ಬೆಂಗಳೂರು: ಸೋಲಾರ್ ಗಾಂಧಿ ಎಂದೇ ಖ್ಯಾತಿ ಪಡೆದಿರುವ ಶಿಕ್ಷಣತಜ್ಞ, ಸಂಶೋಧಕ ಪ್ರೊ. ಚೇತನ್ ಸಿಂಗ್ ಸೋಲಂಕಿ ತಮ್ಮ ಎನರ್ಜಿ ಸ್ವರಾಜ್ ಯಾತ್ರೆಯನ್ನು ಕೈಗೊಂಡಿದ್ದಾರೆ. 11 ವರ್ಷಗಳ ಈ ಯಾತ್ರೆಯು ಮಧ್ಯಪ್ರದೇಶ ರಾಜ್ಯದಿಂದ ಶುರುವಾಗಿದ್ದು, ಹತ್ತಾರು ರಾಜ್ಯಗಳಲ್ಲಿ ಯಾತ್ರೆಯನ್ನು ಮುಗಿಸಿ ಇದೀಗ ಬೆಂಗಳೂರಿಗೆ ಆಗಮಿಸಿದ್ದಾರೆ. ಅಂದಹಾಗೇ, ಪ್ರಸ್ತುತ IIT ಬಾಂಬೆಯಿಂದ ವೇತನರಹಿತ ರಜೆಯಲ್ಲಿರುವ ಇವರು ನವೆಂಬರ್ 2020 ರಿಂದ ಸೋಲಾರ್ ಅಳವಡಿಸಿರುವ ಬಸ್ ಮೂಲಕ 2030 ರವರೆಗೆ 11 ವರ್ಷಗಳ ಕಾಲ ಎನರ್ಜಿ ಸ್ವರಾಜ್ ಯಾತ್ರೆಯನ್ನು ಕೈಗೊಂಡಿದ್ದಾರೆ.
ಶೇಕಡಾ 100 ಸೌರಶಕ್ತಿಯನ್ನು ಅಳವಡಿಸಿಕೊಳ್ಳುವತ್ತ ಸಾರ್ವಜನಿಕ ಆಂದೋಲನವನ್ನು ಸೃಷ್ಟಿಸುವ ಉದ್ದೇಶದಿಂದ ಈ ಶಕ್ತಿ ಸ್ವರಾಜ್ ಯಾತ್ರೆಯನ್ನು ವಿನ್ಯಾಸಗೊಳಿಸಲಾಗಿದೆ. ಇವರನ್ನು ಮಧ್ಯಪ್ರದೇಶ ಸರ್ಕಾರವು ಸೌರಶಕ್ತಿಯ ರಾಯಭಾರಿಯಾಗಿ ಗೌರವಿಸಿದೆ. ಗಾಂಧಿಯವರ ಆದರ್ಶಗಳನ್ನು ಅನುಸರಿಸಿರುವ ಸೋಲಂಕಿ 'ಎನರ್ಜಿ ಸ್ವರಾಜ್' ಎಂದು ಕರೆದಿದ್ದಾರೆ.
ಯೋಜನೆಯ ಮೂಲಕ ಅವರು 7.5 ಮಿಲಿಯನ್ ಕುಟುಂಬಗಳನ್ನು ತಲುಪಿದ್ದಾರೆ. 2019 ರ ಅವಧಿಯಲ್ಲಿ ಪ್ರೊಫೆಸರ್ ಸೋಲಂಕಿ ಸೌರಶಕ್ತಿಯ ಸಂದೇಶವನ್ನು ಹರಡಲು ಪ್ರಪಂಚದಾದ್ಯಂತ 30 ದೇಶಗಳನ್ನು ಸುತ್ತಿದರು. ಅವರ ಚಾಲ್ತಿಯಲ್ಲಿರುವ ಎನರ್ಜಿ ಸ್ವರಾಜ್ ಯಾತ್ರೆಯಲ್ಲಿ ಈಗಾಗಲೇ 17,000 ಕಿಲೋಮೀಟರ್ಗಳನ್ನು ಪ್ರಯಾಣಿಸಿದ್ದಾರೆ. 7 ರಾಜ್ಯಗಳಲ್ಲಿ 55,000 ಕ್ಕೂ ಹೆಚ್ಚು ಜನರನ್ನು ತಲುಪಿದ್ದಾರೆ. 11 ವರ್ಷಗಳ ಯಾತ್ರೆಯು ದೇಶಾದ್ಯಂತ 5 - 7 ಬಾರಿ ಪ್ರಯಾಣಿಸುವ ನಿರೀಕ್ಷೆಯಿದೆ. ಈ ಯಾತ್ರೆಯು 100 ಕೋಟಿಗೂ ಹೆಚ್ಚು ಶಕ್ತಿ ಸಾಕ್ಷರತೆಯನ್ನು ತರಲು ಮತ್ತು 1 ಕೋಟಿ ಕುಟುಂಬಗಳನ್ನು ಸೌರಶಕ್ತಿಯ ಮೇಲೆ 100% ಬದಲಾಯಿಸಲು ಉತ್ತೇಜಿಸುವ ಗುರಿಯನ್ನು ಹೊಂದಿದೆ.