ಸೇಡಂ:ಸಾವಿರಾರು ಕುಟುಂಬಗಳ ಆಶಾದೀಪವಾಗಿದ್ದ ತಾಲೂಕಿನ ಕುರಕುಂಟಾ ಗ್ರಾಮದ ಸಿಸಿಐ (ಸಿಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ) ಸಿಮೆಂಟ್ ಘಟಕ ಪುನರ್ ಆರಂಭವಾಗುವುದೋ ಅಥವಾ ಖಾಸಗಿಯವರಿಗೆ ಮಾರಾಟವಾಗುವುದೊ? ಎಂಬ ಪ್ರಶ್ನೆ ಈಗ ಜನರನ್ನು ಕಾಡತೊಡಗಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಕುರಕುಂಟಾ ಸಿಸಿಐ ಕಾರ್ಖಾನೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ವಿಜಯಾ ಜ್ಯೋತ್ಸ್ನಾ ಅವರ ಅಧ್ಯಕ್ಷತೆಯಲ್ಲಿ ಪರಿಸರ ಸಾರ್ವಜನಿಕ ಸಭೆ ನಡೆಯಿತು. ಉದ್ದೇಶಿತ ಗಣಿಗಾರಿಕೆ ಪ್ರದೇಶದ ಜನರ ಸಲಹೆ ಮತ್ತು ಅನಿಸಿಕೆಗಳನ್ನು ಪಡೆಯಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ವಿಜಯಾ ಜ್ಯೋತ್ಸ್ನಾ, ಕಾರೆಘಟ್ಟ ಲೈಮಸ್ಟೋನ್ ಮೈನ್ 52.81 ಹೆಕ್ಟೇರ್ ಪ್ರದೇಶವನ್ನು 1.0 ಎಂ.ಟಿ.ಪಿ.ಎ ಸಾಮರ್ಥ್ಯದ ಸುಣ್ಣದ ಕಲ್ಲು ಗಣಿಗಾರಿಕೆ ಮಾಡಲು ಸಿಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ ಉದ್ದೇಶಿಸಿದೆ. ಸದರಿ ಯೋಜನೆಯಿಂದ ಸಾರ್ವಜನಿಕರ ಮೇಲಾಗುವ ದುಷ್ಪರಿಣಾಮಗಳ ಕುರಿತು ಚರ್ಚಿಸಲು ಸಭೆ ನಡೆಸಲಾಗುತ್ತಿದೆ. ಯಾವುದೇ ಸಲಹೆ, ದೂರುಗಳಿದ್ದಲ್ಲಿ ತಿಳಿಸುವಂತೆ ಕೋರಿದರು.