ಬಾಗಲಕೋಟೆ: ಐತಿಹಾಸಿಕ ಕೇಂದ್ರ ಚಾಲುಕ್ಯರು ಆಳಿದ ಬಾದಾಮಿ ಪಟ್ಟಣವು ಇನ್ನು ಸಾಕಷ್ಟು ಅಭಿವೃದ್ಧಿ ಕಾಣಬೇಕಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಈ ಕ್ಷೇತ್ರದ ಶಾಸಕರಾದ ಬಳಿಕ, ಆಮೆ ಗತಿಯಲ್ಲಿ ಸಾಗುತ್ತಿದ್ದ ಕೆಲಸಗಳು ಈಗ ಭರದಿಂದ ಸಾಗುತ್ತಿದೆ.
ಇನ್ನು ಅಭಿವೃದ್ಧಿಕಾಣಬೇಕಿದೆ ಐತಿಹಾಸಿಕ ಕೇಂದ್ರ ಬಾದಾಮಿ ಆದರೆ ಇದಕ್ಕೂ ಮುಂಚೆ ಬೃಹತ್ ಯೋಜನೆಯೊಂದು ಮಾಡುವ ಮೂಲಕ ದೇಶ, ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.
2004 ರಲ್ಲಿ ಅಗಸ್ತ್ಯ ತೀರ್ಥ ಬಳಿ ಇರುವ ಸುಮಾರು 300 ಮನೆಗಳನ್ನು ಸ್ಥಳಾಂತರ ಮಾಡಿ, ಉದ್ಯಾನವನ, ಪಾರ್ಕಿಂಗ್ ಹಾಗೂ ಧ್ವನಿ ಬೆಳಕು ಕಾರಂಜಿ ಸೇರಿದಂತೆ ಇತರ ಅಭಿವೃದ್ಧಿ ಮಾಡುವ ಬಗ್ಗೆ ಚರ್ಚೆ ನಡೆದು ಸುಮಾರು 3 ಕೋಟಿ ರೂಗಳ ವೆಚ್ಚದ ಅಂದಾಜು ಯೋಜನೆ ತಯಾರಿಸಲಾಗಿತ್ತು. ಆಗಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಸರ್ಕಾರ, ಯುಕೆಪಿ ಆಯುಕ್ತರಾದ ಶಿವಾನಂದ ಜಾಮದಾರ ಅವರನ್ನು ವಿಶೇಷ ಅಧಿಕಾರಿಯಾಗಿ ನೇಮಕ ಮಾಡಿ, ಅಭಿವೃದ್ಧಿಯತ್ತ ಸಾಗುತ್ತಿತ್ತು. ಆದರೆ ಸ್ಥಳೀಯ ರಾಜಕೀಯ ಹಾಗೂ ಕೆಲ ಅಧಿಕಾರಿಗಳ ಅಸಡ್ಡೆಯಿಂದ ಸ್ಥಳಾಂತರ ಸ್ಥಗಿತಗೊಂಡಿತ್ತು. ನಂತರ ಪೂರ್ಣ ಸ್ಥಳಾಂತರ ಬದಲು ಕೇವಲ 90 ಮನೆಗಳನ್ನು ಮಾತ್ರ ಸ್ಥಳಾಂತರ ಮಾಡುವಂತೆ ಚರ್ಚೆ ನಡೆದು ಸರ್ಕಾರ ಹಣವೂ ಸಹ ಮಂಜೂರ ಮಾಡಿತು.ಆ ಹಣ ಈಗಲೂ ಬ್ಯಾಂಕಿನಲ್ಲಿಯೇ ಜಮಾ ಇದ್ದು,3 ಕೋಟಿ ಯಿಂದ ಬಡ್ಡಿ ಹಣ ಬಂದು ಈಗ 8 ಕೋಟಿ ಆಗಿದೆ. ಆದರೆ ಮನೆಗಳು ಮಾತ್ರ ಸ್ಥಳಾಂತರ ಆಗದೆ, ಅಭಿವೃದ್ಧಿ ಕಾಣದೆ ಹಾಗೆ ಉಳಿದಿದೆ.
ಅಗಸ್ತ್ಯ ತೀರ್ಥ ಹೊಂಡ, ಮ್ಯೂಜಿಯಮ್, ಶಿವಾಲಯದಿಂದ ಗುಹಾಲಯ ದೇವಾಲಯಕ್ಕೆ ಸಂಚಾರ ಮಾಡುವುದಕ್ಕೆ ಹಾಗೂ ಉದ್ಯಾನವನ ನಿರ್ಮಾಣಕ್ಕೆ ಅನುಕೂಲವಾಗುತ್ತದೆ. ಈಗ ಇದರ ಸಂಪೂರ್ಣ ಅಭಿವೃದ್ಧಿ ಮಾಡಬೇಕಾದರೆ ಸರ್ಕಾರ ದಿಂದ ಇದೇ ಕಾರ್ಯಕ್ಕೆ ವಿಶೇಷ ಅಧಿಕಾರಿಯನ್ನು ನೇಮಕ ಮಾಡಬೇಕು ಅದಕ್ಕಾಗಿ 25 ಕೋಟಿ ಬಿಡುಗಡೆ ಮಾಡಿಸಿ, ಕೇವಲ ಮನೆಗಳ ಸ್ಥಳಾಂತರ ಬಗ್ಗೆ ಮಾತ್ರ ಸಿಮೀತ ಇರುವಂತೆ ಅಧಿಕಾರಿಗಳ ಸಮಿತಿ ರಚನೆ ಮಾಡಬೇಕಾಗಿದೆ. ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ಕಾಶಿ ವಿಶ್ವನಾಥ ದೇವಾಲಯ ಅಭಿವೃದ್ಧಿಗಾಗಿ ನಾಲ್ಕು ಜನ ಅಧಿಕಾರಿಗಳನ್ನು ನೇಮಿಸಿದ ಮಾದರಿಯಲ್ಲಿಯೇ ಇಲ್ಲಿನ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು.
ಸ್ಮಾರಕಗಳ ಬಳಿ ಕೆಲವೊಂದು ಅಕ್ರಮವಾಗಿ ನಿರ್ಮಾಣ ಗೊಂಡ ಮನೆಗಳು ಸಹ ಇವೆ. ಅವರಿಗೆ ಬೇರೆ ಕಡೆಗೆ ನಿವೇಶನ ನೀಡಿ, ಸ್ಥಳಾಂತರ ಮಾಡಬೇಕಾಗಿದೆ. 2004 ರಿಂದ ಇಲ್ಲಿಯವರೆಗೂ ಯಾವುದೇ ಕಾರ್ಯ ಆಗದೆ ಹಾಗೆ ಉಳಿದಿದೆ. ಈ ಹಿಂದೆ ಇದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಇದರ ಅಭಿವೃದ್ಧಿ ಗಿಂತ ರಾಜಕೀಯಗೊಳಿಸಿ ಲಾಭ ಪಡೆದುಕೊಳ್ಳುತ್ತಿರುವುದೇ ಹೆಚ್ಚು ಹೀಗಾಗಿ ಅಭಿವೃದ್ಧಿ ಕಂಡಿಲ್ಲ. ಈಗ ಈ ಕ್ಷೇತ್ರದ ಶಾಸಕರಾಗಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ನವರು ಮುತವರ್ಜಿ ವಹಿಸಿ, ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿ,ಇದಕ್ಕೆ ಪ್ರತ್ಯೇಕ ಅಧಿಕಾರಿಗಳ ತಂಡ ರಚನೆ ಮಾಡಿ ಅಭಿವೃದ್ಧಿ ಆಗುವಂತೆ ನೋಡಿಕೊಳ್ಳಬೇಕಾಗಿದೆ. ಇದರಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಹೆಸರು ಶಾಶ್ವತವಾಗಿ ಉಳಿಯುತ್ತದೆ. ಇದಕ್ಕೆ ಕ್ಷೇತ್ರದ ಶಾಸಕರಾದ ಸಿದ್ದರಾಮಯ್ಯ ಯಾವ ರೀತಿಯಾಗಿ ಮುತುವರ್ಜಿಯಿಂದ ಕೆಲಸ ಮಾಡುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಾಗಿದೆ.