ಕರ್ನಾಟಕ

karnataka

ETV Bharat / sitara

ಕೊಲೆ ಹಿಂದೆ ಸುತ್ತುವ 'ಅನುಕ್ತ'... ಸೆಕೆಂಡ್ ಹಾಫ್ ಸೂಪರ್!

By

Published : Feb 4, 2019, 5:51 PM IST

ಸಸ್ಪೆನ್ಸ್​​ ಆ್ಯಂಡ್​ ಥ್ರಿಲ್ಲರ್ ಮೂವಿ 'ಅನುಕ್ತ'

ಕನ್ನಡದ ಅನುಕ್ತ ಚಿತ್ರ ಇಂದು ತೆರೆ ಕಂಡಿದ್ದು, ಎಲ್ಲೆಡೆ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಇದೊಂದು ಸಸ್ಪೆನ್ಸ್​​ ಥ್ರಿಲ್ಲರ್​ ಚಿತ್ರ ಅನ್ನೋದು ಟ್ರೇಲರ್​​ನಲ್ಲಿ ಗೊತ್ತಾಗಿತ್ತು. ಇದೀಗ ಚಿತ್ರ ರಿಲೀಸ್ ಆಗಿದ್ದು, ಅದರ ವಿಮರ್ಶೆ ಹೀಗಿದೆ.

'ಅನುಕ್ತ' ಚಿತ್ರದ ಮೂಲಕ ಕನ್ನಡಕ್ಕೆ ಮತ್ತೊಬ್ಬ ಥ್ರಿಲ್ಲರ್ ಕಥಾ ವಸ್ತು ನೀಡುವ ನಿರ್ದೇಶಕ ಆಗಮಿಸಿದ್ದಾರೆ. ಅವರೇ ಅಶ್ವಥ್ ಸ್ಯಾಮ್ಯೂಯಲ್. ‘ಅನುಕ್ತ’, ವ್ಯಕ್ತವಾಗದ ಸತ್ಯವನ್ನು 25 ವರ್ಷಗಳ ನಂತರ ಭೇದಿಸುವ ವಿಚಾರದಲ್ಲಿ ನಿರ್ದೇಶಕರು ಚಿತ್ರದ ಸೆಕೆಂಡ್ ಹಾಫ್​​ನಲ್ಲಿ ಸಂಪೂರ್ಣವಾಗಿ ಹಿಡಿದು ಕೂರಿಸುತ್ತಾರೆ. ಅಷ್ಟೇಯಲ್ಲ ಇಬ್ಬರು ಹಿರಿಯ ನಟರುಗಳು ಸಂಪತ್ ರಾಜ್ ಹಾಗೂ ಕೆ.ಎಸ್. ಶ್ರೀಧರ್ ಅವರ ಅಭಿನಯ ವಾರೆವ್ಹಾ ಅನ್ನಿಸುವಂತಿದೆ. ಇದರ ಜೊತೆಗೆ ದಕ್ಷಿಣ ಕನ್ನಡದ ಕೋಲಾ ಸಂಸ್ಕೃತಿಯನ್ನು ಸಹ ಅಲ್ಲಲ್ಲಿ ಕಾಣಬಹುದು.

ಇನ್ನು ಅನುಕ್ತ ಚಿತ್ರದ ಸಪ್ಪೆ ವಿಚಾರ ಎದ್ದು ಕಾಣುವುದೇ ಚಿತ್ರದ ಮೊದಲಾರ್ಧದಲ್ಲಿ. ಇದರ ಜೊತೆಗೆ ನಿರ್ದೇಶಕರೂ ಇಲ್ಲಿ ಜಾಣ್ಮೆ ಪ್ರದರ್ಶಿಸಬೇಕಿನ್ನಿಸುತ್ತದೆ. ಆದರೆ ಪತ್ತೇದಾರಿ ಕೆಲಸ ನಾಯಕ ಕಾರ್ತಿಕ್ ಅವರಿಂದ ಶುರುವಾದ ಮೇಲೆ ಅವರು ಮೇಲುಗೈ ಸಾಧಿಸುತ್ತಾರೆ. ಚಿತ್ರಕಥೆಯಲ್ಲಿ ಅವರು ಅಡಗಿಸಿಟ್ಟಿರುವ ಕೌತುಕ ವಿಚಾರಗಳು ಒಂದಂದಾಗಿ ಬಿಚ್ಚಿಕೊಳ್ಳುತ್ತ, ಪ್ರೇಕ್ಷಕರ ಎಣಿಕೆಯನ್ನು ಬದಲಿಸುತ್ತಾ ಹೋಗುವುದು ಚಿತ್ರದ ಪ್ರಮುಖ ಜೀವಾಳ.

ಸಸ್ಪೆನ್ಸ್​​ ಆ್ಯಂಡ್​ ಥ್ರಿಲ್ಲರ್ ಮೂವಿ 'ಅನುಕ್ತ'

ಯುವ ಪೊಲೀಸ್ ಅಧಿಕಾರಿ ಕಾರ್ತಿಕ್ (ನಾಯಕ ಕಾರ್ತಿಕ್ ಅತ್ತವಾರ್), ಮಡದಿ ತಾನ್ವಿ (ನಾಯಕಿ ಸಂಗೀತ ಭಟ್) ಡಿಪ್ರೆಷನ್​ ದೂರು ಮಾಡಲು ವಿಹಾರಕ್ಕೆ ಬರುತ್ತಾನೆ. ಆದರೆ, ಅವನು ಸೇರಿಕೊಳ್ಳುವ ಮನೆ ಸಾಮಾನ್ಯವಾಗಿರುವುದಿಲ್ಲ. ಅಲ್ಲಿ ದೆವ್ವ, ಭೂತ ಇದೆ ಎಂದು ಜನರು ನಂಬಿಸಿರುತ್ತಾರೆ. ಆದರೆ, ಅಲ್ಲಿಗೆ ಕಾರ್ತಿಕ್ ಒಂದು ಕೊಲೆ ಪ್ರಕರಣ ಭೇದಿಸಲು ಬರುವುದು ವಿಚಿತ್ರ ಘಟನೆಗಳು ಅವನಿಗೆ ಗೋಚರವಾಗುತ್ತದೆ. ಅದು ಅವನ ಜೀವನಕ್ಕು ಸಂಬಂಧಿಸಿದ್ದು ಆಗಿರುತ್ತದೆ. 25 ವರ್ಷಗಳ ಹಿಂದೆ ಕ್ಲೋಸ್ ಆದ ಅನುಪಮ ಶೆಟ್ಟಿ (ಅನು ಪ್ರಭಾಕರ್ ಮುಖರ್ಜಿ) ಕೊಲೆಯ ಕೇಸ್ ಮತ್ತೆ ಓಪನ್ ಆಗುತ್ತದೆ. ಅಲ್ಲಿಂದ ಅವನ ಸುತ್ತ ವಿರೋಧಿಗಳು ಸಹ ಹುಟ್ಟಿಕೊಳ್ಳುತ್ತಾರೆ.

ಕಾರ್ತಿಕ್ ಪ್ರಕರಣ ಭೇದಿಸಲು ಹೊರಟಂತೆ ಅವನ ಹುಟ್ಟು, ಬೆಳವಣಿಗೆ ಮತ್ತು ಅವನಿಗೂ ಈ ಕೊಲೆ ಹೇಗೆ ಸಂಬಂಧಿಸಿದ್ದು ಎಂಬುದು ಅನಾವರಣ ಆಗುತ್ತಾ ಹೋಗುತ್ತದೆ. ಕೊನೆಗೆ ಇಬ್ಬರು ಸ್ನೇಹಿತರ ನಡುವಿನ ಅಚಾತುರ್ಯ ಎಂಬುದು ಬೆಳಕಿಗೆ ಬಂದು ನಡೆದ ಕ್ರೈಂ ಹಿಂದಿನ ಗುಟ್ಟನ್ನು ಬಿಡಿಸಿ ಹೇಳುತ್ತಾನೆ ಕಾರ್ತಿಕ್.

ಈ ಚಿತ್ರದಲ್ಲಿ ಸಂಪತ್ ರಾಜ್ ಹಾಗೂ ಕೆ.ಎಸ್ ಶ್ರೀಧರ್ ಪೈಪೋಟಿಗೆ ಬಿದ್ದಂತೆ ನಟಿಸಿದ್ದಾರೆ. ಕಾರ್ತಿಕ್ ಹಾಗೂ ಸಂಗೀತ ಭಟ್ ಜೋಡಿ ಚೆನ್ನಾಗಿದೆ. ಅನು ಪ್ರಭಾಕರ್ ಮುಖರ್ಜಿ ಪುನರಾಗಮನದ ಚಿತ್ರದಲ್ಲಿ ಒಂದು ಪುಟ್ಟ ಪಾತ್ರ ಕಳಕಳೆಯಿಂದ ಕಾಣಿಸುತ್ತಾರೆ. ಉಷಾ ಭಂಡಾರಿ ಅವರು ಮೇರಿ ಆಗಿ ಪ್ರಭುದ್ದ ಅಭಿನಯ.

ಎರಡು ಹಾಡುಗಳನ್ನು ಕೇಳುವಂತೆ ಮಾಡಿದ್ದಾರೆ ಸಂಗೀತ ನಿರ್ದೇಶಕ ನೋಬಿನ್ ಪೌಲ್, ಮನೋಹರ್ ಜೋಷಿ ಅವರ ಛಾಯಾಗ್ರಹಣ ಅಚ್ಚುಕಟ್ಟು, ಸಂಕಲನಕಾರ ವಿಶ್ವ ಅವರ ಕೆಲಸ ಸೆಕಂಡ್ ಹಾಫ್​​​ನಲ್ಲಿ ಬಹಳ ಇಷ್ಟ ಆಗುತ್ತದೆ.

ಈ ಚಿತ್ರ ಒಮ್ಮೆ ನೋಡಲು ಅಡ್ಡಿಯಿಲ್ಲ. ಪತ್ತೇದಾರಿ ಸಿನಿಮಾಗಳಲ್ಲಿ ‘ಅನುಕ್ತ’ ಸಹ ಒಳ್ಳೆಯ ಅಂಕಗಳನ್ನು ಪಡೆಯುತ್ತದೆ.

ABOUT THE AUTHOR

...view details