ಕಲಬುರ್ಗಿ :ದುಡಿಯಲು ಮುಂಬೈಗೆ ಗುಳೆ ಹೋದ ಕಲಬುರಗಿ ಜಿಲ್ಲೆಯ ಜನರು ಲಾಕ್ಡೌನ್ ಹಿನ್ನೆಲೆ ಮಹಾರಾಷ್ಟ್ರದಲ್ಲೇ ಸಿಲುಕಿ ಪರದಾಡುತ್ತಿದ್ದಾರೆ. ತಮ್ಮನ್ನು ರಕ್ಷಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಭಾರತ್ ಲಾಕ್ಡೌನ್ ಆದೇಶ ಜಾರಿಯಲ್ಲಿರುವ ಕಾರಣ ಎರಡು ವಾರದಿಂದ ಕೆಲಸ ಇಲ್ಲ. ಊಟ ಸಿಗುತ್ತಿಲ್ಲ. ಕುಡಿಯಲು ನೀರಿಲ್ಲ, ಗುಡಿಸಲು ಬಿಟ್ಟು ಹೊರಗೆ ಬಂದರೆ ಪೊಲೀಸರು ಲಾಠಿ ಬೀಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
'ಒಂದೊತ್ತಿಗೂ ಊಟ, ನೀರಿಲ್ಲದೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದೇವೆ; ದಯವಿಟ್ಟು ರಕ್ಷಿಸಿ'
ಚುನಾವಣೆ ಸಂದರ್ಭದಲ್ಲಿ ಆಮಿಷವೊಡ್ತೀರಿ. ಮುಂಬೈಯಿಂದ ಕರೆಸಿಕೊಂಡು ಮತ ಹಾಕಿಸಿಕೊಳ್ತೀರಿ. ಈಗ ಸಂಕಷ್ಟದಲ್ಲಿದ್ದೇವೆ. ನಮ್ಮ ಊರುಗಳಿಗೆ ವಾಪಸಾಗಲು ವ್ಯವಸ್ಥೆ ಮಾಡಿ ಎಂದು ಕಾರ್ಮಿಕರು ಜನಪ್ರತಿನಿಧಿಗಳಿಗೆ ಆಗ್ರಹಿಸಿದ್ದಾರೆ.
ರಕ್ಷಿಸುವಂತೆ ಅವಲತ್ತುಕೊಂಡ ಕಲಬುರಗಿ ಜನ
ಜಿಲ್ಲೆಯ ಸುಮಾರು 400ಕ್ಕೂ ಹೆಚ್ಚು ಜನ ಮಕ್ಕಳೊಂದಿಗೆ ಮುಂಬೈನಲ್ಲಿದ್ದೇವೆ. ನಮ್ಮ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಊರಿಗೆ ಹೋಗಲು ಆಗದೆ ಇಲ್ಲಿ ಒಂದೊಂತ್ತಿನ ಊಟವು ಸಿಗದೆ ತೊಂದರೆ ಅನುಭವಿಸುತ್ತಿದ್ದೇವೆ. ದಯವಿಟ್ಟು ನಮ್ಮನ್ನು ರಕ್ಷಿಸಿ, ನಮ್ಮೂರಿಗೆ ತಲುಪಿಸಿ ಎಂದು ಸರ್ಕಾರಕ್ಕೆ ಪರಿ ಪರಿಯಾಗಿ ಮನವಿ ಮಾಡಿದ್ದಾರೆ.