ಬೆಂಗಳೂರು: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದಿದ್ದಾರೆ. ಜೆ.ಸಿ. ನಗರದ ವಾರ್ಡ್-46ರ ಎಂ.ಆರ್.ಪಾಳ್ಯದ ನಗರ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆದಿದ್ದಾರೆ. ಫೆ. 9ರಂದು ಕೋವಿಶೀಲ್ಡ್ ಲಸಿಕೆ ಪಡೆದಿದ್ದು, ಇಂದು 28 ದಿನಗಳು ಕಳೆದ ಹಿನ್ನೆಲೆ ಮತ್ತೆ ಕೋವಿಶೀಲ್ಡ್ ಲಸಿಕೆ ಪಡೆದಿದ್ದಾರೆ.
ಲಸಿಕೆ ಪಡೆದ ಬಳಿಕ ಮಾತನಾಡಿದ ಆಯುಕ್ತರು, ನಗರದಲ್ಲಿ ನಿತ್ಯ 75 ಸಾವಿರ ಮಂದಿಗೆ ಕೊರೊನಾ ವ್ಯಾಕ್ಸಿನ್ ಕೊಡಲು ಸಿದ್ಧತೆ ನಡೆದಿದೆ. ಹಿಂದೆ 30 ಸಾವಿರ ಮಂದಿಗೆ ಲಸಿಕೆ ಹಾಕಲಾಗುತ್ತಿತ್ತು. ನಿನ್ನೆ ಹಬ್ಬ ಇದ್ದ ಕಾರಣ ಕಡಿಮೆಯಾಗಿದೆ. 30 ಹಾಸಿಗೆಗಳಿರುವ ಆಸ್ಪತ್ರೆಗೆ ವಿಸ್ತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದಾದರೆ ಒಟ್ಟು 500 ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಬಹುದು. ಮುಂದಿನ ದಿನಗಳಲ್ಲಿ 1 ಲಕ್ಷ ಜನರಿಗೆ ಲಸಿಕೆ ನೀಡುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದರು. ಬಡವರು, ಆನ್ಲೈನ್ ರಿಜಿಸ್ಟ್ರೇಶನ್ ಮಾಡಲು ಆಗದವರಿಗೂ ಲಸಿಕೆ ನೀಡಲಾಗುತ್ತದೆ. ಆಶಾ ಕಾರ್ಯಕರ್ತೆಯರು ಜನರಿರುವ ಪ್ರದೇಶಕ್ಕೆ ಹೋಗಿ ಲಸಿಕೆ ಕೊಡುವ ಕೆಲಸ ಆಗ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಲಸಿಕೆ ಹಾಕಿಸ್ತಾ ಇದ್ದಾರೆ ಎಂದರು.
ಕೊರೊನಾ ಪ್ರಕರಣದಲ್ಲಿ ನಿತ್ಯ ಏರಿಕೆ:
ಕೊರೊನಾ ಪ್ರಕರಣದಲ್ಲಿ ನಿತ್ಯ ಏರಿಕೆ ಕಾಣುತ್ತಿದ್ದು, ಡಿಸೆಂಬರ್, ಜನವರಿ, ಫೆಬ್ರವರಿಗಿಂತ ಮಾರ್ಚ್ನಲ್ಲಿ ಕೇಸ್ಗಳ ಸಂಖ್ಯೆ ಹೆಚ್ಚಳ ಕಂಡಿದೆ. ಡಿಸೆಂಬರ್ನಲ್ಲಿ ದಿನವೊಂದಕ್ಕೆ 600 ಪ್ರಕರಣ ಇತ್ತು. ಜನವರಿಯಲ್ಲಿ ಸರಾಸರಿ 333ಕ್ಕೆ ಇಳಿಕೆಯಾಗಿತ್ತು. ಫೆಬ್ರವರಿಯಲ್ಲಿ ಸರಾಸರಿ 243 ಪ್ರಕರಣ ಮಾತ್ರ ಇತ್ತು. ಆದ್ರೆ ಮಾರ್ಚ್ನಲ್ಲಿ ಸರಾಸರಿ 333 ಕೇಸ್ಗಳು ಇವೆ. ಇದೇ ವಿಚಾರವಾಗಿ ಇಂದು ವಿಶೇಷ ಸಭೆ ನಡೆಸಲಾಗಿದೆ ಎಂದರು.
ಕೊರೊನಾ ಪಾಸಿಟಿವ್ ಆದ್ರೆ 15 ದಿನ ಮುಂಚಿತವಾಗಿ ಸಂಪರ್ಕದಲ್ಲಿದ್ದವರನ್ನ ಗುರುತಿಸಲಾಗ್ತಿದೆ. ಪ್ರಾಥಮಿಕ, ದ್ವಿತೀಯ ಸಂಪರ್ಕ ಕಂಡು ಹಿಡಿಯಲು ಸೂಚನೆ ನೀಡಲಾಗಿದೆ. ಮಾಲ್, ಸ್ಕೂಲ್ಸ್, ಕಾಲೇಜು, ಹೋಟೆಲ್, ಥಿಯೇಟರ್, ಮಾರುಕಟ್ಟೆ ಮೇಲೆ ನಿಗಾ ಇಡಲಾಗುತ್ತಿದೆ ಎಂದರು.