ಕಲಬುರಗಿ: ಫೆ.1 ರಂದು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿರುವ ಕೇಂದ್ರ ಬಜೆಟ್ ಮೇಲೆ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿ ಜಿಲ್ಲೆಯ ಜನರು ಬಹಳ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
ಕೇಂದ್ರ ಬಜೆಟ್; ವಿಶೇಷ ಪ್ಯಾಕೇಜ್ ನಿರೀಕ್ಷೆಯಲ್ಲಿ ಕಲಬುರಗಿ ಜನತೆ
ಕೇಂದ್ರ ಬಜೆಟ್ ಮೇಲೆ ಕಲಬುರಗಿ ಜಿಲ್ಲೆಯ ಜನರು ಬಹಳ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಕಲಬುರಗಿಯ ಆರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒಂದು ಲಕ್ಷ ಕೋಟಿಯ ಒನ್ ಟೈಮ್ ವಿಶೇಷ ಪ್ಯಾಕೇಜ್, ಆರು ಜಿಲ್ಲೆ ಜೋಡಿಸುವ ಕಲ್ಯಾಣ ಪಥ್ ರಾಷ್ಟ್ರಿಯ ಹೆದ್ದಾರಿ ಯೋಜನೆ, ಆತ್ಮ ನಿರ್ಭರ ಭಾರತ ಯೋಜನೆಯಲ್ಲಿ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಗಳಿಗೆ ಸ್ಪೆಷಲ್ ಸಬ್ಸಿಡಿ ಮತ್ತು ಸ್ಪೆಷಲ್ ಪ್ಯಾಕೇಜ್ ಘೋಷಿಸುವಂತೆ ಆಗ್ರಹಿಸಿದ್ದಾರೆ.
ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಜಾರಿಗೆ ತರಲಾದ ವಿಧಿ 371 ಜೆ ಅನ್ವಯ ವಿಶೇಷ ಪ್ಯಾಕೇಜ್ ನಿರೀಕ್ಷೆಯಲ್ಲಿ ಇಲ್ಲಿನ ಜನತೆ ಇದ್ದಾರೆ. ವಿದರ್ಭ ಮತ್ತು ಈಶಾನ್ಯ ರಾಜ್ಯಗಳಿಗೆ ನೀಡಿದ ಮಾದರಿಯಲ್ಲಿ ಕಲಬುರಗಿಯ ಆರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒಂದು ಲಕ್ಷ ಕೋಟಿಯ ಒನ್ ಟೈಮ್ ವಿಶೇಷ ಪ್ಯಾಕೇಜ್ ಅನ್ನು ಮೋದಿ ಸರ್ಕಾರ ನೀಡಬಹುದೆಂಬ ಮಹದಾಸೆ ಇಟ್ಟುಕೊಂಡಿದ್ದಾರೆ. ಜೊತೆಗೆ ಕಲ್ಯಾಣ ಕರ್ನಾಟಕದ ಆರು ಜಿಲ್ಲೆ ಜೋಡಿಸುವ ಕಲ್ಯಾಣ ಪಥ್ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಬಗ್ಗೆಯೂ ನಿರೀಕ್ಷೆ ಇದೆ. ಬೃಹತ್ ಎಂಎಸ್ಕೆ ಮಿಲ್ ಬಂದ್ ಆದ ಮೇಲೆ ಈ ಭಾಗದಲ್ಲಿ ಬೃಹತ್ ಉದ್ಯೋಗ ಕೇಂದ್ರ ಇಲ್ಲದಾಗಿದೆ. ಹೀಗಾಗಿ ಈ ಭಾಗದ ನಿರುದ್ಯೋಗ ಹೋಗಲಾಡಿಸಲು ಬೃಹತ್ ಉದ್ಯೋಗ ಕೇಂದ್ರ ತೆರೆಯುವ ನಿರೀಕ್ಷೆಯೂ ಜನರಲ್ಲಿದೆ.
ಪ್ರತಿ ರಾಜ್ಯಕ್ಕೆ ನೀಡಲಾಗುತ್ತಿರುವ ಆಲ್ ಇಂಡಿಯಾ ಮೆಡಿಕಲ್ ಸೈನ್ಸ್ (ಎಮ್ಸ್) ಅನ್ನು ಕಲಬುರಗಿಯಲ್ಲಿ ಸಹ ಸ್ಥಾಪಿಸಬೇಕು ಮತ್ತು ಕೃಷಿ ಕಾಯ್ದೆ ಅನುಮೋದನೆ ಮಾಡಿದ ಹಿನ್ನೆಲೆ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಮೇಲೆ ದೊಡ್ಡ ಕಂಪನಿಗಳು ಸವಾರಿ ಮಾಡುವ ಆತಂಕ ಇದೆ. ಹೀಗಾಗಿ ಆತ್ಮ ನಿರ್ಭರ ಭಾರತ ಯೋಜನೆಯಲ್ಲಿ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ಗಳಿಗೆ ಸ್ಪೆಷಲ್ ಸಬ್ಸಿಡಿ ಮತ್ತು ಸ್ಪೆಷಲ್ ಪ್ಯಾಕೇಜ್ ಕೊಡುವ ಮೂಲಕ ದೊಡ್ಡ ಕಂಪನಿಗಳಿಗೆ ಪೈಪೋಟಿ ನೀಡುವ ಶಕ್ತಿ ತುಂಬಬೇಕು ಅನ್ನೋದು ಇಲ್ಲಿಯ ಜನತೆಯ ಕೋರಿಕೆ.