ಬೆಂಗಳೂರು:ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ನಿಧನಕ್ಕೆ ಸಿಎಂ ಬೊಮ್ಮಾಯಿ ಸೇರಿ ಸಚಿವರು, ಬಿಜೆಪಿ ಮುಖಂಡರು, ಕಾಂಗ್ರೆಸ್ ಮುಖಂಡರು, ಜೆಡಿಎಸ್ ಮುಖಂಡರು ಕಂಬನಿ ಮಿಡಿದಿದ್ದಾರೆ.
ಸಿಎಂ ಸಂತಾಪ:ಸಮನ್ವಯದ ಪ್ರವಚನಕಾರರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ ಅವರು ಇಂದು ಮುಂಜಾನೆ ನಿಧನರಾದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ. ಸಮಾಜದಲ್ಲಿ ಸಾಮರಸ್ಯದ ಬೀಜ ಬಿತ್ತಲು ಶ್ರಮಿಸಿದ ಅವರ ದಿವ್ಯಾತ್ಮಕ್ಕೆ ದೇವರು ಶಾಂತಿ ನೀಡಲಿ. ಈ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಅಂತಾ ಸಿಎಂ ಕಂಬನಿ ಮಿಡಿದಿದ್ದಾರೆ. ಇದೇ ವೇಳೆ ಇಬ್ರಾಹಿಂ ಸುತಾರ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಸಿಎಂ ಸೂಚಿಸಿದರು.
ಯಡಿಯೂರಪ್ಪ ಸಂತಾಪ:ನಾಡಿನ ಭಾವೈಕ್ಯತೆಯ ರಾಯಭಾರಿಯಂತಿದ್ದ ಪದ್ಮಶ್ರೀ ಇಬ್ರಾಹಿಂ ಸುತಾರ ಅವರು ಇಂದು ವಿಧಿವಶರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಧರ್ಮ, ಸೂಫಿ ಪರಂಪರೆಗಳ ಪ್ರವಚನಗಳ ಮೂಲಕ ಸಾಮರಸ್ಯಕ್ಕಾಗಿ ಅವರು ಶ್ರಮಿಸಿದ್ದರು. ಅವರಿಗೆ ಸದ್ಗತಿ ಪ್ರಾರ್ಥಿಸುತ್ತಾ, ಅವರ ಕುಟುಂಬ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಕೋರುತ್ತೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಕಟೀಲ್ ಸಂತಾಪ: ಪದ್ಮಶ್ರೀ ಪುರಸ್ಕೃತರಾದ ಇಬ್ರಾಹಿಂ ಸುತಾರ ಇನ್ನಿಲ್ಲವೆಂಬುವುದು ತುಂಬಾ ನೋವಿನ ವಿಷಯವಾಗಿದೆ. ಶ್ರೀಯುತರ ಆತ್ಮಕ್ಕೆ ಸದ್ಗತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಶ್ರೀಯುತರು ತಮ್ಮ ಜೀವನದುದ್ದಕ್ಕೂ ಜಾತಿ ಮತ ಪಂಥಗಳೆಲ್ಲಕ್ಕಿಂತ ಮನುಷ್ಯತ್ವ, ಸಹೋದರತೆ, ಸೌಹಾರ್ದತೆ ಮುಖ್ಯ ಎಂದು ಸಾರಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಮರಿಸಿದ್ದಾರೆ.
ದೇವೇಗೌಡರ ಸಂತಾಪ:ಕೃಷ್ಣೆಯ ನಾಡಿನ ಕಬೀರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರವಚನಕಾರ ಇಬ್ರಾಹಿಂ ಸುತಾರ ಅವರು ಹೃದಯಾಘಾತದಿಂದ ದೈವಾದೀನರಾದ ಸುದ್ದಿ ತಿಳಿದು ಮನಸ್ಸಿಗೆ ಅತೀವ ದುಃಖ ಉಂಟಾಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕಂಬನಿ ಮಿಡಿದಿದ್ದಾರೆ. ಕುರಿತು ಟ್ವೀಟ್ ಮಾಡಿರುವ ಅವರು, ಭಜನೆ, ಪ್ರವಚನ, ಸಂವಾದಗಳ ಮೂಲಕ ಹಿಂದೂ–ಮುಸ್ಲಿಮರ ನಡುವೆ ಭಾವೈಕ್ಯತೆಯ ಕಂಪು ಪಸರಿಸಿದ್ದ ಅವರ ದಿವ್ಯಾತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸಿದ್ದಾರೆ.
ಸಚಿವ ಗೋವಿಂದ ಕಾರಜೋಳ: ಪದ್ಮಶ್ರೀ ಪುರಸ್ಕೃತ ಶ್ರೀ ಇಬ್ರಾಹಿಂ ಸುತಾರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ತತ್ತ್ವ ಪದಗಳು, ಭಾವೈಕ್ಯತೆಯ ಸಂದೇಶ ಸಾರುವ ಮೂಲಕ ಸರ್ವಧರ್ಮ ಸಾಮರಸ್ಯದ ಸೌಹಾರ್ದದ ಪ್ರತೀಕವಾಗಿದ್ದ ಸಂತ ಕಬೀರರೆಂಬ ನಾಮವನ್ನು ಅನ್ವರ್ಥಕಗೊಳಿಸಿದ್ದ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ರವರು ಪೈಗಂಬರವಾಸಿಯಾದದ್ದರಿಂದ ಸರ್ವಜನಾಂಗದ ಶಾಂತಿಯ ತೋಟವಾಗಿರುವ ಕನ್ನಡ ನಾಡು ಬಡವಾಗಿದೆ ಎಂದಿದ್ದಾರೆ.
ನಿಜಗುಣ ಶಿವಯೋಗಿಗಳ ಶಾಸ್ತ್ರ, ಭಗವದ್ಗೀತೆಯ ಸಾರ, ತತ್ವ ಪದಗಳ ಅರಿವು, ತಮ್ಮ ಜೀವನವನ್ನು ವಿಸ್ತಾರಗೊಳಿಸಿತು ಎಂದು ನಂಬಿದ್ದ ಸಂತ ಸುತಾರರವರು 1970 ರಲ್ಲಿ ಭಾವೈಕ್ಯದ ಜನಪದ ಸಂಗೀತ ಮೇಳವನ್ನು ಆಯೋಜಿಸಿ ಕನ್ನಡ ನಾಡು ಮತ್ತು ಮಹಾರಾಷ್ಟ್ರದಲ್ಲಿ ಭಾವೈಕ್ಯ ಮತ್ತು ತತ್ತ್ವಪದಗಳ ಚೈತ್ರ ಯಾತ್ರೆಯನ್ನು ಕೈಗೊಂಡಿದ್ದರು ಎಂದು ಹೇಳಿದರು.