ಬಾಗಲಕೋಟೆ: ನೀವು ಕೊರೊನಾ ಸೋಂಕಿನಿಂದ ಬೇಗನೆ ಗುಣಮುಖರಾಗಿ ಹೊರಗೆ ಬರುತ್ತೀರಿ. ಯಾವುದೇ ಚಿಂತೆ ಮಾಡಬೇಡಿ ಎಂದು ಹೇಳುವ ಮೂಲಕ ಜಿ. ಪಂಚಾಯತ್ ಅಧ್ಯಕ್ಷೆ ಬಾಯಕ್ಕ ಮೇಟಿ ಸೋಂಕಿತರಿಗೆ ಧೈರ್ಯ ತುಂಬಿದರು.
ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಸೋಂಕಿತರ ಸಮಸ್ಯೆ ಆಲಿಸಿದ ಜಿ.ಪಂಚಾಯತ್ ಅಧ್ಯಕ್ಷೆ
ಬಾಗಲಕೋಟೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬಾಯಕ್ಕ ಮೇಟಿ , ಜಿಲ್ಲಾ ಸರ್ಜನ್ ಡಾ. ಪ್ರಕಾಶ್ ಬಿರಾದಾರ ಅವರ ಕಚೇರಿಯಲ್ಲಿ ಕುಳಿತುಕೊಂಡು ವಿಡಿಯೋ ಕಾಲ್ ಮೂಲಕ ಸೋಂಕಿತರ ಸಮಸ್ಯೆಯನ್ನು ಆಲಿಸಿದರು. ಅಲ್ಲದೇ ಸೂಕ್ತ ಕ್ರಮ ತೆಗೆದುಕೊಳ್ಳುವುದಕ್ಕೆ ಜಿಲ್ಲಾ ಸರ್ಜನ್ಗೆ ಸೂಚನೆ ನೀಡಿದರು.
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸರಿಯಾಗಿ ಆಹಾರ ವಿತರಣೆ ಸೇರಿದಂತೆ ಇತರ ಸೌಲಭ್ಯಗಳ ಕೊರತೆ ಬಗ್ಗೆ ಕಳೆದ ಎರಡು ದಿನದ ಹಿಂದೆ ಸೋಂಕಿತರೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಬಾಯಕ್ಕ ಮೇಟಿ, ಸೋಂಕಿತರ ಸಮಸ್ಯೆ ಆಲಿಸುವುದಕ್ಕೆ ಪಿಪಿಇ ಕಿಟ್ ಹಾಕಿಕೊಂಡು ಆಸ್ಪತ್ರೆಯೊಳ ಹೋಗಲು ಸಜ್ಜಾಗಿದ್ದರು. ಆದರೆ ವೈದ್ಯರು ಮುನ್ನೆಚ್ಚರಿಕಾ ಕ್ರಮವಾಗಿ ಒಳ ಪ್ರವೇಶಿಸಲು ಅನುಮತಿ ನೀಡಲಿಲ್ಲ. ಹೀಗಾಗಿ, ಜಿಲ್ಲಾ ಸರ್ಜನ್ ಡಾ. ಪ್ರಕಾಶ್ ಬಿರಾದಾರ ಅವರ ಕಚೇರಿಯಲ್ಲಿ ಕುಳಿತುಕೊಂಡೇ ವಿಡಿಯೋ ಕಾಲ್ ಮಾಡಿ ಸಮಸ್ಯೆಗಳನ್ನು ಆಲಿಸಿದರು.
ಈ ವೇಳೆ, ಕೋವಿಡ್ ಆಸ್ಪತ್ರೆಯಲ್ಲಿ ಶೌಚಾಲಯ ಸೇರಿದಂತೆ ಗುಣಮಟ್ಟದ ಆಹಾರ ವಿತರಣೆ ಆಗುತ್ತಿಲ್ಲ ಎಂದು ಸೋಂಕಿತರು ದೂರಿದರು. ನಮ್ಮ ಬಳಿ ಬರುವ ಆಸ್ಪತ್ರೆ ಸಿಬ್ಬಂದಿ ಎಲ್ಲ ಮಾಹಿತಿ ನೀಡುತ್ತಾರೆ. ಆದರೆ ವೈದ್ಯರು ದಿನಕ್ಕೆ ಒಮ್ಮೆ ಮಾತ್ರ ಬಂದು ಹೋಗುತ್ತಾರೆ ಎಂದರು. ಈ ದೂರಿಗೆ ಪ್ರತಿಕ್ರಿಯಿಸಿದ ಬಾಯಕ್ಕ ಮೇಟಿ, ಸೂಕ್ತ ಕ್ರಮ ತೆಗೆದುಕೊಳ್ಳುವುದಕ್ಕೆ ಜಿಲ್ಲಾ ಸರ್ಜನ್ಗೆ ಸೂಚನೆ ನೀಡಿದರು.