ಬಾಗಲಕೋಟೆ:ಉತ್ತರ ಕರ್ನಾಟಕದಲ್ಲಿ ಹರಿಯುತ್ತಿರುವ ನದಿಗಳಿಗೆ ಕಾಳಿ ನದಿ ಜೋಡಣೆ ವಿಷಯ ಕುರಿತು, ನಿರಾಣಿ ಫೌಂಡೇಶನ್ ವತಿಯಿಂದ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವ ಮೂಲಕ ನದಿ ಜೋಡಣೆಗೆ ಒತ್ತಡ ತರಲಾಗುತ್ತಿದೆ.
ಸ್ವಾಮಿಜೀಗಳು ಸೇರಿದಂತೆ ವಿವಿಧ ಮುಖಂಡರು, ಸಂಸದರು ಮೂಲಕ ಕೇಂದ್ರದ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ, ಅಮೃತಧಾರೆ ಎಂಬ ಹೆಸರಿನ ಈ ಯೋಜನೆಗಳ ಸಾಕಾರಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿತು.
ಕಾಳಿ ನದಿಗೆ ಕಟ್ಟಲಾಗಿರುವ ಸೂಪಾ ಅಣೆಕಟ್ಟು ಹಾಗೂ ಕೃಷ್ಣ ನದಿಗಳ ಜಲಾನಯನ ಪ್ರದೇಶಗಳಲ್ಲಿ ಸತತ ಮೂರು ತಿಂಗಳು ಅಧ್ಯಯನ ನಡೆಸಿ ಸಿದ್ದಪಡಿಸಲಾದ ನೀಲಿನಕ್ಷೆಯೊಂದಿಗೆ ಕೇಂದ್ರ ಸರ್ಕಾರದ ಸಚಿವರಿಗೆ ಮನವಿ ಸಲ್ಲಿಸಿತು.
ಉಪಯುಕ್ತವಾದ ಈ ಯೋಜನೆಯ ಬಗ್ಗೆ ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಸಿ, ಸೂಕ್ತ ಕ್ರಮ ತೆಗೆದುಕೊಳ್ಳುವ ಬಗ್ಗೆ ಸಚಿವರು ಭರವಸೆ ನೀಡಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಉಪಯುಕ್ತವಾಗಿರುವ ಈ ಯೋಜನೆ ಸಮಗ್ರ ವರದಿ ರಾಜ್ಯ ಸರ್ಕಾರಕ್ಕೆ ನೀಡಲಾಗುವುದು. ಮುಂದಿನ ವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಕಾಳಿ ನದಿ ಜೋಡಣೆಯ ಬಗ್ಗೆ ಮಾಹಿತಿ ನೀಡಿ, ಯೋಜನೆಗೆ ಚಾಲನೆ ನೀಡುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಎಂಆರ್ಎನ್ ನಿರಾಣಿ ಫೌಂಡೇಶನ್ನ ಮುಖ್ಯಸ್ಥ ಸಂಗಮೇಶ ನಿರಾಣಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಶಾಸಕ ಮುರಗೇಶ ನಿರಾಣಿ ಜೊತೆಗೆ ಸಂಸದರಾದ ಜಿ.ಎಂ ಸಿದ್ದೇಶ್ವರ, ಶಿವಕುಮಾರ ಉದಾಸಿ, ಶೋಭಾ ಕರಂದ್ಲಾಜೆ, ಬಿ.ವೈ ರಾಘವೇಂದ್ರ, ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ, ಪ್ರಭಾಕರ ಕೋರೆ ಸೇರಿದಂತೆ ರಾಜನಹಳ್ಳಿ ವಾಲ್ಮೀಕಿ ಪೀಠದ ಶ್ರೀಗಳು, ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀಗಳು, ಭೋವಿ ಮಠದ ಸಿದ್ದಾರಾಮೇಶ್ವರ ಶ್ರೀಗಳು ಸೇರಿದಂತೆ ಇತರ ಸ್ವಾಮಿಜೀಗಳ ನೇತೃತ್ವದಲ್ಲಿ ಕೇಂದ್ರ ಸಚಿವರಾದ ಸದಾನಂದಗೌಡ ಅವರಿಗೂ ಭೇಟಿ ಆಗಿ ಮನವಿ ಸಲ್ಲಿಸಿದ್ದಾರೆ.