ಮಂಗಳೂರು: ಕೋವಿಡ್ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನೆರವೇರಿಸಲು ವಿಎಚ್ ಪಿ ನೇತೃತ್ವದಲ್ಲಿ ಬಜರಂಗದಳದ 'ಭಜರಂಗಿ ವಾರಿಯರ್ಸ್ ತಂಡ' ಸಿದ್ಧವಾಗಿದ್ದು, ಈಗಾಗಲೇ ಆರು ಮೃತದೇಹಗಳಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
ಭಜರಂಗಿ ವಾರಿಯರ್ಸ್ ತಂಡ' ಇಂದು ಒಂದೇ ದಿನ 5 ಹಾಗೂ ಮೊನ್ನೆ ಒಂದು ಮೃತದೇಹದ ಅಂತ್ಯಸಂಸ್ಕಾರ ನೆರವೇರಿಸಿದೆ. ಈವರೆಗೆ ಒಟ್ಟು ಆರು ಕೋವಿಡ್ ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನೆರವೇರಿಸಿದೆ.
ಪಿಪಿಇ ಕಿಟ್, ಮಾಸ್ಕ್, ಕೈಗೆ ಗ್ಲೌಸ್ ಧರಿಸಿ ಕೋವಿಡ್ ನಿಯಮದ ಪ್ರಕಾರವೇ ಈ ತಂಡ ಅಂತ್ಯಸಂಸ್ಕಾರ ನೆರವೇರಿಸುತ್ತಿದೆ. ಈವರೆಗೆ ನಡೆದ ಎಲ್ಲ ಅಂತ್ಯಸಂಸ್ಕಾರವನ್ನು ಹಿಂದೂ ಧರ್ಮದ ಸಂಪ್ರದಾಯತೆ ಧಾರ್ಮಿಕ ವಿಧಿವಿಧಾನ ಪೂರ್ವಕವಾಗಿ ನಂದಿಗುಡ್ಡೆ ಚಿತಾಗಾರದಲ್ಲಿ ನೆರವೇರಿಸಲಾಗಿದೆ.
ಸುಮಾರು 15 ಮಂದಿಯ 'ಭಜರಂಗಿ ವಾರಿಯರ್ಸ್ ತಂಡ' ಈಗಾಗಲೇ ಅಂತ್ಯಸಂಸ್ಕಾರ ನೆರವೇರಿಸುವ ಕಾರ್ಯದಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲದೇ 200 ಮಂದಿಯ ತಂಡ ತಯಾರಾಗಿದ್ದು, ಯಾವಾಗ ಬೇಕಾದರೂ ಅಂತ್ಯಸಂಸ್ಕಾರ ನೆರವೇರಿಸಲು ಇವರೂ ಸಿದ್ಧವಾಗಿದ್ದಾರೆ.
ಈ ತಂಡ ಕೋವಿಡ್ ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸುತ್ತಿರುವುದರಿಂದ ತಂಡದಲ್ಲಿರುವ 15 ಮಂದಿಯೂ ಮನೆಗೆ ಹೋಗದೆ ಕಾರ್ಯಾಲಯದಲ್ಲಿಯೇ ಪ್ರತ್ಯೇಕವಾಗಿ ಇದ್ದು, ಕೋವಿಡ್ ಸೋಂಕು ಇದ್ದಲ್ಲಿ ಹರಡದಂತೆ ಮುಂಜಾಗ್ರತೆ ವಹಿಸುತ್ತಿದ್ದಾರೆ. ಮೊದಲ ಅಲೆಯ ಕೋವಿಡ್ ಕಾಲಘಟ್ಟದಲ್ಲಿ ಇದೇ ತಂಡವು ಕೋವಿಡ್ ನಿಂದ ಮೃತಪಟ್ಟ ಹಲವರ ಮೃತದೇಹಕ್ಕೆ ಮುಕ್ತಿ ಕಾಣಿಸಿ ಸೈ ಎನಿಸಿಕೊಂಡಿತ್ತು.
ಇದಲ್ಲದೆ ರಕ್ತದ ಅವಶ್ಯಕತೆ ಇರುವವರು, ಆ್ಯಂಬುಲೆನ್ಸ್ ಸೇವೆಗಾಗಿ, ತುರ್ತು ಔಷಧ ಸರಬರಾಜು ಮಾಡಲು ಕೂಡಾ ತಂಡ ಧಾವಿಸುತ್ತದೆ. ಅಲ್ಲದೇ ಯಾವುದೇ ಸಮಯದಲ್ಲಿ 'ಭಜರಂಗಿ ವಾರಿಯರ್ಸ್ ತಂಡ' ಸಹಾಯವಾಣಿ ಸಂಖ್ಯೆ (8884884549) ಗೆ ಕರೆ ಮಾಡಿದ್ದಲ್ಲಿ, ಸಹಾಯಕ್ಕೆ ಸದಾ ಸನ್ನದ್ಧವಾಗಿದೆ ಎಂದು ಭಜರಂಗದಳ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ತಿಳಿಸಿದ್ದಾರೆ.