ಬಾಗಲಕೋಟೆ: ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ಪ್ರವಾಹದಿಂದ ತಲಾ ಒಂದೂಂದು ನದಿಗಳಲ್ಲಿ ಒಬ್ಬರಂತೆ ಪ್ರವಾಹದಿಂದ ಮೂವರು ಮೃತ ಪಟ್ಟಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಭೀಕರ ಪ್ರವಾಹದಲ್ಲಿ ಸಾವನ್ನಪ್ಪಿರುವವರು ಮುಧೋಳ ತಾಲೂಕಿನ ಮಾಚಕನೂರ ಗ್ರಾಮ ಜಲಾವೃತಗೊಂಡಿತ್ತು. ಈ ವೇಳೆ ಮನೆಯಲ್ಲೇ ಸಿಲುಕಿಕೊಂಡಿದ್ದ ವಿಠ್ಠಲ ಯಮನಪ್ಪ ದೇವರಮನಿ (38) ಎಂಬಾತ ಮೃತಪಟ್ಟಿದ್ದು, ರವಿವಾರ ನೀರು ಕಡಿಮೆಯಾದ ಬಳಿಕ ಶವ ಹೊರ ಕಾಣಿಸಿಕೊಂಡಿದೆ. ಮಾಚಕನೂರ ಗ್ರಾಮಕ್ಕೆ ಕಳೆದ ಆ. 8 ರಂದು ನೀರು ನುಗ್ಗಿದ್ದು, ಅಂದಿನಿಂದ ವಿಠ್ಠಲ ಕಾಣೆಯಾಗಿದ್ದ. ಆತ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ ಎಂದು ಮನೆಯವರು ಭಾವಿಸಿದ್ದರು. ಆದರೆ, ನೀರು ಸರಿದ ಮೇಲೆ, ಮನೆಗೆ ಹೋದಾಗ, ವಿಠ್ಠಲನ ಶವ ಕಂಡು ಬಂದಿದೆ.
ಕೃಷ್ಣಾ ನದಿ ಪ್ರವಾಹದಿಂದ ಮುತ್ತೂರಿನ ಠಕ್ಕಪ್ಪ ಯರಗಾವಿ (30) ಎಂಬಾತ ಮೃತಪಟ್ಟಿದ್ದು, ಮನೆಯ ಸಾಮಗ್ರಿಗಳೊಂದಿಗೆ ಪರಿಹಾರ ಕೇಂದ್ರಕ್ಕೆ ತೆರಳುವ ವೇಳೆ, ಹಾವು ಕಚ್ಚಿ ಅಸ್ವಸ್ತಗೊಂಡಿದ್ದ. ಆತನನ್ನು ವಿಜಯಪುರದ ಬಿಎಲ್ಡಿಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಇನ್ನು ಮಲಪ್ರಭಾ ನದಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ತನ್ನ ಆಡು ತರಲು ಹೋಗಿದ್ದ ಬಾದಾಮಿ ತಾಲೂಕು ಕರ್ಲಕೊಪ್ಪ ಗ್ರಾಮದ ಭೀಮಪ್ಪ ನಿಂಗಪ್ಪ ಜಾಲಿಕಟ್ಟಿ (58) ಪ್ರವಾಹ ಕಂಡು, ಹೃದಯಾಘಾತಕ್ಕೊಳಗಾಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದ. ಕೂಡಲೇ ಆತನ ಸಂಬಂಧಿಕರು, ಉಗಲವಾಟ ಗ್ರಾಮಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ನೀರಿನಲ್ಲಿ ಕುಸಿದ ಬಿದ್ದ ವೇಳೆ ಕಲುಷಿತ ನೀರೂ ಕುಡಿದಿದ್ದ. ಹೀಗಾಗಿ ಭೀಮಪ್ಪ ಮೃತಪಟ್ಟಿದ್ದಾರೆ.
ಒಟ್ಟಾರೆ11 ದಿನಗಳ ಭೀಕರ ಪ್ರವಾಹದಲ್ಲಿ ಮೂರು ನದಿಗಳು ಮೂವರನ್ನು ಬಲಿ ಪಡೆದಿವೆ. ಮೂವರ ಕುಟುಂಬಕ್ಕೂ ಪ್ರವಾಹ ಪರಿಹಾರ ನಿಧಿಯಿಂದ ತಲಾ 4 ಲಕ್ಷ ಹಾಗೂ ಸಿಎಂ ಪರಿಹಾರ ನಿಧಿಯಿಂದ ತಲಾ 1 ಲಕ್ಷ ಸೇರಿ ಒಟ್ಟು 5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ.