ವಿಶಾಖಪಟ್ಟಣಂ : ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರ ಸತತ ಎರಡು ಗೋಲ್ಡನ್ ಡಕ್ ಭಾರತ ತಂಡಕ್ಕೆ ತಲೆನೋವಾಗಿದೆ ಪರಿಣಮಿಸಿದೆ. ಎರಡೂ ಪಂದ್ಯಗಳಲ್ಲಿ ವೇಗಿ ಮಿಚೆಲ್ ಸ್ಟಾರ್ಕ್ ದಾಳಿಗೆ ಸಿಲುಕಿರುವ ಸೂರ್ಯಕುಮಾರ್ ರನ್ ಖಾತೆ ತೆರೆಯದೆ ಪೆವಿಲಿಯನ್ ಸೇರಿದ್ದರು. ನೀರಸ ಪ್ರದರ್ಶನದ ಬಳಿಕ ತಂಡದಲ್ಲಿ ಅವರ ಸ್ಥಾನದ ಕುರಿತಂತೆ ಎದ್ದ ಪ್ರಶ್ನೆಗಳಿಗೆ ನಾಯಕ ರೋಹಿತ್ ಶರ್ಮಾ ಉತ್ತರಿಸಿದ್ದು, ಸೂರ್ಯ ಬೆಂಬಲಕ್ಕೆ ನಿಂತಿದ್ದಾರೆ.
ಎರಡೂ ಪಂದ್ಯಗಳಲ್ಲಿ ತಾವೆದುರಿಸಿದ ಮೊದಲ ಎಸೆತದಲ್ಲೇ ಎಲ್ಬಿಡಬ್ಲೂ ಬಲೆಗೆ ಬಿದ್ದಿರುವ ಸೂರ್ಯಕುಮಾರ್ ಯಾದವ್ ಬಗ್ಗೆ ಸಾಮಾಜಿಕ ಜಾಲತಾಣ ಸೇರಿದಂತೆ ಕ್ರಿಕೆಟ್ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಸದ್ಯ ಟಿ20 ಕ್ರಿಕೆಟ್ನಲ್ಲಿ ವಿಶ್ವ ನಂ. 1 ಆಗಿರುವ ಸೂರ್ಯ ದೀರ್ಘ ಮಾದರಿಯ ಆಟದಲ್ಲಿ ವೈಫಲ್ಯ ಕಾಣುತ್ತಿರುವ ಬಗ್ಗೆ ಪ್ರಶ್ನೆಗಳು ಮೂಡಿವೆ. ಇದೇ ವಿಚಾರವಾಗಿ ಪಂದ್ಯದ ನಂತರ ಮಾಧ್ಯಮದವರಿಗೆ ಉತ್ತರಿಸಿರುವ ನಾಯಕ ರೋಹಿತ್, "ಗಾಯಾಳು ಶ್ರೇಯಸ್ ಅಯ್ಯರ್ ತಂಡಕ್ಕೆ ಮರಳುವ ಬಗ್ಗೆ ನಮಗೆ ಗೊತ್ತಿಲ್ಲ. ಇಂತಹ ಸಂದರ್ಭದಲ್ಲಿ ಅವರ ಸ್ಥಾನಕ್ಕೆ ಸೂರ್ಯಕುಮಾರ್ ಯಾದವ್ ಅವರನ್ನು ಆಡಿಸಲಾಗುತ್ತಿದೆ. ವೈಟ್ ಬಾಲ್ ಕ್ರಿಕೆಟ್ನಲ್ಲಿ ಸೂರ್ಯ ಸಾಕಷ್ಟು ಸಲ ಸಾಮರ್ಥ್ಯ ತೋರಿದ್ದಾರೆ. ನಾನು ಈ ಹಿಂದೆಯೂ ಹಲವು ಬಾರಿ ಇದನ್ನೇ ಹೇಳಿದ್ದೇನೆ. ಸಾಮರ್ಥ್ಯ ಹೊಂದಿರುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು" ಎಂದು ಹೇಳಿದರು.
"ಸಹಜವಾಗಿ, ಸೂರ್ಯಕುಮಾರ್ ದೀರ್ಘ ಸ್ವರೂಪದ ಕ್ರಿಕೆಟ್ನಲ್ಲೂ ಸ್ಥಿರ ಪ್ರದರ್ಶನ ನೀಡಬೇಕಿದೆ. ಈ ವಿಚಾರವು ಸೂರ್ಯಗೂ ಅರಿವಿರುತ್ತದೆ ಎಂದು ನಾನು ಭಾವಿಸುತ್ತೇನೆ. ಸೂರ್ಯ ಎರಡು ಪಂದ್ಯಗಳಲ್ಲಿಯೂ ರನ್ ಗಳಿಸದೆ ಔಟಾಗಿದ್ದಾರೆ. 7-8 ಅಥವಾ 10 ಪಂದ್ಯಗಳಿಗೆ ಹೋಲಿಸಿದಾಗ ಸ್ಥಿರ ಪ್ರದರ್ಶನ ನೀಡುವ ಅಗತ್ಯವಿದೆ. ಸದ್ಯ ಅವರು ಗಾಯಗೊಂಡ ಆಟಗಾರ ಹಾಗೂ ಅಲಭ್ಯತೆ ಹಿನ್ನೆಲೆಯಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದಾರೆ. ಈ ಹಿಂದೆ ನನಗೂ ಸಹ ನಿರ್ದಿಷ್ಟ ಕ್ರಮಾಂಕದಲ್ಲಿ ಸಾಕಷ್ಟು ಅವಕಾಶ ಲಭಿಸಿರಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ" ಎಂದು ನಾಯಕ ರೋಹಿತ್ ಶರ್ಮಾ ತಿಳಿಸಿದರು.