ಬೆಂಗಳೂರು:ರಾಜ್ಯದಲ್ಲಿ ಕೋವಿಡ್ 2ನೇ ಡೋಸ್ ವ್ಯಾಕ್ಸಿನ್ ಕೊರತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ನಿಮ್ಮಿಂದಾಗದೇ ಹೋದರೆ ಅದನ್ನೇ ಹೇಳಿ. ಸತ್ಯವನ್ನು ಜನರಿಗೆ ತಿಳಿಸಿ, ಅವರನ್ನು ಯಾಮಾರಿಸಬೇಡಿ ಎಂದು ಛೀಮಾರಿ ಹಾಕಿದೆ.
ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಹಾಗೂ ಹಿರಿಯ ನ್ಯಾಯಮೂರ್ತಿ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿ, ಸರ್ಕಾರವನ್ನ ತರಾಟೆಗೆ ತಗೆದುಕೊಂಡಿದೆ. ವಿಚಾರಣೆ ವೇಳೆ ಕೋವಿಡ್ ಲಸಿಕೆ ಕೊರತೆ ಇದ್ದು, ಮೊದಲನೇ ಡೋಸ್ ಪಡೆದುಕೊಂಡವರಿಗೆ 2ನೇ ಡೋಸ್ ನೀಡಲು ವ್ಯಾಕ್ಸಿನ್ ಇಲ್ಲ ಎಂಬ ಮಾಹಿತಿಗೆ ಕೆಂಡಾಮಂಡಲವಾದ ಪೀಠ, ಸರ್ಕಾರ ನಿರ್ಧಾರದ ವಿರುದ್ಧ ಅಸಮಾಧಾನ ಹೊರಹಾಕಿದೆ.
ರಾಜ್ಯದಲ್ಲಿ 6 ಕೋಟಿಗೂ ಅಧಿಕ ಜನಸಂಖ್ಯೆ ಇದೆ. ಸರ್ಕಾರ ಒಂದು ಪರ್ಸೆಂಟ್ ಜನರಿಗೂ ವ್ಯಾಕ್ಸಿನ್ ಹಾಕಿಲ್ಲ. ಇದೇನಾ ನಿಮ್ಮ ವ್ಯಾಕ್ಸಿನೇಷನ್ ಕಾರ್ಯಕ್ರಮದ ರೀತಿ. 31 ಲಕ್ಷ ಜನರಿಗೆ 2ನೇ ಡೋಸ್ ಅನ್ನು ತುರ್ತಾಗಿ ನೀಡಬೇಕಿದೆ. ಇದನ್ನು ಯಾವಾಗ ಒದಗಿಸುತ್ತೀರಿ ಹೇಳಿ. ನಿಮ್ಮಿಂದ ಸಾಧ್ಯವಾಗದಿದ್ದರೆ ಹೇಳಿ. ಅದನ್ನೇ ನ್ಯಾಯಾಲಯ ದಾಖಲಿಸಿಕೊಳ್ಳಲಿದೆ ಎಂದು ಕಟುವಾಗಿ ಟೀಕಿಸಿತು. ಅಲ್ಲದೇ, ಮುಂದಿನ ಎರಡು ದಿನಗಳಲ್ಲಿ ವ್ಯಾಕ್ಸಿನೇಷನ್ ಮಾಡುವಂತೆ ಆದೇಶಿಸುತ್ತೇವೆ ಎಂದು ಎಚ್ಚರಿಕೆ ನೀಡಿತು.
ವ್ಯಾಕ್ಸಿನೇಷನ್ ಕೊರತೆಗೆ ಸಂಬಂಧಿಸಿದಂತೆ ಪೀಠ ಕೇಂದ್ರ ಸರ್ಕಾರಕ್ಕೂ ತರಾಟೆಗೆ ತೆಗೆದುಕೊಂಡಿತು. ಮೊದಲನೇ ಡೋಸ್ ತೆಗೆದುಕೊಂಡವರಿಗೆ 2ನೇ ಡೋಸ್ ಸಿಕ್ಕಿಲ್ಲ. 2ನೇ ಡೋಸ್ ತೆಗೆದುಕೊಳ್ಳುವುದು ಜನರ ಹಕ್ಕಲ್ಲವೇ. ಈ ಹಿಂದಿನ ಅಂಕಿ ಅಂಶಗಳ ಮಾಹಿತಿಯಂತೆ ರಾಜ್ಯದಲ್ಲಿ ತುರ್ತಾಗಿ 26 ಲಕ್ಷ ಜನರಿಗೆ ವ್ಯಾಕ್ಸಿನ್ ನೀಡಬೇಕಿದೆ. ಈ ಅಂತರವನ್ನು ಹೇಗೆ ಸರಿಪಡಿಸುತ್ತೀರಿ. ಡೋಸ್ ನೀಡುವುದು ವಿಳಂಬವಾದರೆ ವ್ಯಾಕ್ಸಿನೇಷನ್ ವಿಫಲವಾಗುವುದಿಲ್ಲವೇ ಎಂದು ಪ್ರಶ್ನಿಸಿತು.