ಕರ್ನಾಟಕ

karnataka

By

Published : Feb 5, 2022, 2:19 AM IST

ETV Bharat / city

ನೊಂದವರಿಗೆ ನೆರವಾದ ನೆಮ್ಮದಿ ನನಗಿದೆ: ಯಡಿಯೂರಪ್ಪ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರ ಕೋವಿಡ್ ಕಥೆಗಳು ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾಜಿ ಸಿಎಂ ಬಿಎಸ್​ವೈ ಭಾಗಿಯಾಗಿದ್ದರು.

ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ಕೋವಿಡ್ ಕಾಲದಲ್ಲಿ ಪತ್ರಕರ್ತರು ಎದುರಿಸಿದ ತಲ್ಲಣಗಳಿಗೆ ನಾನು ಸ್ಪಂದಿಸಿದ್ದೇನೆ. ಅವರ ಕುಟುಂಬಗಳ ಕಣ್ಣೀರನ್ನು ಒರೆಸಲು ಒಂದಿಷ್ಟು ಸಹಕಾರಿಯಾಗಿದ್ದೇನೆ ಎನ್ನುವುದು ನನಗೆ ನೆಮ್ಮದಿ ತಂದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನುಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರಿನ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 'ಬಹುರೂಪಿ' ಪ್ರಕಾಶನ ಪ್ರಕಟಿಸಿರುವ ಶಿವಾನಂದ ತಗಡೂರರ 'ಕೋವಿಡ್ ಕಥೆಗಳು' ಕೃತಿಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಕೋವಿಡ್, ನಮ್ಮ ಸರ್ಕಾರ ಎದುರಿಸಿದ ಮಹಾ ಸಮಸ್ಯೆಯಾಗಿತ್ತು. ಪ್ರತಿಯೊಬ್ಬರ ಬದುಕನ್ನೂ ಕೋವಿಡ್ ಅಲುಗಾಡಿಸಿದೆ. ಇಂತಹ ಸಂದರ್ಭದಲ್ಲಿ ಶಿವಾನಂದ ತಗಡೂರು ಈ ಮಾರಣಾಂತಿಕ ರೋಗದಿಂದ ಸಾವನ್ನಪ್ಪಿದ ಕುಟುಂಬಗಳ ಪರವಾಗಿ ನಿಂತಿದ್ದು ಶ್ಲಾಘನೀಯ. ಅವರ ದೃಢ ಹೋರಾಟದಿಂದಾಗಿ ಅನೇಕ ಕುಟುಂಬಗಳು ನೆಮ್ಮದಿ ಕಂಡಿವೆ ಎಂದರು.

ಪ್ರಕೃತಿ ಸೇಡು ತೀರಿಸಿಕೊಂಡಿದೆ:
ಕೃತಿ ಬಿಡುಗಡೆ ಮಾಡಿದ ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ.ಸಿ.ಎನ್. ಮಂಜುನಾಥ್ 'ಪ್ರಕೃತಿಯ ವಿರುದ್ಧ ಹೋದರೆ ಏನಾಗುತ್ತದೆ ಎನ್ನುವುದಕ್ಕೆ ಕೊರೊನಾ ಒಂದು ಮಹತ್ವದ ಉದಾಹರಣೆಯಾಗಿದೆ. ತಿನ್ನಬಾರದ್ದನ್ನು ತಿಂದರೆ, ಮಾಡಬಾರದ್ದನ್ನು ಮಾಡಿದರೆ ಪ್ರಕೃತಿ ಸೇಡು ತೀರಿಸಿಕೊಳ್ಳುವ ಬಗೆ ಇದು ಎಂದು ಹೇಳಿದರು. ಇದರಿಂದಾಗಿ ಒಂದು ಸಂಘ ಮನಸ್ಸು ಮಾಡಿದರೆ ಇಂತಹ ರಚನಾತ್ಮಕ ಕಾರ್ಯ ಮಾಡಬಹುದು ಎಂದು ಗೊತ್ತಾಗುತ್ತದೆ ಎಂದರು.

ವಿಶ್ವೇಶ್ವರ ಭಟ್​ ಅವರಿಗೆ ಪಿ.ರಾಮಯ್ಯ ಪ್ರಶಸ್ತಿ ಪ್ರದಾನ

ಕೋವಿಡ್ ಎನ್ನುವ ಮಹಾ ರೋಗ ಜಗತ್ತಿನ ಎಲ್ಲರನ್ನೂ ನಲುಗಿಸಿದೆ:
ಕೃತಿಯ ಲೇಖಕ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಕೋವಿಡ್ ಎನ್ನುವ ಮಹಾ ರೋಗ ಜಗತ್ತಿನ ಎಲ್ಲರನ್ನೂ ನಲುಗಿಸಿದೆ. ನಮ್ಮ ಸುದ್ದಿ ಮನೆಗಳಿಗೆ ಅದು ಕಾಲಿಟ್ಟಾಗ ನಾವು ತಬ್ಬಿಬ್ಬಾಗಿದ್ದೆವು. ಆದರೆ ಸಂಘ ಇಂತಹ ಸಂದರ್ಭದಲ್ಲಿ ಪತ್ರಕರ್ತರ ಕುಟುಂಬಗಳ ಬೆನ್ನಿಗೆ ನಿಂತಿತು. ಇದು ನಮ್ಮೆಲ್ಲರಿಗೂ ನೆಮ್ಮದಿ ತಂದಿದೆ ಎಂದರು.

ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪನವರು ಪತ್ರಕರ್ತರ ಸಂಕಟಕ್ಕೆ ಕಿವಿಯಾಗಿ ಅವರಿಗೆ ಪರಿಹಾರ ಧನ ಮಂಜೂರು ಮಾಡದೆ ಇದ್ದರೆ ಎಷ್ಟೋ ಕುಟುಂಬಗಳು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದವು. ಈ ಕೃತಿಯನ್ನು ನನ್ನೊಳಗಿನ ತಳಮಳವನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬರೆದೆ ಎಂದು ತಿಳಿಸಿದರು.

ಪಿ.ರಾಮಯ್ಯ ಪ್ರಶಸ್ತಿ:
'ವಿಶ್ವವಾಣಿ'ಯ ಸಂಪಾದಕರಾದ ವಿಶ್ವೇಶ್ವರ ಭಟ್​ ಅವರಿಗೆ ಪಿ.ರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ ಕೃಷ್ಣ, ವಾರ್ತಾ ಇಲಾಖೆಯ ವಿಶ್ರಾಂತ ಜಂಟಿ ನಿರ್ದೇಶಕ ಹೆಚ್ ಬಿ ದಿನೇಶ್, ಚಲನಚಿತ್ರ ನಟಿ ಸೋನು ಗೌಡ, ಬಹುರೂಪಿಯ ಜಿ.ಎನ್. ಮೋಹನ್ ಮುಖ್ಯ ಅತಿಥಿಗಳಾಗಿದ್ದರು.

(ಇದನ್ನೂ ಓದಿ: ವಿಜಯಪುರ: ಸಿನಿಮೀಯ ಶೈಲಿಯಲ್ಲಿ ಕೊಲೆ.. ಅಟ್ಟಾಡಿಸಿ ಮಹಿಳೆ ಮೇಲೆ ಜೀಪ್​ ಹತ್ತಿಸಿದ ಕಿರಾತಕರು)

For All Latest Updates

ABOUT THE AUTHOR

...view details