ಬೆಂಗಳೂರು :ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ ಪಕ್ಷದ ಆಂತರಿಕ ವಿಚಾರ ನಮಗೆ ಬೇಡ. ಅವರ ಪಕ್ಷದ ವಿಚಾರ ಅವರೇ ಬಗೆಹರಿಸಿಕೊಳ್ಳಲಿ ಎಂದಿದ್ದಾರೆ.
ಲೋಕಸಭೆ ಮಾಜಿ ಸ್ಪೀಕರ್ ಮೀರಾಕುಮಾರ್ ಅವರನ್ನು ಬೆಂಗಳೂರಿನ ಕುಮಾರಕೃಪಾ ಅತಿಥಿ ಗೃಹದಲ್ಲಿ ಮಂಗಳವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಭೋಜನಕೂಟ ಇದೆ. ಸಿಎಂ ಬದಲಾವಣೆ ವಿಚಾರ ಅವರ ಪಕ್ಷದ ವಿಚಾರಗಳು. ಆ ಬಗ್ಗೆ ನಾವ್ಯಾಕೆ ಮಾತನಾಡಬೇಕು. ಅವರನ್ನು ಪ್ರಶಂಸಿಸಲು, ಅವರಿಗೆ ಸಲಹೆ ನೀಡಲು, ಅವರನ್ನು ತೆಗಳಲು ನಾವಿಲ್ಲ ಎಂದು ಉತ್ತರಿಸಿದರು.