ಬೆಂಗಳೂರು: ಆಟದಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ. ಆಟವಾಡೋದು ಬಹಳ ಮುಖ್ಯ. ಆದರೆ, ಆಡುವಾಗ ಗೆಲ್ಲಲೆಂದೇ ಆಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ರಾಜಧಾನಿಯಲ್ಲಿ ಮುಕ್ತಾಯವಾದ 70ನೇ ಅಖಿಲ ಭಾರತ ಹಾಕಿ ಪೊಲೀಸ್ ಚಾಂಪಿಯನ್ ಶಿಪ್ನಲ್ಲಿ ಗೆಲುವು ಸಾಧಿಸಿ ತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಯಾವುದೇ ಕ್ರೀಡೆಯಲ್ಲಿ ಆಡುವವರು ಸೋಲಬೇಕೆಂದು ಆಡಬಾರದು. ಸೋಲಿಗೆ ಹೆದರಲೂಬಾರದು, ಯಾರು ಸೋಲಲು ಹೆದರುವುದಿಲ್ಲವೋ ಅವರೇ ಗೆಲ್ಲುತ್ತಾರೆ. ಆಟದಿಂದ ಶಿಸ್ತು ಬೆಳೆಯುತ್ತದೆ, ವ್ಯಕ್ತಿತ್ವ ವಿಕಸನವಾಗುತ್ತದೆ ಮತ್ತು ಕ್ರೀಡಾ ಮನೋಭಾವವೂ ಬೆಳೆಯುತ್ತದೆ. ಜೀವನಕ್ಕೆ ಕೂಡ ಇದು ಅನ್ವಯವಾಗುತ್ತದೆ ಎಂದರು.
70 ನೇ ಅಖಿಲ ಭಾರತ ಹಾಕಿ ಪೊಲೀಸ್ ಚಾಂಪಿಯನ್ ಶಿಪ್ ಸೋತವರು ಮುಂದಿನ ಬಾರಿ ಗೆಲ್ಲಲು ಪ್ರಯತ್ನ ಮಾಡಬೇಕು, ಗೆದ್ದವರು ತಮ್ಮ ಸ್ಪೂರ್ತಿಯನ್ನು ಕಾಯ್ದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಚಾಂಪಿಯನ್ಶಿಪ್ನಲ್ಲಿ ವಿಜೇತರಾದ ಪಂಜಾಬ್ ಪೊಲೀಸ್ ಹಾಕಿ ತಂಡ ಹಾಗೂ ಭಾಗವಹಿಸಿದ ವಿವಿಧ ರಾಜ್ಯಗಳ ಹಾಕಿ ಪಟುಗಳಿಗೆ ಈ ಸಂದರ್ಭದಲ್ಲಿ ಅಭಿನಂದಿಸಿದರು.
ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ನಾರಾಯಣಗೌಡ, ಶಾಸಕ ಎನ್.ಎ.ಹ್ಯಾರಿಸ್, ನಟ ಶಿವರಾಜ್ ಕುಮಾರ್, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ : ನಾಲ್ಕನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ವಿರುಷ್ಕಾ ಜೋಡಿ