ಕರ್ನಾಟಕ

karnataka

By

Published : Oct 27, 2022, 7:34 PM IST

ETV Bharat / entertainment

ತಿಗಳ ಸಮುದಾಯಕ್ಕೆ ಕ್ಷಮೆಯಾಚಿಸಿದ ಡಾಲಿ ಧನಂಜಯ್.. ಹೆಡ್ ಬುಷ್ ವಿವಾದ ಸುಖಾಂತ್ಯ

ನಟ ಡಾಲಿ ಧನಂಜಯ್​ ಅಭಿನಯಿಸಿ ನಿರ್ಮಾಣ ಮಾಡಿರುವ ಚಿತ್ರ ಹೆಡ್​ಬುಷ್​ ವಿವಾದಕ್ಕೆ ಒಳಗಾಗಿತ್ತು. ಈ ಸಂಬಂಧ ಧನಂಜಯ್​ ತಿಗಳ ಸಮುದಾಯದ ಕ್ಷಮೆಯಾಚಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

head-bush-movie-controversy-ended
ಸುಖಾಂತ್ಯ ಕಂಡ ಹೆಡ್ ಬುಷ್ ವಿವಾದ : ತಿಗಳ ಸಮುದಾಯದವರಿಗೆ ಕ್ಷಮೆ ಕೇಳಿದ ಧನಂಜಯ್

ಡಾಲಿ ಧನಂಜಯ್ ಅಭಿನಯಿಸಿ ನಿರ್ಮಾಣ ಮಾಡಿರುವ ಹೆಡ್ ಬುಷ್ ಸಿನಿಮಾ ಬಿಡುಗಡೆ ಆಗಿ, ಯಶಸ್ವಿ ಪ್ರದರ್ಶನ ಕಾಣುತ್ತಿದೆ.‌ ಇದರ ಜೊತೆ ಜೊತೆಗೆ ಹೆಡ್ ಬುಷ್ ಸಿನಿಮಾಗೆ ಹಲವು ವಿವಾದಗಳು ಸುತ್ತಿಕೊಂಡಿವೆ. ಹೆಡ್ ಬುಷ್ ಸಿನೆಮಾದಲ್ಲಿ ವೀರಗಾಸೆ ಕಲಾವಿದರಿಗೆ ಅವಮಾನ‌‌ ಮಾಡಲಾಗಿದೆ‌ ಎಂದು ವೀರಗಾಸೆ ಸಮುದಾಯದ ಮುಖಂಡರು ಹೆಡ್ ಬುಷ್ ಚಿತ್ರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ವೀರಗಾಸೆ ಕಲಾವಿದರು ಶೂ ಧರಿಸುವುದಿಲ್ಲ.‌ ಆದರೆ ಈ ಚಿತ್ರದಲ್ಲಿ ಶೂ ಧರಿಸಿರುವುದು ಹಾಗು ವೀರಗಾಸೆ ಕಲಾವಿದರನ್ನು ಹೊಡೆಯುವ ದೃಶ್ಯವನ್ನು ತೋರಿಸುವ ಮೂಲಕ ವೀರಗಾಸೆ ಕಲಾವಿದರಿಗೆ ಅವಮಾನ‌ ಮಾಡಲಾಗಿದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಿನ್ನೆಯಷ್ಟೇ ವೀರಗಾಸೆ ಕಲಾವಿದರನ್ನು ಭೇಟಿ ಮಾಡಿ ಚಿತ್ರತಂಡ ಸ್ಪಷ್ಟನೆ ನೀಡಿತ್ತು.

ಜೊತೆಗೆ ಹೆಡ್ ಬುಷ್ ಚಿತ್ರದಲ್ಲಿ ಬೆಂಗಳೂರು ಕರಗದ ಬಗ್ಗೆ ಅಂದರೆ, ದೈವದ ಬಗ್ಗೆ ಬಹಳ ಹಗುರವಾದ ಪದಗಳ ಬಳಕೆ ಮಾಡಲಾಗಿದೆ. ಸಂಪ್ರದಾಯ ಬದ್ಧ ದೈವದ ಆಚರಣೆಯನ್ನು ಚಿತ್ರದಲ್ಲಿ ಬೇಕಾಬಿಟ್ಟಿ ತೋರಿಸಲಾಗಿದೆ ಎಂದು ವಹ್ನಿಕುಲ ಕ್ಷತ್ರಿಯ ಹಾಗೂ ತಿಗಳ ಸಮುದಾಯ ಆರೋಪ ಮಾಡಿತ್ತು. ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಧರ್ಮರಾಯ ಸ್ವಾಮಿ ದೇವಸ್ಥಾನ ಹಾಗೂ ಕರಗ ಸಮಿತಿ ಅಧ್ಯಕ್ಷ ಸತೀಶ್ ಒಂದು ಮನವಿಯನ್ನು ಕೊಟ್ಟಿದ್ದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ಸಂಧಾನ ಸಭೆ: ಈ ಸಂಬಂಧ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹೆಡ್ ಬುಷ್ ಚಿತ್ರದ ನಾಯಕ ಹಾಗು ನಿರ್ಮಾಪಕ ‌ಧನಂಜಯ್,‌ ಕಥೆಗಾರ ಅಗ್ನಿ ಶ್ರೀಧರ್ ಹಾಗು ಧರ್ಮರಾಯ ಸ್ವಾಮಿ ವ್ಯವಸ್ಥಾಪಕ ಸಮಿತಿ ಸದಸ್ಯರನ್ನು ಕರೆಯಿಸಿ, ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮಾ ಹರೀಶ್ ನೇತೃತ್ವದಲ್ಲಿ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಸುಂದರ್ ರಾಜ್ ಹಾಗು ಹಿರಿಯ ನಿರ್ಮಾಪಕ ಚೆನ್ನೇಗೌಡ ಸಮ್ಮುಖದಲ್ಲಿ ಸಭೆ ನಡೆಸಲಾಯಿತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅಧ್ಯಕ್ಷ ಭಾ.ಮಾ ಹರೀಶ್, ಧನಂಜಯ್, ಅಗ್ನಿ ಶ್ರೀಧರ್ ಮತ್ತು ಧರ್ಮರಾಯ ಸ್ವಾಮಿ ವ್ಯವಸ್ಥಾಪಕ ಸಮಿತಿ ಸದಸ್ಯರ ಜೊತೆ ‌ಚರ್ಚೆ ನಡೆಸಿ ವಿವಾದಕ್ಕೆ‌ ತೆರೆ ಎಳೆದರು. ಹೆಡ್ ಬುಷ್ ಚಿತ್ರದಲ್ಲಿ ಬಳಸಲಾಗಿರುವ ಜುಜಿಬಿ ಕರಗ ಪದವನ್ನು ಮ್ಯೂಟ್ ಮಾಡಲು ಚಿತ್ರತಂಡ ಒಪ್ಪಿಕೊಂಡಿದ್ದು, ವಾಣಿಜ್ಯ ಮಂಡಳಿಯಲ್ಲಿ ನಡೆದ ಸಂಧಾನ ಸಫಲವಾಗಿದೆ.

ಬಳಿಕ‌ ಮಾತನಾಡಿದ ಕಥೆಗಾರ ಅಗ್ನಿ ಶ್ರೀಧರ್, ನಿನ್ನೆ ಸಿಟ್ಟಿನಲ್ಲಿ ನಾನು ಮಾತನಾಡಿದ್ದು ಕಿಡಿಗೇಡಿಗಳ ವಿರುದ್ಧ. ನಾನು ತಿಗಳ ಸಮುದಾಯದ ವಿರುದ್ಧ ಕೋಪ ಮಾಡಿಕೊಂಡಿಲ್ಲ. ಎತ್ತಿ ಕಟ್ಟೋ ಕೆಲಸ‌ ಮಾಡಬೇಡಿ. ಆದರೆ ಜುಜಿಬಿ ಪದಪ್ರಯೋಗ ಸರಿಯಿಲ್ಲ ಎಂದು ತಿಗಳ ಸಮುದಾಯದ ಹುಡುಗರು ನಮ್ಮ ಮನೆ ಮುಂದೆ ಬಂದು ಮಾತನಾಡಿದ್ದರು. ಇಡೀ ಸಮುದಾಯಕ್ಕೆ ನೋವಾಗಿರುವುದರಿಂದ ನಾವೇ ಆ ಪದವನ್ನು ಮ್ಯೂಟ್ ಮಾಡೋದಕ್ಕೆ ಒಪ್ಪಿಕೊಂಡಿದ್ದೇವೆ ಎಂದು ಅಗ್ನಿ ಶ್ರೀಧರ್ ಸ್ಪಷ್ಟಪಡಿಸಿದರು.

ತಿಗಳ ಸಮುದಾಯಕ್ಕೆ ಕ್ಷಮೆಯಾಚಿಸಿದ ಧನಂಜಯ್ : ಬಳಿಕ ನಟ‌ ಧನಂಜಯ್ ಮಾತನಾಡಿ, ಕರಗ ಎಪಿಸೋಡ್ ಬಂದಾಗ ಶ್ರೀಧರ್ ಸರ್ ಆ ಸೀನ್ ಬೇಡ ಎಂದು ಹೇಳಿದ್ದರು. ಆದರೆ, ನಿರ್ದೇಶಕ ಶೂನ್ಯ ಹಾಗೂ ನಾನೇ ಆ ಸೀನ್ ಇರಲಿ ಎಂದು ಹೇಳಿದ್ವಿ. ಈ ದೃಶ್ಯದಿಂದ ತಿಗಳರ ಸಮುದಾಯಕ್ಕೆ ನಮ್ಮಿಂದ ನೋವಾಗಿದೆ ಎಂಬುದು ಗೊತ್ತಾಗಿದೆ. ನಾವು ಯಾರ ಭಾವನೆಗೂ ಧಕ್ಕೆ ಮಾಡಲ್ಲ. ಹೀಗಾಗಿ, ಜುಜುಬಿ ಕರಗ ಪದ ಮ್ಯೂಟ್ ಮಾಡೋಕೆ ನಿರ್ಧರಿಸಿದ್ದೇವೆ. ಇದನ್ನು ಇಲ್ಲಿಗೆ ಬಿಟ್ಟು ಕೆಲಸದ ಕಡೆ ಗಮನ ಕೊಡ್ಬೇಕು. ಒಳ್ಳೊಳ್ಳೆ‌ ಸಿನಿಮಾಗಳನ್ನು ಮಾಡ್ಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡ್ಬೇಕು. ಹಾಗಾಗಿ ನಾನು ತಿಗಳ ಸಮುದಾಯದವರಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಧನಂಜಯ ಹೇಳಿದರು.

ಹೆಡ್​​ಬುಷ್​ ವಿವಾದಕ್ಕೆ ತೆರೆ : ಇನ್ನು ತಿಗಳರ ಸಮುದಾಯದ ರಾಜ್ಯಾಧ್ಯಕ್ಷ‌ ಸುಬ್ಬಣ್ಣ ಮಾತನಾಡಿ, ಹೆಡ್ ಬುಷ್ ಸಿನಿಮಾವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ದಸರಾ ಹೇಗೆ ವಿಜೃಂಭಣೆಯಿಂದ ನಡೆಯುತ್ತೋ ಹಾಗೆ ಕರಗ ಕೂಡ ನಡೆಯುತ್ತದೆ. ಹೆಡ್ ಬುಷ್ ಸಿನಿಮಾ ತಂಡ ಕರಗ ಉತ್ಸವ ತೋರಿಸಿದ್ದು ಸರಿಯಾಗಿಲ್ಲ ಎನ್ನುವುದು ನಮ್ಮ ವಾದವಾಗಿತ್ತು. ಈ ಬಗ್ಗೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಈಗ ಚಿತ್ರತಂಡ ಎರಡು ದಿನ ಕಾಲಾವಕಾಶ ಪಡೆದಿದೆ. ಜುಜಿಬಿ ಕರಗ ಪದವನ್ನು ಮ್ಯೂಟ್ ಮಾಡೋದಕ್ಕೆ ಒಪ್ಪಿಕೊಂಡಿದ್ದಾರೆ. ನಾವು ಹೆಡ್ ಬುಷ್ ತಂಡಕ್ಕೆ ಧನ್ಯವಾದ ಸಲ್ಲಿಸುತ್ತೇವೆ. 65 ಲಕ್ಷ ಜನ ನಮ್ಮ‌ ಸಮುದಾಯದಲ್ಲಿದ್ದೇವೆ. ಎಲ್ಲರೂ ಹೋಗಿ ಹೆಡ್ ಬುಷ್ ಸಿನಿಮಾ ನೋಡುವಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳುವ ಮೂಲಕ‌ ವಿವಾದಕ್ಕೆ ತೆರೆ ಎಳೆಯಲಾಯಿತು.

ಇದನ್ನೂ ಓದಿ :ವೀರಗಾಸೆ ಕಲೆಗೆ ಅವಮಾನ ಆರೋಪ: ಡಾಲಿ ಧನಂಜಯ್ ಕಟೌಟ್​ಗೆ ಮಸಿ ಬಳಿದು ಆಕ್ರೋಶ

ABOUT THE AUTHOR

...view details