಲಾಗಿತ್ತು. ಈ ಬಾರಿ 33 ಲಕ್ಷ ರೈತರಿಗೆ ಬಡ್ಡಿ ರಹಿತ ಸಾಲ ಕೊಡಲಿದ್ದೇವೆ. ಹಾಲು ಉತ್ಪಾದಕ ರೈತರಿಗೆ ಕ್ಷೀರ ಸಮೃದ್ಧ ಸಹಕಾರ ಬ್ಯಾಂಕ್ ನಡಿ ನೆರವು ಕಲ್ಪಿಸಲಿದ್ದೇವೆ. ಆಶಾ, ಅಂಗನವಾಡಿ, ಬಿಸಿಯೂಟ, ಗ್ರಾಮ ಸಹಾಯಕರು, ಪೌರಕಾರ್ಮಿಕರು ಸೇರಿ ಅಸಂಘಟಿತ ವಲಯದ ಎಲ್ಲರಿಗೂ ನಾವು ಮಾಸಾಶನ ಕೊಡಲು ತೀರ್ಮಾನಿದ್ದೇವೆ ಎಂದರು.

ನಮ್ಮದು ಸೂಕ್ಷ್ಮ ಬಜೆಟ್:ನಾನು ಮಂಡಿಸಿರುವುದು ಒಂದು ರೀತಿಯ ಸೂಕ್ಷ್ಮ ಬಜೆಟ್, ಗಿಡ ಮರ ಪರಿಸರವನ್ನೂ ಗಮನಿಸಿ, ಪ್ರತಿವರ್ಷ ಪರಿಸರ ಎಷ್ಟು ನಷ್ಟವಾಗಲಿದೆ ಎಂದು ಅಧ್ಯಯನ ಮಾಡಿ ಎಕೋ ಬಜೆಟ್ ಮಾಡಬೇಕು ಎಂದು ತೀರ್ಮಾನಿಸಿದ್ದೇನೆ. ಪರಿಸರ ಉಳಿಸುವ ಬಜೆಟ್ ನಾವೇ ಮೊದಲು ಮಾಡುತ್ತಿದ್ದೇವೆ, ಇದು ಸರ್ಕಾರದ ಸೂಕ್ಷ್ಮತೆ ತೋರಿಸಲಿದೆ ಎಂದರು.

ಆಸಿಡ್ ದಾಳಿಗೊಳಗಾದವರಿಗೆ ನೀಡುವ ಮಾಸಾಶನ ಮೂರರಿಂದ‌ ಹತ್ತು ಸಾವಿರಕ್ಕೆ ಹೆಚ್ಚಳ, ಕ್ಯಾನ್ಸರ್ ರೋಗಿಗಳ ಕೀಮೋಥೆರಪಿಗೆ 10 ಕೇಂದ್ರ ಹೊಸದಾಗಿ ಆರಂಭ, ಕಡಿಮೆ ದರದಲ್ಲಿ ಕಿಮೋಥೆರಪಿ ಲಭ್ಯ. ಡಯಾಲಿಸಿಸ್ 60 ಸಾವಿರ ಸೈಕಲ್​ಗೆ ಹೆಚ್ಚಿಸಿದ್ದೇವೆ, ಹಿರಿಯ ನಾಗರಿಕರಿಗೆ ಕಣ್ಣಿನ ತಪಾಸಣೆ, ಚಿಕಿತ್ಸೆ, ಕನ್ನಡ ವ್ಯವಸ್ಥೆ ಕಲ್ಪಿಸಿದ್ದೇವೆ. ಹುಟ್ಟು ಕಿವುಡರಿಗೆ 500 ಮಕ್ಕಳಿಗೆ ಕೋಕ್ಲಿಯರ್ ಇನ್ ಪ್ಲಾಂಟ್ ಉಪಕರಣ ನೀಡಲು ನಿರ್ಧರಿಸಿದ್ದೇವೆ. ನಿರ್ಲಕ್ಷ್ಯಕ್ಕೆ ಒಳಗಾದವರನ್ನು ಗುರುತಿಸಿ ಯೋಜನೆ ನೀಡಿರುವ ಸೂಕ್ಷ್ಮ ಬಜೆಟ್ ನಮ್ಮದಾಗಿದೆ ಎಂದು ಹೇಳಿದರು.

ಆಟೋ, ಟ್ಯಾಕ್ಸಿ ಚಾಲಕರ ಮಕ್ಕಳಿಗೆ ಶಿಕ್ಷಣ, ಆರೋಗ್ಯಕ್ಕೆ ಯೋಜನೆ ರೂಪಿಸುವ ಮನವಿ ಪರಿಗಣಿಸಿದ್ದೇವೆ, ವಾಣಿಜ್ಯ ಬಳಕೆ ವಾಹನಗಳ ಚಾಲಕರ ಮಕ್ಕಳಿಗೆ ಅನ್ವಯವಾಗುವಂತೆ ಯೋಜನೆ ಜಾರಿಗೊಳಿಸುತ್ತಿದ್ದೇವೆ. ಶಿಕ್ಷಣ, ಆರೋಗ್ಯ, ಮಹಿಳಾ ಕಲ್ಯಾಣ, ಉದ್ಯೋಗಕ್ಕೆ ಆಧ್ಯತೆ ನೀಡಿದ್ದೇನೆ. ಕಲ್ಯಾಣ ಕರ್ನಾಟಕಕ್ಕೆ‌ ಘೋಷಣೆ ಮಾಡಿದಂತೆ 3 ಸಾವಿರ ಕೋಟಿ ಕೊಟ್ಟಿದ್ದೇನೆ, ಶಿಕ್ಷಣಕ್ಕೆ 500 ಕೋಟಿ ಕೊಟ್ಟಿದ್ದೇನೆ, ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಆಧ್ಯತೆ ನೀಡುವುದು ನಮ್ಮ ಗುರಿ ಎಂದರು.

ಇದನ್ನೂ ಓದಿ:ಒಂದೇ ಹಳಿ ಮೇಲೆ ರೈಲುಗಳು ಮುಖಾಮುಖಿ ಬಂದರೂ ಹೊಡೆಯಲ್ಲ ಡಿಕ್ಕಿ.. ಇದೆಂಥ ಅಚ್ಚರಿ!

ರಾಜ್ಯವನ್ನ ನವ ಕರ್ನಾಟಕದಿಂದ ನವ ಭಾರತ ಮಾಡಲು ಹಲವಾರು ಕ್ರಮ ಕೈಗೊಂಡಿದ್ದೇವೆ, ಉದ್ಯೋಗ ನೀತಿ, ಆರು ಹೊಸ ಮಾದರಿ ನಗರ ನಿರ್ಮಾಣ, ಸೆಮಿಕಂಡಕ್ಟರ್ ಉತ್ಪಾದನಾ ಘಟಕಕ್ಕೆ ಕೆಲ ವಿನಾಯಿತಿ ನೀಡಿ ನಮ್ಮಲ್ಲಿಯೇ ಘಟಕ ಆರಂಭಕ್ಕೆ ಆಹ್ವಾನಿಸಲಾಗುತ್ತದೆ. ಹೊಸ ವಿಧಾನದಲ್ಲಿ ಕರ್ನಾಟಕ ಅಭಿವೃದ್ಧಿ ಪ್ರಯತ್ನಿಸಲಾಗುತ್ತದೆ. ಧಾರವಾಡ ಮತ್ತು ತುಮಕೂರಿನಲ್ಲಿ ಹೊಸ ಹೂಡಿಕೆ ವಲಯ ಮಾಡಲು ನಿರ್ಧರಿಸಲಾಗಿದೆ. ದೊಡ್ಡ ಅಭಿವೃದ್ಧಿ ಸಾಧಿಸಲು ಬಜೆಟ್​ನಲ್ಲಿ ಕಾರ್ಯಕ್ರಮ ಕೊಡುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.

ರೈಲ್ವೆ, ಬಂದರು, ರಸ್ತೆ ಸಾರಿಗೆ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದು, 10 ರೈಲ್ವೆ ಪಥ ನಿರ್ಮಾಣ, ದಾವಣಗೆರೆ ಕೊಪ್ಪಳದಲ್ಲಿ ವಿಮಾನ ನಿಲ್ದಾಣ, ಪ್ರವಾಸೋದ್ಯಮ ಅಭಿವೃದ್ಧಿಗೆ ಆಧ್ಯತೆ. ಮೈಸೂರು, ಹಂಪಿಯಲ್ಲಿ ಸರ್ಕಿಟ್ ನಿರ್ಮಿಸಿ ಮೂಲಸೌಕರ್ಯ ನಿರ್ಮಾಣ ಮಾಡಲಿದ್ದೇವೆ. ಕೇರಳ, ಗೋವಾಗೆ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶ ಕೊಟ್ಟ ರೀತಿ ನಮಗೂ ಅವಕಾಶ ಕೇಳಿದ್ದೇವೆ, ಅದಕ್ಕೆ ಕೇಂದ್ರ ಪರಿಸರ ಇಲಾಖೆ ಅನುಮತಿ ಬೇಕಿದೆ ಅನುಮತಿ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತದೆ ಎಂದರು.

ಅಕ್ರಮ ಸಕ್ರಮ ಆದಷ್ಟು ಬೇಗ ಜಾರಿ:ರಾಜ್ಯದ ಜನರಿಗೆ ತೊಂದರೆಯಾಗುತ್ತಿರುವ ಕೆಲ ಕಾನೂನು ತೊಡಕು ನಿವಾರಣೆಗೆ ಕ್ರಮ ಕೈಗೊಳ್ಳಲಿದ್ದೇವೆ. ಅಕ್ರಮ ಸಕ್ರಮ ಕಾನೂನು ತೊಡಕು ನಿವಾರಣೆಗೆ ಕಾನೂನಾತ್ಮಕವಾಗಿಯೇ ಕ್ರಮ ಕೈಗೊಳ್ಳಲಾಗುತ್ತಿದೆ. ಇದು ಪರಿಶೀಲನೆ ಹಂತದಲ್ಲಿದೆ, ಸೂಕ್ತ ನಿರ್ಧಾರವನ್ನು ಆದಷ್ಟು ಬೇಗ ಕೊಡಲಿದ್ದೇವೆ, ಅರಣ್ಯ ಭೂಮಿ ವಿಚಾರದಲ್ಲಿಯೂ ಸಮಸ್ಯೆ ಪರಿಹರಿಸಲಾಗುತ್ತದೆ ಎಂದರು.

ಗುರಿಯುಳ್ಳ,‌ ಸಾಮಾಜಿಕ, ಪ್ರಾದೇಶಿಕ ಸಮಾನತೆ, ಕೃಷಿಕರಿಗೆ,‌ ದುಡಿಯುವವರಿಗೆ, ಮಹಿಳೆ, ಯುವಜನ, ಹೊಸ ತಂತ್ರಜ್ಞಾನಕ್ಕೆ ಅವಕಾಶ ನೀಡಲಾಗಿದೆ. ಹೊಸ ವಿಚಾರಗಳಿಗೂ ಆಧ್ಯತೆ ನೀಡಲಾದ ಬಜೆಟ್ ನಮ್ಮದಾಗಿದೆ. ಕಳೆದ ಬಾರಿಯ ಗಾತ್ರವಾದರೂ ಇರಲಿದೆಯಾ ಎನ್ನುವ ಮಾತುಗಳ ನಡುವೆ 19 ಸಾವಿರ ಕೋಟಿಗೂ ಹೆಚ್ಚಿನ ಬಜೆಟ್​​ ಅನ್ನು ವಿತ್ತೀಯ ಕೊರತೆ ಮಿತಿಯೊಳಗೆ ಮಂಡಿಸಿದ್ದೇನೆ ಎಂದು ಮಾಹಿತಿ ನೀಡಿದರು.

ಆದಷ್ಟು ಬೇಗ ಅಧಿಕಾರಿಗಳ ವೇತನ ಸಮಿತಿ ರಚನೆ:ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದ ಭರವಸೆಯನ್ನು ಬಜೆಟ್​​ನಲ್ಲಿ ನೀಡಿಲ್ಲ ಈ ಸಂಬಂಧ ಪತ್ರ ಬರೆದಿದ್ದ ಮಾಜಿ ಸಿಎಂ ಯಡಿಯೂರಪ್ಪ ನಿರಾಶೆಯಾಗಿಲ್ಲ, ಅವರೊಂದಿಗೆ ಮಾತನಾಡಿದ್ದೇನೆ, ಸರ್ಕಾರಿ ನೌಕರರ ಸಂಘದ ಜೊತೆಗೂ ಮಾತನಾಡಿದ್ದೇನೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರ ಮಾದರಿಯ ವೇತನ ಶ್ರೇಣಿ ಮತ್ತು ಭತ್ಯೆಗಳನ್ನು ಪರಿಷ್ಕರಿಸಲು ಅಧಿಕಾರಿಗಳ ವೇತನ ಸಮಿತಿಯನ್ನು ಇದೇ ವರ್ಷ ರಚಿಸುವುದಾಗಿ ಹೇಳಿದ್ದೇನೆ. ಅದರಂತೆ ಮಾಡಲಾಗುತ್ತದೆ. ಸರ್ಕಾರಿ ನೌಕರರ ಹಿತಾಸಕ್ತಿ ಈಡೇರಿಸುವ ಜವಾಬ್ದಾರಿ ನಮ್ಮದು, ಸೂಕ್ತ ಸಮಯದಲ್ಲಿ ಸಮಿತಿ ರಚಿಸಲಾಗುತ್ತದೆ ಎಂದು ಸಿಎಂ ಸ್ಪಷ್ಟಪಡಿಸಿದರು.

ಈ ವರ್ಷವೇ ಮೇಕೆದಾಟು ಆರಂಭ:ನೀರಾವರಿ ಇಲಾಖೆಯಡಿ ಕಾಂಗ್ರೆಸ್ ಇದ್ದಾಗಲೂ ಬಿಲ್​ಗಳು ಬಾಕಿ ಇರುತ್ತಿದ್ದವು, ಇದು ಹೊಸತೇನಲ್ಲ, ಈ ವರ್ಷದ ಬಿಲ್ ಬಾಕಿ ಇದೆ, ಇನ್ನು ಎರಡು ತಿಂಗಳು ಸಮಯ ಇದೆ. ಈ ಅವಧಿ ಮುಗಿಯುವ ಒಳಗೆ ಪಾವತಿ ಮಾಡಲಾಗುತ್ತದೆ. ಮೇಕೆದಾಟು ವಿಚಾರದಲ್ಲಿ ಅವರಿಗೆ ರಾಜಕೀಯ ಒಂದೇ ಗೊತ್ತಿರೋದು, ಯೋಜನೆಯ ಡಿಪಿಆರ್ ಅನುಮತಿಗೆ ಕೊನೆಯ ಸಭೆ ಇದೆ, ಅಲ್ಲಿ ಅನುಮತಿ ಸಿಕ್ಕ ನಂತರ ಪರಿಸರ ಇಲಾಖೆ ಒಪ್ಪಿಗೆ ಪಡೆಯಬೇಕಿದೆ. ಈ ವರ್ಷ ಮೇಕೆದಾಟು ಪ್ರಾರಂಭಿಸುವ ಇಚ್ಚಾಶಕ್ತಿ ಇದೆ, ಹಾಗಾಗಿಯೇ ಅನುದಾನದ ಕೊರತೆ ಆಗಬಾರದು ಎಂದು ಸಾವಿರ ಕೋಟಿ ಅನುದಾನ ಇರಿಸಲಾಗಿದೆ ಎಂದರು.

ಈ ವರ್ಷ ಕಲ್ಯಾಣ ಕರ್ನಾಟಕಕ್ಕೆ ಕೊಟ್ಟ ಮೂರು ಸಾವಿರ ಕೋಟಿ ಅನುದಾನ ಬಳಕೆಗೆ ಎರಡು ತಿಂಗಳಿನಲ್ಲಿ ಕ್ರಿಯಾಯೋಜನೆ ಕೊಡಲು ಸೂಚಿಸಿದ್ದೇನೆ. ಘೋಷಿತ ಅನುದಾನ ಖರ್ಚು ಮಾಡಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತದೆ, ಯಾವುದೇ ಅನುದಾನ ಖರ್ಚಾಗದೆ ಉಳಿಯದಂತೆ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.

ಮಠಗಳನ್ನು ಮರೆತಿಲ್ಲ:ಈ ಬಾರಿಯ ಬಜೆಟ್​​ನಲ್ಲಿ ಮಠಗಳನ್ನು ಬಿಟ್ಟಿಲ್ಲ, ಶೈಕ್ಷಣಿಕ ಸೇವೆ ಕೊಡುತ್ತಿರುವ ಎಸ್​ಸಿ-ಎಸ್​ಟಿ, ಸಾಮಾನ್ಯ ವರ್ಗದ ಮಠಕ್ಕೂ ಕಾಲ ಕಾಲಕ್ಕೆ ಅಗತ್ಯಕ್ಕೆ ತಕ್ಕ ಅನುದಾನ ಕೊಡಲಾಗುತ್ತದೆ ಎಂದರು.

ಸಿದ್ದುಗೆ ಟಾಂಗ್:ಸಿದ್ದರಾಮಯ್ಯಗೆ ಎಲ್ಲಾ ಗೊತ್ತಿದೆ. ಯಾವ ಇಲಾಖೆಗೆ ಎಷ್ಟು ಹಣ ಹೋಗಲಿದೆ ಎಂದು ಅವರಿಗೆ ಗೊತ್ತಿದೆ, ಆದರೂ ಅವರು ಪ್ರಶ್ನೆ ಮಾಡುತ್ತಿರುವುದು ಸೋಜಿಗ ಎಂದು ವಲಯವಾರು ಬಜೆಟ್ ಟೀಕಿಸಿದ ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ಟಾಂಗ್ ನೀಡಿದರು.

ಬೆಂಗಳೂರು ಅಭಿವೃದ್ಧಿಗೆ ಕೊಡುತ್ತಿರುವ ಆರು ಸಾವಿರ ಕೋಟಿಯಲ್ಲಿ ಶೇ. 50 ರಷ್ಟು ಈ ವರ್ಷವೇ ಬಳಕೆ ಮಾಡಲಾಗುತ್ತದೆ. ಈ ಬಾರಿ ಅಬಕಾರಿ ತೆರಿಗೆ ಹೆಚ್ಚು ಮಾಡಲ್ಲ, ಅದರ ಬದಲು ಸೋರಿಕೆ ತಡೆದು, ಹೊರರಾಜ್ಯದ ಅಕ್ರಮ ಮದ್ಯಕ್ಕೆ ಕಡಿವಾಣ ಹಾಕಿ ಆದಾಯ ವೃದ್ದಿ ಮಾಡಲಾಗುತ್ತದೆ ಎಂದು ಸಿಎಂ ತಿಳಿಸಿದರು.

Last Updated : Mar 4, 2022, 6:48 PM IST

ABOUT THE AUTHOR

...view details