ಕರ್ನಾಟಕ

karnataka

ಆಪರೇಷನ್ ದೋಸ್ತ್: ಭಾರತದಿಂದ ಪರಿಹಾರ ಸಾಮಗ್ರಿ ಹೊತ್ತ 7ನೇ ವಿಮಾನ ಟರ್ಕಿಗೆ ರವಾನೆ

By

Published : Feb 12, 2023, 10:12 AM IST

ಆಪರೇಷನ್‌ ದೋಸ್ತ್‌ ಕಾರ್ಯಾಚರಣೆ ಆರಂಭಿಸಿರುವ ಭಾರತ, ಸಿರಿಯಾ ಮತ್ತು ಟರ್ಕಿಗೆ ವಿಶೇಷ ವಿಮಾನಗಳ ಮೂಲಕ ಅಗತ್ಯ ನೆರವು ಹಾಗೂ ಸಾಮಗ್ರಿಗಳನ್ನು ಪೂರೈಸುತ್ತಿದೆ.

Operation Dost
ಪರಿಹಾರ ಸಾಮಗ್ರಿ ಒಳಗೊಂಡ ವಿಮಾನ

ನವದೆಹಲಿ:ಭೀಕರಭೂಕಂಪದಿಂದ ತೀವ್ರ ಸಂಕಷ್ಟದಲ್ಲಿರುವ ಸಿರಿಯಾ ಮತ್ತು ಟರ್ಕಿ ದೇಶಗಳಿಗೆ ಭಾರತ ನೆರವಿನ ಹಸ್ತ ಚಾಚಿದೆ. ಪರಿಹಾರ ಕಾರ್ಯಗಳಿಗಾಗಿ ಅಗತ್ಯ ವಸ್ತುಗಳು, ತುರ್ತು ಮತ್ತು ನಿರ್ಣಾಯಕ ಆರೈಕೆ ಔಷಧಿಗಳನ್ನು ಹೊತ್ತ 7ನೇ ವಿಮಾನ ಭಾರತದಿಂದ ಸಂಕಷ್ಟಪೀಡಿತ ಟರ್ಕಿಗೆ ತೆರಳಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ತಿಳಿಸಿದೆ.

ಶನಿವಾರ ಸಂಜೆ ಮತ್ತೊಂದು IAF C-17 ವಿಮಾನ ಸಿರಿಯಾ ಮತ್ತು ಟರ್ಕಿಗೆ ಪರಿಹಾರ ಸಾಮಗ್ರಿ ಮತ್ತು ತುರ್ತು ಸಲಕರಣೆಗಳನ್ನು ಹೊತ್ತೊಯ್ದಿದೆ. ಡಮಾಸ್ಕಸ್‌ನಲ್ಲಿ ಪರಿಹಾರ ಸಾಮಗ್ರಿಗಳನ್ನು ವಿತರಿಸಿದ ನಂತರ, ವಿಮಾನವು ಅದಾನದ ಕಡೆಗೆ ಸಂಚರಿಸಲಿದೆ ಎಂದು ಎಂಇಎ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ವಿಮಾನವು 35 ಟನ್‌ಗಳಷ್ಟು ಪರಿಹಾರ ಸಾಮಗ್ರಿ, ವೈದ್ಯಕೀಯ ನೆರವು, ಕ್ರಿಟಿಕಲ್ ಕೇರ್ ಔಷಧಿ, ವೈದ್ಯಕೀಯ ಉಪಕರಣಗಳು ಮತ್ತು ಉಪಭೋಗ್ಯ ವಸ್ತುಗಳನ್ನು ಸಾಗಿಸುತ್ತಿದೆ ಎಂದು ಹೇಳಿದರು.

ಏನಿದು ಆಪರೇಷನ್ ದೋಸ್ತ್?: "ಭೂಕಂಪ ಪೀಡಿತ ಟರ್ಕಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ಆಪರೇಷನ್ ದೋಸ್ತ್ ಭಾಗವಾಗಿ ಭಾರತೀಯ ತಂಡಗಳು ಹಗಲು ರಾತ್ರಿ ಶ್ರಮಿಸುತ್ತಿವೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ 28 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಹಾಗೆಯೇ ಸಾವಿರಾರು ಜನರು ಗಾಯಗೊಂಡಿದ್ದು, ಲೆಕ್ಕಕ್ಕೆ ಸಿಗದಷ್ಟು ಜನರು ನಿರಾಶ್ರಿತರಾಗಿದ್ದಾರೆ. ಈ ನಡುವೆ ಸಂಕಷ್ಟದಲ್ಲಿರುವವರ ರಕ್ಷಣೆಗಾಗಿ ಆಪರೇಷನ್‌ ದೋಸ್ತ್‌ ಕಾರ್ಯಾಚರಣೆ ಆರಂಭಿಸಿರುವ ಭಾರತ, ವಿಶೇಷ ವಿಮಾನಗಳ ಮೂಲಕ ಅಗತ್ಯ ನೆರವು ಹಾಗೂ ಸಾಮಗ್ರಿ ಪೂರೈಸುತ್ತಿದೆ. ಜತೆಗೆ ಟರ್ಕಿಯಲ್ಲಿ ಬೀಡು ಬಿಟ್ಟಿರುವ ಭಾರತದ ತಜ್ಞರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಪ್ರಬಲ ಭೂಕಂಪಕ್ಕೆ ನಲುಗಿದ ಟರ್ಕಿ-ಸಿರಿಯಾ : 21 ಸಾವಿರಕ್ಕೂ ಅಧಿಕ ಮಂದಿ ಬಲಿ.. ಆಹಾರಕ್ಕಾಗಿ ಬದುಕುಳಿದವರ ಪರದಾಟ

ಮೃತರ ಸಂಖ್ಯೆ 28 ಸಾವಿರಕ್ಕೇರಿಕೆ:ಆರು ದಿನಗಳ ಹಿಂದೆ ಟರ್ಕಿ ಮತ್ತು ಸಿರಿಯಾದಲ್ಲಿ ಸತತ ವಿನಾಶಕಾರಿ ಭೂಕಂಪಗಳಿಂದ 28,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಟರ್ಕಿಯ ಉಪಾಧ್ಯಕ್ಷ ಫುಅತ್ ಓಕ್ತಾಯ್ ತಿಳಿಸಿದ್ದಾರೆ. "ಭೀಕರ ಭೂಕಂಪನಕ್ಕೆ ಈವರೆಗೂ 28,192 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಟರ್ಕಿಯಲ್ಲೇ 24,617 ಮಂದಿ ಮೃತಪಟ್ಟಿದ್ದರೆ, ಸಿರಿಯಾದಲ್ಲಿ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶದಲ್ಲಿ 2,167, ಸರ್ಕಾರ ನಿಯಂತ್ರಿತ ಪ್ರದೇಶದಲ್ಲಿ 1408 ಸೇರಿ 3575 ಸಾವು ಸಂಭವಿಸಿದೆ" ಎಂದು ಆರೋಗ್ಯ ಸಚಿವಾಲಯ ನೀಡಿದ ದಾಖಲೆಗಳನ್ನು ಉಲ್ಲೇಖಿಸಿ ಅವರು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ್ದಾರೆ.

ಜಪಾನ್​ ಭೂಕಂಪಕ್ಕಿಂತ ಇದು ಘೋರ: ಸ್ಥಳೀಯ ಕಾಲಮಾನ ಫೆ.6, 2023 ರಂದು ಮುಂಜಾನೆ 4:17 ಗಂಟೆಗೆ ಟರ್ಕಿಯ ದಕ್ಷಿಣ ಪ್ರಾಂತ್ಯದ ಕಹ್ರಮನ್‌ಮರಸ್‌ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿತ್ತು. ಕೆಲವು ನಿಮಿಷಗಳ ನಂತರ ದೇಶದ ದಕ್ಷಿಣ ಪ್ರಾಂತ್ಯವಾದ ಗಾಜಿಯಾಂಟೆಪ್‌ನಲ್ಲಿ 6.4 ತೀವ್ರತೆಯ ಭೂಕಂಪ ಮತ್ತು ಮಧ್ಯಾಹ್ನ 1:24 ಕ್ಕೆ 7.6 ತೀವ್ರತೆಯ ಭೂಕಂಪ ಸಂಭವಿಸಿತ್ತು. ಘಟನೆಯಲ್ಲಿ 28,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದು 2011ರಲ್ಲಿ ಜಪಾನ್‌ನ ಫುಕುಶಿಮಾದಲ್ಲಿ ನಡೆದ ಭೂಕಂಪದ ದುರಂತದಲ್ಲಿ ಸಂಭವಿಸಿದ ಸಾವಿನ ಪ್ರಮಾಣಕ್ಕಿಂತ ಅಧಿಕ. ಜಪಾನ್‌ನ ಫುಕುಶಿಮಾದಲ್ಲಿ ಅಂದು 18,400ಕ್ಕೂ ಹೆಚ್ಚು ಜನರು ಬಲಿಯಾಗಿದ್ದರು.

ಇದನ್ನೂ ಓದಿ:ಭೀಕರ ಭೂಕಂಪನ: ಸಾವಿನ ಸಂಖ್ಯೆ 28 ಸಾವಿರ! ಬೆಂಗ್ಳೂರು ವ್ಯಕ್ತಿಯ ಶವ ಶೀಘ್ರ ಭಾರತಕ್ಕೆ

ABOUT THE AUTHOR

...view details