ಕರ್ನಾಟಕ

karnataka

By

Published : Aug 17, 2021, 7:27 PM IST

ETV Bharat / international

ಲಾಹೋರ್‌ನಲ್ಲಿ ಮಹಾರಾಜ ರಂಜಿತ್ ಸಿಂಗ್ ಪ್ರತಿಮೆ ಮತ್ತೊಮ್ಮೆ ಧ್ವಂಸ: ಆರೋಪಿಗಳ ಬಂಧನ

ಪಾಕಿಸ್ತಾನದ ಲಾಹೋರ್​​ನಲ್ಲಿರುವ ಮಹಾರಾಜ ರಂಜಿತ್ ಸಿಂಗ್ ಪ್ರತಿಮೆಯನ್ನು ತೆಹ್ರೀಕ್-ಎ-ಲಬ್ಬೈಕ್​ನ ಸದಸ್ಯರು ಮಂಗಳವಾರ ಧ್ವಂಸಗೊಳಿಸಿದ್ದಾರೆ. ಈ ಕೃತ್ಯ ಎಸಗಿದ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸ್​ ಮೂಲಗಳು ತಿಳಿಸಿವೆ.

ahore
ಮಹಾರಾಜ ರಂಜಿತ್ ಸಿಂಗ್ ಪ್ರತಿಮೆ

ಲಾಹೋರ್​(ಪಾಕಿಸ್ತಾನ)​​:ಅತ್ತ ತಾಲಿಬಾನ್​ ಉಗ್ರರು ಅಟ್ಟಹಾಸ ಮೆರೆಯುತ್ತಿದ್ದಾರೆ. ಇತ್ತ ಪಾಕಿಸ್ತಾನದ ತೆಹ್ರೀಕ್-ಎ-ಲಬ್ಬೈಕ್​ನ ಸದಸ್ಯರು ಮಂಗಳವಾರ ಲಾಹೋರ್‌ನಲ್ಲಿ ಮಹಾರಾಜ ರಂಜಿತ್ ಸಿಂಗ್ ಪ್ರತಿಮೆಯನ್ನು ಧ್ವಂಸಗೊಳಿಸಿ ವಿಧ್ವಂಸಕ ಕೃತ್ಯ ಎಸಗಿದ್ದಾರೆ.

ಪ್ರತಿಮೆ ಧ್ವಂಸಗೊಳಿಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಲಾಹೋರ್ ಕೋಟೆ ಸಂಕೀರ್ಣದಲ್ಲಿರುವ ಮಹಾರಾಜರ ಪ್ರತಿಮೆಯನ್ನು ಧ್ವಂಸಗೊಳಿಸಿರುವುದು ಇದು ಮೂರನೇ ಬಾರಿ. ಕೋಲ್ಡ್​​ ಕಂಚಿನಿಂದ ಮಾಡಿದ ಒಂಬತ್ತು ಅಡಿ ಈ ಪ್ರತಿಮೆಯನ್ನು ಲಾಹೋರ್ ಕೋಟೆಯಲ್ಲಿ 2019 ರ ಜೂನ್​ನಲ್ಲಿ ಮಹಾರಾಜರ 180 ನೇ ಪುಣ್ಯತಿಥಿಯ ಅಂಗವಾಗಿ ಅನಾವರಣಗೊಳಿಸಲಾಯಿತು. ರಾಜ ಮಹಾರಾಜ ರಂಜಿತ್ ಸಿಂಗ್ ಕುದುರೆಯ ಮೇಲೆ ಕುಳಿತಿರುವ ಪ್ರತಿಮೆ ಇದಾಗಿದ್ದು , ಕೈಯಲ್ಲಿ ಖಡ್ಗ ಹಿಡಿದಿದ್ದು, ಸಿಖ್ ಉಡುಪು ಧರಿಸಿದ್ದಾರೆ.

ಕೈಯಲ್ಲಿ ಖಡ್ಗದೊಂದಿಗೆ ತನ್ನ ನೆಚ್ಚಿನ ಕುದುರೆ 'ಕಹರ್​ ಬಹರ್​​ ' ಮೇಲೆ ಕುಳಿತಿರುವ ಸಿಖ್ ಆಡಳಿತಗಾರನ ಪ್ರತಿಮೆಯನ್ನು ಪೂರ್ಣಗೊಳಿಸಲು ಎಂಟು ತಿಂಗಳು ಬೇಕಾಯಿತು. ಈ ಕುದುರೆ ಬಾರಾಜ್ಕೈ ರಾಜವಂಶದ ಸ್ಥಾಪಕರಾದ ದೋಸ್ತ್ ಮುಹಮ್ಮದ್ ಖಾನ್ ಅವರ ಕೊಡುಗೆಯಾಗಿದೆ. ಸಿಖ್ ಸಾಮ್ರಾಜ್ಯದ ಮೊದಲ ಮಹಾರಾಜರಾಗಿದ್ದ ರಂಜಿತ್​ ಸಿಂಗ್ ಸುಮಾರು 40 ವರ್ಷಗಳ ಕಾಲ ಪಂಜಾಬ್​ ಅನ್ನು ಆಳಿದ್ದರು. ಅವರು 1839 ರಲ್ಲಿ ನಿಧನರಾದರು.

ಅನಾವರಣಗೊಂಡ ಕೇವಲ ಎರಡು ತಿಂಗಳಲ್ಲೇ ಪ್ರತಿಮೆಯನ್ನು ತೆಹ್ರೀಕ್-ಎ-ಲಬ್ಬೈಕ್ ನ ಇಬ್ಬರು ಸದಸ್ಯರು ಧ್ವಂಸಗೊಳಿಸಿದ್ದಾರೆ. ಈ ಕೃತ್ಯ ಎಸಗಿದ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಅಂಗವಿಕಲನ ಸೋಗಿನಲ್ಲಿ ಓರ್ವ ವ್ಯಕ್ತಿ ಮತ್ತು ಆತನ ಸಹಾಯಕ ಕೋಟೆಯನ್ನು ಪ್ರವೇಶಿಸಿದ್ದರು. ಅಂಗವಿಕಲನ ರೀತಿ ನಟಿಸುತ್ತಿದ್ದ ವ್ಯಕ್ತಿ ಪ್ರತಿಮೆಗೆ ರಾಡ್​​ನಿಂದ ಹೊಡೆದ. ಈ ವೇಳೆ ಎರಡನೇ ವ್ಯಕ್ತಿ ಆತನಿಗೆ ಸಹಾಯ ಮಾಡಿದ. ದಾಳಿಯಲ್ಲಿ ಪ್ರತಿಮೆಯ ಒಂದು ತೋಳು ಮತ್ತು ಇತರ ಭಾಗಗಳು ಮುರಿದು ಬಿದ್ದಿವೆ.

ಮುಸ್ಲಿಂ ದೇಶದಲ್ಲಿ ಸಿಖ್ ಆಡಳಿತಗಾರನ ಪ್ರತಿಮೆಯನ್ನು ಸ್ಥಾಪಿಸುವುದು ತಮ್ಮ ಧರ್ಮಕ್ಕೆ ವಿರುದ್ಧವಾಗಿದೆ ಎಂದು ಈ ಆರೋಪಿಗಳು ಭಾವಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details