ಕರ್ನಾಟಕ

karnataka

By

Published : Oct 5, 2021, 3:52 PM IST

ETV Bharat / city

ಸಚಿವ ಈಶ್ವರಪ್ಪ ಹೆಸರು ದುರ್ಬಳಕೆ.. ಲಕ್ಷಾಂತರ ರೂ. ವಂಚನೆ: ಐವರ ವಿರುದ್ಧ ಕೇಸ್, ಇಬ್ಬರು ಅರೆಸ್ಟ್​

ಸಚಿವ ಕೆ.ಎಸ್. ಈಶ್ವರಪ್ಪ ಅವರ ಆಪ್ತರೆಂದು ಹೇಳಿಕೊಂಡು ಐವರು ಸೇರಿ ಪ್ರತ್ಯೇಕವಾಗಿ ಇಬ್ಬರಿಗೆ 36 ಲಕ್ಷ ರೂ.ಗೆ ಪಂಗನಾಮ ಹಾಕಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಐವರ ಪೈಕಿ, ಇಬ್ಬರನ್ನು ಬಂಧಿಸಲಾಗಿದ್ದು, ಮೂವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

fraud case by misusing minister ks eshwarappa's name in shivamogga
ಸಿಇಎನ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲು

ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಸಚಿವ ಕೆ.ಎಸ್. ಈಶ್ವರಪ್ಪ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಲಕ್ಷಾಂತರ ರೂ. ವಂಚಿಸಿರುವ ಐವರ ಆರೋಪಿಗಳ ವಿರುದ್ಧ ನಗರದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐವರ ಪೈಕಿ, ಇಬ್ಬರನ್ನು ಬಂಧಿಸಲಾಗಿದ್ದು, ಮೂವರಿಗೆ ಶೋಧ ಕಾರ್ಯ ನಡೆಯುತ್ತಿದೆ.

ಪ್ರಕರಣ 1:

ಮೈಸೂರಿನ ಸಿವಿಲ್ ಇಂಜಿನಿಯರ್ ರಾಜೇಶ್ ಎಂಬುವರಿಗೆ 100 ಕೋಟಿ ರೂ. ಲೋನ್ ಕೊಡಿಸುವುದಾಗಿ ನಂಬಿಸಲಾಗಿದೆ. ವಿಲ್ಲಾ ಪ್ರಾಜೆಕ್ಟ್​​ಗಾಗಿ ಈ ಲೋನ್ ಕೊಡಿಸುವುದಾಗಿ ತಿಳಿಸಲಾಗಿತ್ತು. ಇದಕ್ಕಾಗಿ ಐವರು ಆರೋಪಿಗಳು 10 ಲಕ್ಷ ರೂ. ಪಡೆದುಕೊಂಡಿದ್ದಾರೆ ಎಂದು ರಾಜೇಶ್ ದೂರಿನಲ್ಲಿ ತಿಳಿಸಿದ್ದಾರೆ. ಹಣ ವಾಪಸ್ ಕೇಳಿದಾಗ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಸಹ ದೂರಿನಲ್ಲಿ ರಾಜೇಶ್​ ಉಲ್ಲೇಖಿಸಿದ್ದಾರೆ.

ಪ್ರಕರಣ 2:

106 ವಾಟರ್ ಆರ್.ಒ. ಪ್ಲಾಂಟ್ ಕೊಡಿಸುವುದಾಗಿ ಶಿವಮೊಗ್ಗದ ಗುತ್ತಿಗೆದಾರ ಲಕ್ಷ್ಮಣ್ ಎಂಬುವರಿಗೆ ವಂಚಿಸಲಾಗಿದೆ. ಲಕ್ಷ್ಮಣ್ ಅವರಿಂದ 26.25 ಲಕ್ಷ ರೂ. ಹಣ ಪಡೆದುಕೊಂಡು ವಂಚನೆ ಮಾಡಲಾಗಿದೆ. ಆರ್.ಒ ಪ್ಲಾಂಟ್ ಕೊಡಿಸದೇ ಇದ್ದಾಗ, ಹಣ ಕೇಳಿದಾಗ ಲಕ್ಷ್ಮಣ್ ಅವರಿಗೆ ಬೆದರಿಕೆ ಹಾಕಿದ್ದಾರೆ. ಬೇಸತ್ತ ಲಕ್ಷ್ಮಣ್ ಅವರು ಎಸ್ಪಿ ಲಕ್ಷ್ಮಿ ಪ್ರಸಾದ್ ಅವರನ್ನು ಭೇಟಿಯಾಗಿ ಅಳಲು ತೋಡಿಕೊಂಡಿದ್ದಾರೆ. ಬಳಿಕ ಸಿಇಎನ್ ಪೊಲೀಸ್ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿದ್ದು, ಇಬ್ಬರನ್ನು ಬಂಧಿಸಲಾಗಿದೆ.

ಐವರ ವಿರುದ್ಧ ಕೇಸ್:

ಈ ಎರಡು ಪ್ರಕರಣದಲ್ಲಿ ಐವರು ಆರೋಪಿಗಳು ತಾವು ಸಚಿವ ಈಶ್ವರಪ್ಪ ಅವರ ಆಪ್ತರು ಎಂದು ಬಿಂಬಿಸಿಕೊಂಡಿದ್ದಾರೆ. ಇದನ್ನು ನಂಬಿ ಮೈಸೂರಿನ ರಾಜೇಶ್ ಮತ್ತು ಶಿವಮೊಗ್ಗದ ಲಕ್ಷ್ಮಣ್ ಅವರು ಹಣ ನೀಡಿದ್ದಾರೆ. ಎರಡು ಪ್ರಕರಣದಲ್ಲಿ ವಿಠಲ ರಾವ್, ಮೊಹಮ್ಮದ್ ಮುಫಾಸಿರ್, ಮಂಜುನಾಥ, ಕಾಜಿವಲೀಸ್, ಮೊಹಮ್ಮದ್ ರೆಹಮಾನ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಇಬ್ಬರನ್ನು ಬಂಧಿಸಲಾಗಿದ್ದು, ಮೂವರಿಗೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ:ಆ್ಯಂಬುಲೆನ್ಸ್​ಗಳಲ್ಲಿ ASV ಇಂಜೆಕ್ಷನ್ ಶೇಖರಣೆಗೆ ಶಾಸಕ ಹರತಾಳು ಹಾಲಪ್ಪ ಮನವಿ

ABOUT THE AUTHOR

...view details