ಸೇಲಂ (ತಮಿಳುನಾಡು):ಭಾರತ ತಂಡದಲ್ಲಿ ರ್ಯಾಕರ್ ಸ್ಪೆಷಲಿಸ್ಟ್ ಆಗಿರುವ ಮತ್ತು ಟಿ20 ಮಾದರಿಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರ ಟಿ ನಟರಾಜನ್ ಅವರ ಕನಸು ನಿನ್ನೆ ಸಾಕಾರಗೊಂಡಿದೆ. ತಮ್ಮಂತೆ ಊರಿನ ಮಕ್ಕಳು ದೇಶಕ್ಕಾಗಿ ಆಡಬೇಕು ಎಂಬ ಉದ್ದೇಶದಿಂದ ಸ್ವಂತ ಖರ್ಚಿನಿಂದ ನಟರಾಜನ್ ತಾವೇ ದುಡಿದು ಕ್ರಿಕೆಟ್ ಕ್ರೀಡಾಂಗಣವನ್ನು ಮಾಡಿದ್ದರು. ನಿನ್ನೆ ಈ ಮೈದಾನ ಲೋಕಾರ್ಪಣೆಗೊಂಡಿದ್ದು, ಯುವ ಪ್ರತಿಭೆಗಳ ಅಭ್ಯಾಸಕ್ಕೆ ಅವಕಾಶ ಹೆಚ್ಚಿದಂತಾಗಿದೆ.
ತಾನು ಮಾತ್ರ ಬೆಳೆದರೆ ಸಾಲದು, ತನ್ನಂತೆ ಇತರರೂ ಬೆಳೆಯಬೇಕು ಎಂಬ ಕನಸು ಹೊತ್ತು ಟಿ ನಟರಾಜನ್ ಅವರು ಸೇಲಂ ಜಿಲ್ಲೆಯ ಸಂಕಗಿರಿ ಬಳಿಯ ತಮ್ಮ ಗ್ರಾಮ ಚಿನ್ನಪ್ಪಂಪಟ್ಟಿಯಲ್ಲಿ ಭೂಮಿ ಖರೀದಿಸಿ ಕ್ರಿಕೆಟ್ ಮೈದಾನವನ್ನು ಸ್ಥಾಪಿಸಿದ್ದಾರೆ. ನಿನ್ನೆ (ಶುಕ್ರವಾರ) ಈ ಮೈದಾನವನ್ನು ಭಾರತ ತಂಡದ ಬ್ಯಾಟರ್ ಮತ್ತು ವಿಕೆಟ್ ಕೀಪರ್ ಆಗಿರುವ ದಿನೇಶ್ ಕಾರ್ತಿಕ್ ಉದ್ಘಾಟಿಸಿದರು. ನಂತರ ಮಾತನಾಡಿದ ನಟರಾಜನ್ ಅವರ ಮುಂದಾಲೋಚನೆಗೆ ಅಭಿನಂದನೆ ಸಲ್ಲಿಸಿದರು.
ಮೈದಾನ ಉದ್ಘಾಟನೆ ವೇಳೆ ಕ್ರಿಕೆಟಿಗರಾದ ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್, ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಪಿ. ಅಶೋಕ್ ಸಿಗಮಣಿ, ಸೇಲಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶಿವಕುಮಾರ್ ಮತ್ತು ಚಲನಚಿತ್ರ ನಟರಾದ ಯೋಗಿ ಬಾಬು, ಪುಗಜ್ ಮತ್ತು ಗೋಪಿ, ತಮಿಳುನಾಡು ಕ್ರಿಕೆಟ್ ತಂಡದ ಆಟಗಾರರು ಮತ್ತು ತಮಿಳುನಾಡು ಪ್ರೀಮಿಯರ್ ಲೀಗ್ ಆಟಗಾರರು ಭಾಗವಹಿಸಿದ್ದರು.
ಕ್ರಿಕೆಟ್ ಹಾದಿ.. ಹಳ್ಳಿ ಪ್ರತಿಭೆ ನಟರಾಜನ್ ಅವರು ಐಪಿಎಲ್ನಿಂದ ಉದಯಿಸಿದ ಕ್ರಿಕೆಟರ್ ಎಂದೇ ಹೇಳಬಹುದು. 2018ರ ಐಪಿಎಲ್ ಹರಾಜಿನಲ್ಲಿ ಸನ್ರೈಸರ್ಸ್ ಹೈದರಾಬಾದ್ ಟೀಮ್ ಟಿ ನಟರಾಜನ್ ಅವರನ್ನು ಖರೀದಿಸಿತು. ಅದೇ ವರ್ಷ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಹ ನೀಡಿತ್ತು. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ನಟರಾಜನ್, ಉತ್ತಮ ಯಾರ್ಕರ್ ಬೌಲಿಂಗ್ ಮೂಲಕ ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಹೆಸರು ಮಾಡದರು. ಇಂಡಿಯನ್ ಪ್ರೀಮಿಯರ್ ಲೀಗ್ನ 13ನೇ ಆವೃತ್ತಿಯಲ್ಲಿ ಆಡಿದ 16 ಪಂದ್ಯಗಳಿಂದ 16 ವಿಕೆಟ್ ಕಬಳಿಸಿ ರಾಷ್ಟ್ರೀಯ ತಂಡದ ಆಯ್ಕೆಗಾರರ ಗಮನ ಸೆಳೆದರು.
2020ರಲ್ಲಿ ಟೀಂ ಇಂಡಿಯಾ ಕದ ತಟ್ಟಿದ ನಟರಾಜನ್, ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾದರು. ಮೊದಲು ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿ, ಬಳಿಕ ಟಿ20 ಕ್ರಿಕೆಟ್ಗೂ ತಮ್ಮ ಪಾದಾರ್ಪಣೆ ಪಂದ್ಯ ಆಟಡಿದರು. ಭಾರತದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಗಾಯಗೊಂಡು ಹೊರಗುಳಿದಿದ್ದಾಗ ಬದಲಿ ಆಟಗಾರನಾಗಿ ಛಾಪು ಮೂಡಿಸಿದ್ದರು. ಇದಲ್ಲದೇ, ಟೆಸ್ಟ್ ಸರಣಿಯಲ್ಲೂ ಎಂಟ್ರಿ ಕೊಡುವ ಮೂಲಕ ಒಂದೇ ಪ್ರವಾಸದಲ್ಲಿ ಮೂರು ಮಾದರಿಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಸದ್ಯ ಭಾರತ ತಂಡದಿಂದ ಹೊರಬಿದ್ದಿರುವ ಟಿ. ನಟರಾಜನ್, ಇದುವರೆಗೂ ಭಾರತದ ಪರವಾಗಿ ಒಂದು ಟೆಸ್ಟ್, ಎರಡು ಏಕದಿನ ಹಾಗೂ 4 ಟಿ20 ಪಂದ್ಯಗಳನ್ನು ಆಡಿದ್ದಾರೆ. ಟೀಮ್ ಇಂಡಿಯಾಗಾಗಿ ಒಟ್ಟಾರೆ 13 ವಿಕೆಟ್ ಕಬಳಿಸಿದ್ದಾರೆ. ತಮಿಳು ಪ್ರೀಮಿಯರ್ ಲೀಗ್ನಲ್ಲಿ (ಟಿಪಿಎಲ್) ಅವರು ಬಾಲ್ಸಿ ತಿರುಚ್ಚಿಯನ್ನೂ ಪ್ರತಿನಿಧಿಸುತ್ತಿದ್ದಾರೆ.
ಇದನ್ನೂ ಓದಿ:T Natarajan: ಯುವ ಪ್ರತಿಭೆಗಳಿಗಾಗಿ ಆಳಾಗಿ ದುಡಿದು ಕ್ರೀಡಾಂಗಣ ನಿರ್ಮಿಸಿದ ಕ್ರಿಕೆಟಿಗ ಟಿ.ನಟರಾಜನ್: ಜೂನ್ 23ಕ್ಕೆ ಉದ್ಘಾಟನೆ