ಬೆಂಗಳೂರು :ಕಾಂಗ್ರೆಸ್ನ ಬಹಿಷ್ಕಾರ, ಜೆಡಿಎಸ್ನ ಸಭಾತ್ಯಾಗದ ನಡುವೆಯೂ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ 2.44 ಲಕ್ಷ ಕೋಟಿ ರೂ. ಬಜೆಟ್ಗೆ ಇಂದು ವಿಧಾನಸಭೆಯ ಅಂಗೀಕಾರ ಪಡೆದುಕೊಂಡಿದ್ದಾರೆ.
ಮಾರ್ಚ್5 ರಂದು ವಿಧಾನಸಭೆಯಲ್ಲಿ 2.37 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ್ದ ಯಡಿಯೂರಪ್ಪ ಅವರು ಇಂದು ಅಂಗೀಕಾರಕ್ಕೆ ಮನವಿ ಮಾಡಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸದನದಲ್ಲಿ ಹಾಜರಿರಲಿಲ್ಲ. ಕಾಂಗ್ರೆಸ್ ಪೂರ್ಣ ಪ್ರಮಾಣದ ಬಜೆಟ್ಗೆ ಅಂಗೀಕಾರ ಪಡೆಯುವುದು ಬೇಡ. ವಿಶ್ವಾದ್ಯಂತ ಕೊರೊನಾ ಸೋಂಕಿನ ಆತಂಕ ಕಾಡುತ್ತಿದೆ. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ನಾವು ಅಧಿವೇಶನ ನಡೆಸಿ ಚರ್ಚೆ ಮಾಡುತ್ತಾ ಕುಳಿತರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಹಾಗಾಗಿ ಪೂರ್ಣ ಪ್ರಮಾಣದ ಬಜೆಟ್ ಬದಲಾಗಿ ಮೂರು ತಿಂಗಳ ಲೇಖಾನುದಾನ ಪಡೆದುಕೊಳ್ಳಲಿ. ಮುಂದಿನ ದಿನಗಳಲ್ಲಿ ಬೇಕಿದ್ದರೆ ಅಧಿವೇಶನ ಕರೆದು ಬೇಡಿಕೆಗಳ ಮೇಲೆ ಸುದೀರ್ಘ ಚರ್ಚೆ ನಡೆಸಿ ಆನಂತರ ಪೂರ್ಣ ಪ್ರಮಾಣದ ಬಜೆಟ್ಗೆ ಅಂಗೀಕಾರ ಪಡೆದುಕೊಳ್ಳಲಿ ಎಂದು ವಿರೋಧ ಪಕ್ಷಗಳ ನಾಯಕರು ಸಲಹೆ ನೀಡಿದ್ದರು.
ಆದರೆ ಇದಕ್ಕೆ ಸರ್ಕಾರ ಒಪ್ಪಿರಲಿಲ್ಲ. ಪೂರ್ಣ ಪ್ರಮಾಣದ ಬಜೆಟ್ಗೆ ಅಂಗೀಕಾರ ಪಡೆದುಕೊಳ್ಳುತ್ತೇವೆ ಎಂದು ಪಟ್ಟು ಹಿಡಿದಿತ್ತು. ಕೊನೆಗೆ ಕಾಂಗ್ರೆಸ್ ಪಕ್ಷವೇ ಒಂದು ಹೆಜ್ಜೆ ಹಿಂದೆ ಸರಿದು ಪೂರ್ಣ ಪ್ರಮಾಣದ ಬಜೆಟ್ಗೆ ಅಂಗೀಕಾರ ಪಡೆದುಕೊಳ್ಳಲಿ. ಆದರೆ ಇದೇ ದಿನವೇ ಎಲ್ಲಾ ಕಲಾಪಗಳನ್ನು ಪೂರ್ಣಗೊಳಿಸಿ ಅಧಿವೇಶನ ಮುಂದೂಡಿ ಎಂದು ನಿನ್ನೆ ನಡೆದ ಕಲಾಪ ಸಲಹಾ ಸಮಿತಿಯ ಸಭೆಯಲ್ಲಿ ಒತ್ತಾಯ ಮಾಡಿತ್ತು. ಆದರೆ, ಅದಕ್ಕೆ ಒಪ್ಪದ ಸರ್ಕಾರ ಇಂದು ಅಧಿವೇಶನ ನಡೆಸಿ, ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಬಳಿಕ ಬಜೆಟ್ ಅಂಗೀಕಾರ ಪಡೆದುಕೊಂಡು ಅಧಿವೇಶನ ಮುಂದೂಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.