ಕನ್ನಡತಿ ಉತ್ಸವ -2019ರ ಅಂಗವಾಗಿ ಬೆಂಗಳೂರು 'ಸುಚಿತ್ರ ಫಿಲ್ಮ್ ಸೊಸೈಟಿ'ಯಲ್ಲಿ ರಾಜ್ಯಮಟ್ಟದ ಅಂತರ್ ಕಾಲೇಜು ಕಿರುನಾಟಕ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ 'ತಾಯಿಮಗಳು' ಎಂಬ ನಾಟಕ ಪ್ರೇಕ್ಷಕರ ಮನ ಗೆದ್ದು ಮೊದಲ ಬಹುಮಾನ ಪಡೆದುಕೊಂಡಿದೆ.
'ಸುಚಿತ್ರ ಫಿಲ್ಮ್ ಸೊಸೈಟಿ' ವತಿಯಿಂದ ಅಂತರ್ ಕಾಲೇಜು ಕಿರುನಾಟಕ ಸ್ಪರ್ಧೆ
'ಸುಚಿತ್ರ ಫಿಲ್ಮ್ ಸೊಸೈಟಿ' ಏರ್ಪಡಿಸಿದ್ದ ರಾಜ್ಯಮಟ್ಟದ ಅಂತರ್ ಕಾಲೇಜು ಕಿರುನಾಟಕ ಸ್ಪರ್ಧೆಯಲ್ಲಿ 'ತಾಯಿಮಗಳು' ಎಂಬ ನಾಟಕಕ್ಕೆ ಮೊದಲ ಬಹುಮಾನ, 'ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್' ನಾಟಕ ದ್ವೀತಿಯ ಹಾಗೂ 'ದನಿ' ನಾಟಕ ತೃತೀಯ ಬಹುಮಾನ ಪಡೆದುಕೊಂಡಿದೆ.
ವಿಜಯನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ರಚಿಸಿದ್ದ 'ತಾಯಿಮಗಳು' ಎಂಬ ನಾಟಕದಲ್ಲಿ ಮಂಗಳಮುಖಿಯೋರ್ವಳ ತಾಯಿ ಹೃದಯದ ಸೂಕ್ಷ್ಮತೆಯನ್ನು ಬಿಂಬಿಸುವ ಕಥಾವಸ್ತು ಅಡಗಿತ್ತು. ಇದರೊಂದಿಗೆ ಹೆಜ್ಜೆರಂಗ ತಂಡದವರ 'ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್' ಎಂಬ ಮಹಿಳಾ ಉದ್ಯೋಗಿಗಳಿಗೆ ಎದುರಾಗುವ ಸವಾಲುಗಳನ್ನೊಳಗೊಂಡ ನಾಟಕ ದ್ವಿತೀಯ ಬಹುಮಾನ ಹಾಗೂ ಪೀಣ್ಯ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ರಚಿಸಿದ್ದ ಕುಟುಂಬದ ಒಳಗೆ ಜರುಗುವಂತ ಹೆಣ್ಣುಮಕ್ಕಳ ಲೈಂಗಿಕ ಕಿರುಕುಳದ ಸೂಕ್ಷ್ಮ ವಿಷಯದ ಬಗ್ಗೆ ಹೆಣೆದಿರುವ ಕಥಾವಸ್ತುವುಳ್ಳ 'ದನಿ' ಎಂಬ ನಾಟಕ ತೃತೀಯ ಬಹುಮಾನ ಪಡೆದವು. ಇದರೊಂದಿಗೆ ಕನಕಪುರ ಕೋಡಿಹಳ್ಳಿಯ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿನಿಯರಿಂದ ಪ್ರದರ್ಶಿತವಾದ 'ಮಾಧವಿ' ಎಂಬ ನಾಟಕಕ್ಕೆ ಸಮಾಧಾನಕರ ಬಹುಮಾನ ನೀಡಲಾಯಿತು.
ಈ ಸ್ಪರ್ಧೆಯಲ್ಲಿ ಗೆದ್ದ ತಂಡಗಳಿಗೆ ಪ್ರಥಮ ಬಹುಮಾನವಾಗಿ 5000 ರೂಪಾಯಿ ನಗದು ಬಹುಮಾನ, ಪಾರಿತೋಷಕ ಮತ್ತು ದ್ವಿತೀಯ ಬಹುಮಾನವಾಗಿ 3000 ರೂಪಾಯಿ ನಗದು ಬಹುಮಾನ , ಪಾರಿತೋಷಕ ಹಾಗೂ ತೃತೀಯ ಬಹುಮಾನವಾಗಿ 2000 ರೂಪಾಯಿ ನಗದು ಬಹುಮಾನ ಹಾಗೂ ಪಾರಿತೋಷಕ ನೀಡಲಾಯಿತು. 'ಅವಳ ಹೆಜ್ಜೆ' ಸಂಸ್ಥೆ ವತಿಯಿಂದ ಕೌಶಲ್ಯಾಭಿವೃದ್ಧಿ ಮತ್ತು ಮಹಿಳಾ ಸಬಲೀಕರಣದ ಒಂದು ದಿನದ ಉಚಿತ ಕಾರ್ಯಾಗಾರವನ್ನು ನೀಡುವುದಾಗಿ ಸಂಸ್ಥೆಯ ಮುಖ್ಯಸ್ಥೆ ಶಾಂತಲಾ ದಾಮ್ಲೆ ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಂತಲಾ ದಾಮ್ಲೆ, ನಾತಿಚರಾಮಿ ಖ್ಯಾತಿಯ ಶರಣ್ಯಾ, ರಂಗಭೂಮಿ ಕಲಾವಿದೆ ನಯನ ಸೂಡ, ದೃಶ್ಯ ರಂಗತಂಡದ ದಾಕ್ಷಾಯಣಿ ಭಟ್ , ನಿರ್ದೇಶಕ ಹಾಗೂ ನಿರ್ಮಾಪಕ ಬಿ. ಸುರೇಶ್ ಪಾಲ್ಗೊಂಡಿದ್ದರು.