ಬೆಂಗಳೂರು: ಬೆಸ್ಕಾಂ ಮತ್ತು ಪಾಲಿಕೆಯ ನಿರ್ಲಕ್ಷ್ಯಕ್ಕೆ ಮತ್ತೊಂದು ಅವಘಡ ಸಂಭವಿಸಿದ್ದು, ವಿದ್ಯುತ್ ತಂತಿ ಸ್ಪರ್ಶಿಸಿ ಓರ್ವ ಬಾಲಕ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಬೆಸ್ಕಾಂ, ಪಾಲಿಕೆ ನಿರ್ಲಕ್ಷ್ಯಕ್ಕೆ ಮತ್ತೊಂದು ಅವಘಡ: ಸಾವು ಬದುಕಿನ ನಡುವೆ ಬಾಲಕನ ಹೋರಾಟ
ನೆಲಕ್ಕೆ ಬಿದ್ದಿದ್ದ ಹೈ ಟೆನ್ಷನ್ ವೈರ್ ತುಳಿದ ಪರಿಣಾಮ ಬಾಲಕನೋರ್ವ ಗಂಭೀರವಾಗಿ ಗಾಯಗೊಂಡಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.
14 ವರ್ಷದ ಲಿಖಿತ್ ಎಂಬ ಬಾಲಕ ವಿದ್ಯತ್ ತಂತಿ ಸ್ಪರ್ಶದಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಮತ್ತಿಕೆರೆಯ ನೇತಾಜಿ ಸರ್ಕಲ್ ಬಳಿ ಕೇಬಲ್ ವೈರ್ ನೊಂದಿಗೆ ಹೈ ಟೆನ್ಷನ್ ವೈರ್ ಕೂಡ ನೆಲಕ್ಕೆ ಬಿದ್ದಿದೆ. ಅಲ್ಲೆ ಕ್ರಿಕೆಟ್ ಆಡುತ್ತಿದ್ದ ಲಿಖಿತ್ ವೈರ್ ತುಳಿದಿದ್ದರಿಂದ ಕರೆಂಟ್ ಶಾಕ್ ಹೊಡೆದಿದೆ.
ಘಟನೆಯಿಂದ ಶೇ. 40ರಷ್ಟು ದೇಹ ಸುಟ್ಟು ಹೋಗಿದ್ದು, ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೆ ವಿದ್ಯುತ್ ತಂತಿ ಸ್ಪರ್ಶಿಸಿ ಓರ್ವ ಬಾಲಕ ಸಾವಿಗೀಡಾಗಿದ್ದ.