ಕರ್ನಾಟಕ

karnataka

By

Published : Aug 7, 2021, 7:19 PM IST

ETV Bharat / city

ಖಾತೆ ಹಂಚಿಕೆಯಲ್ಲೂ ಮೇಲುಗೈ ಸಾಧಿಸಿದ್ರಾ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ!?

ಜಲ ಸಂಪನ್ಮೂಲ, ಲೋಕೋಪಯೋಗಿ, ಸಮಾಜಕಲ್ಯಾಣ ಇಲಾಖೆ ಸೇರಿ ದೊಡ್ಡ ಖಾತೆಗಳನ್ನು ತಮ್ಮ ಕಟ್ಟಾ ಬೆಂಬಲಿಗರಿಗೆ ಕೊಡಿಸುವಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಮೇಲುಗೈ ಸಾಧಿಸಿದ್ದಾರೆ. ಅದೇ ರೀತಿ ಪ್ರಬಲ ಖಾತೆಗಳ ಮೇಲೆ ಹಿಡಿತ ಸಾಧಿಸುವಲ್ಲಿ ಸಂಘ ಪರಿವಾರವೂ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ..

BSY dominates ministerial position in cm bommai cabinet
ಖಾತೆ ಹಂಚಿಕೆಯಲ್ಲೂ ಮೇಲುಗೈ ಸಾಧಿಸಿದ್ರಾ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ!?

ಬೆಂಗಳೂರು :ತಮ್ಮ ಆಪ್ತರಿಗೆ ಸಚಿವ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಇದೀಗ ದೊಡ್ಡ ಖಾತೆಗಳನ್ನು ತಮ್ಮ ಕಟ್ಟಾ ಬೆಂಬಲಿಗರಿಗೆ ಕೊಡಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ. ಖಾತೆಗಳ ಹಂಚಿಕೆಯಲ್ಲಿ ಹಗ್ಗ-ಜಗ್ಗಾಟಕ್ಕಿಳಿಯದೇ ಜಾಣ್ಮೆಯಿಂದ ಬ್ಯಾಲೆನ್ಸ್‌ ಮಾಡಲಾಗಿದೆ.

ಆದರೂ, ಹೊಸಬರಿಗೆ ಹೋಗಿರುವ ಪ್ರಬಲ ಖಾತೆಗಳ ಬಗ್ಗೆ ಕೆಲವು ಹಿರಿಯರಲ್ಲಿ ಅಪಸ್ವರ ಕೇಳಿ ಬರುತ್ತಿದೆ. ಇದಕ್ಕೆ ಕಿಮ್ಮತ್ತು ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಖಾತೆಗಳ ಹಂಚಿಕೆಯಲ್ಲಿ ಸಂಘ ಪರಿವಾರ, ಯಡಿಯೂರಪ್ಪ, ವಲಸಿಗರು, ವರಿಷ್ಠರು ಸೇರಿ ಎಲ್ಲ ಅಂಶಗಳನ್ನು ಸಮತೋಲನ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಜಾಣ ನಡೆ ಅನುಸರಿಸಿದ್ದಾರೆ ಎನ್ನಬಹುದು.

ಇನ್ನು, ಸಂಪುಟಕ್ಕೆ ಸೇರುವುದರಿಂದ ಹಿಡಿದು ಬೇಕಾದ ಖಾತೆಗಳನ್ನೇ ಪಡೆಯುವವರೆಗೂ ಒತ್ತಡ ತಂತ್ರವನ್ನು ಅನುಸರಿಸಿದ್ದ ವಲಸಿಗರು ಕೊನೆಗೂ ತಮ್ಮ ಪಟ್ಟು ಸಾಧಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಸಂಪುಟದಲ್ಲಿದ್ದವರಿಗೆ ಬಹತೇಕ ಅದೇ ಖಾತೆಗಳನ್ನು ನೀಡಲಾಗಿದೆ.

ಹೊಸದಾಗಿ ಸಂಪುಟಕ್ಕೆ ಸೇರಿದವರಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಇದರಲ್ಲಿ ಪ್ರಮುಖವಾಗಿ ಕಾರ್ಕಳ ಕ್ಷೇತ್ರದ ವಿ.ಸುನೀಲ್‌ ಕುಮಾರ್‌ ಅವರಿಗೆ ಪ್ರಬಲ ಇಂಧನ ಖಾತೆಯ ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಲಾಗಿದೆ. ತೀರ್ಥಹಳ್ಳಿ ಕ್ಷೇತ್ರದ ಆರಗ ಜ್ಞಾನೇಂದ್ರ ಅವರಿಗೆ ಗೃಹ ಖಾತೆ ಸಿಕ್ಕಿದೆ.

ಇದನ್ನೂ ಓದಿ: ಹೊಸ ಸಂಪುಟದ ನೂತನ ಸಚಿವರಿಗೆ ಖಾತೆಗಳ ಹಂಚಿಕೆ: ಯಾರ‍್ಯಾರಿಗೆ ಯಾವ ಖಾತೆ.. ಇಲ್ಲಿದೆ ಸಂಪೂರ್ಣ ವಿವರ

ಆರಗ ಜ್ಞಾನೇಂದ್ರ ಮತ್ತು ಸುನೀಲ್‌ ಕುಮಾರ್‌ ಅವರಿಬ್ಬರಿಗೆ ಹಂಚಿಕೆಯಾಗಿರುವ ಖಾತೆಗಳ ಬಗ್ಗೆ ಎಲ್ಲೆಡೆ ಅಚ್ಚರಿ ವ್ಯಕ್ತವಾಗ್ತಿದೆ. ಅದರಲ್ಲೂ ಗೃಹ ಖಾತೆಯನ್ನು ಹಿರಿಯ, ಅನುಭವಿಗಳನ್ನು ಪಕ್ಕಕ್ಕಿಟ್ಟು ಆರಗ ಜ್ಞಾನೇಂದ್ರ ಅವರಿಗೆ ನೀಡಲಾಗಿದೆ. ಹಿರಿಯರನ್ನು ಬದಿಗಿಟ್ಟು ಹೊಸಬರಿಗೆ ಶಕ್ತಿ ತುಂಬಲಾಗಿದೆ.

ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದ ಜಲಸಂಪನ್ಮೂಲ ಖಾತೆಯನ್ನು ಹಿರಿಯರಾದ ಗೋವಿಂದ ಕಾರಜೋಳ ಅವರಿಗೆ ನೀಡಲಾಗಿದೆ. ಅವರು ಯಡಿಯೂರಪ್ಪ ಸಂಪುಟದಲ್ಲಿ ಲೋಕೋಪಯೋಗಿ ಇಲಾಖೆ ನಿರ್ವಹಿಸಿದ್ದರು. ಈ ಖಾತೆಯನ್ನು ನಿಷ್ಠರಾದ ಸಿ ಸಿ ಪಾಟೀಲ್ ಅವರಿಗೆ ದೊರಕಿಸಿ ಕೊಡುವಲ್ಲಿ ಯಶಸ್ವಿಯಾಗಿಯಾಗಿದ್ದಾರೆ.

ಭಾರೀ ಅನುದಾನವುಳ್ಳ ಜಲಸಂಪನ್ಮೂಲ ಖಾತೆ ಹಿಂದಿನ ಸಂಪುಟದಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿಯೇ ಇತ್ತು. ಕಾವೇರಿ ನೀರಾವರಿ ನಿಗಮ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳಲ್ಲಿ ಹಣಕಾಸು ಇಲಾಖೆಯ ಕ್ಲಿಯೆರೆನ್ಸ್‌ ಇಲ್ಲದೆ, ಬೋರ್ಡ್‌ ಮೀಟಿಂಗ್‌ಗಳನ್ನೂ ನಡೆಸದೇ ವಿಜಯೇಂದ್ರ ಸೂಚನೆ ಮೇರೆಗೆ 20,000 ಕೋಟಿ ರೂ. ಟೆಂಡರ್‌ ಅಂತಿಮಗೊಳಿಸಲಾಗಿದೆ. ಇದರಲ್ಲಿ ಸಾವಿರಾರು ಕೋಟಿ ರೂ. ಕಿಕ್ ಬ್ಯಾಕ್‌ ವ್ಯವಹಾರ ನಡೆದಿದೆ ಎಂದು ಬಿಜೆಪಿ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್‌ ಆರೋಪಿಸಿದ್ದರು. ಈಗ ಈ ಖಾತೆ ಯಡಿಯೂರಪ್ಪ ಅವರಿಗೆ ನಿಷ್ಠರಾದ ಗೋವಿಂದ ಕಾರಜೋಳ ಅವರಿಗೆ ನೀಡಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.

ನೀರಾವರಿ ಟೆಂಡರ್‌ಗಳ ಬಗ್ಗೆ ವಿಶ್ವನಾಥ್‌ ಅವರು ದಾಖಲೆಗಳ ಸಮೇತ ಆರೋಪ ಮಾಡಿದ್ದರು. ಅಲ್ಲದೆ, ಕಾಂಗ್ರೆಸ್‌ ಕೂಡ ಆರೋಪಿಸಿ ಆ ಟೆಂಡರ್‌ ಮೊತ್ತ 20,000 ಕೋಟಿ ರೂ.ಗಳಲ್ಲ, 21,764 ಕೋಟಿ ರೂ. ಟೆಂಡರ್‌ ಎಂದಿತ್ತು. ಅಂದರೆ, ವಿಶ್ವನಾಥ್‌ ಹೇಳಿದ್ದಕ್ಕಿಂತ 1,764 ಕೋಟಿ ರೂ. ಹೆಚ್ಚು ಎಂದು ಹೊಸ ಅಂಕಿ-ಅಂಶಗಳನ್ನ ನೀಡಿತ್ತು. ಇಡೀ ಟೆಂಡರ್‌ನಲ್ಲಿ ಶೇ.10 ರಷ್ಟು ಕಮೀಷನ್‌ ವ್ಯವಹಾರ ನಡೆದಿದೆ ಎಂದು ವಿಶ್ವನಾಥ್‌ ಆರೋಪಿಸಿದ್ದರೆ, 2,100 ಕೋಟಿ ರೂ. ಬರೀ ಕಮೀಷನ್‌ ವ್ಯವಹಾರವೇ ನಡೆದಿದೆ ಎಂದು ಕಾಂಗ್ರೆಸ್‌ ಆರೋಪ ಮಾಡಿತ್ತು.

ಇನ್ನು, ಒಟ್ಟು 29 ಸಚಿವರ ಪೈಕಿ 15 ಸಚಿವರಿಗೆ ಹಿಂದಿನ ಸಂಪುಟದಲ್ಲಿ ನಿರ್ವಹಿಸಿದ್ದ ಖಾತೆಗಳನ್ನೇ ನೀಡಲಾಗಿದ್ದು, 7 ಸಚಿವರ ಖಾತೆ ಬದಲಾವಣೆ ಮಾಡಲಾಗಿದೆ. ಉಳಿದಂತೆ ಸಂಪುಟದಲ್ಲಿ ವಲಸಿಗರಿಗೆ ಹಿಂದಿನ ಸಂಪುಟದಲ್ಲಿದ್ದ ಖಾತೆಗಳನ್ನೇ ನೀಡಲಾಗಿದೆ. ಅವರ ಮನವಿಯಂತೆ ಹಳೆಯ ಖಾತೆಗಳನ್ನೇ ಕೊಡಲಾಗಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು ನಗರಾಭಿವೃದ್ಧಿ ಮತ್ತು ಗೃಹ ಖಾತೆಗಳ ಮೇಲೆ ಕಣ್ಣಿಟ್ಟಿದ್ದ ಆರ್.‌ಅಶೋಕ್‌ ಅವರಿಗೆ ಹಿಂದಿನ ಸಂಪುಟದಲ್ಲಿ ಹೊಂದಿದ್ದ ಕಂದಾಯ ಇಲಾಖೆಯನ್ನೇ ನೀಡಲಾಗಿದೆ. ಅಲ್ಲದೆ, ಹೊಸದಾಗಿ ಸಂಪುಟಕ್ಕೆ ಸೇರಿದ್ದ ಶಂಕರ ಮುನೇನಕೊಪ್ಪ, ಹಾಲಪ್ಪ ಆಚಾರ್‌, ಬಿ ಸಿ ನಾಗೇಶ್ ಅವರಿಗೂ‌ ಮಹತ್ವದ ಖಾತೆಗಳನ್ನೇ ಹಂಚಿಕೆ ಮಾಡಲಾಗಿದೆ.

ಹಿಂದಿನ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಡಾ.ಸಿ ಎನ್ ಅಶ್ವತ್ಥ್‌ ನಾರಾಯಣ ಅವರಿಗೆ ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ಖಾತೆಗಳನ್ನೇ ಈ ಸಂಪುಟದಲ್ಲೂ ಮುಂದುವರಿಸಲಾಗಿದೆ. ಮುಖ್ಯವಾಗಿ ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಭಾರೀ ಬೇಡಿಕೆ ಇತ್ತು. ಅದಕ್ಕಾಗಿ ಬೆಂಗಳೂರು ಮೂಲದ ಸಚಿವರು ಭಾರೀ ಪೈಪೋಟಿ ನಡೆಸಿದ್ದರು. ಯಾವುದೇ ಅಸಮಾಧಾನಕ್ಕೆ ಅಸ್ಪದ ಕೊಡದೆ ಸಿಎಂ ಈ ಖಾತೆಯನ್ನು ತಮ್ಮಲ್ಲೇ ಇಟ್ಟುಕೊಂಡಿದ್ದಾರೆ.

ಮುಖ್ಯಮಂತ್ರಿಯೇ ಹಣಕಾಸು ಇಲಾಖೆಯನ್ನು ಇಟ್ಟುಕೊಳ್ಳುವ ಪರಂಪರೆ ಈ ಸಂಪುಟದಲ್ಲೂ ಮುಂದುವರಿದಿದೆ. ಎಸ್.‌ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ನಂತರದ ಕಾಲದಲ್ಲಿ ಹಣಕಾಸು ಇಲಾಖೆ ಸ್ವತಂತ್ರ ಸಚಿವರನ್ನು ನೋಡಿಲ್ಲ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೊಂದಿದ್ದ ಸಾರಿಗೆ ಇಲಾಖೆಯನ್ನು ಈ ಬಾರಿ ಬಿ.ಶ್ರೀರಾಮುಲು ಅವರಿಗೆ ಕೊಡಲಾಗಿದೆ. ಭಾರೀ ಅನುದಾನವಿದ್ದ ಖಾತೆ ಸಮಾಜ ಕಲ್ಯಾಣವನ್ನು ಕಿತ್ತುಕೊಳ್ಳಲಾಗಿದೆ. ದೊಡ್ಡ ಮಟ್ಟದ ಅಸಮಾಧಾನಕ್ಕೆ ಆಸ್ಪದ ಕೊಡದೆ ಸಮತೋಲನವಾಗಿ ಖಾತೆ ಹಂಚಿಕೆ ಮಾಡಲಾಗಿದೆ. ಆದರೆ, ಇದರಲ್ಲಿ ಬಿಎಸ್‌ವೈ ಮೇಲುಗೈ ಸಾಧಿಸಿದ್ದಾರೆ.

ABOUT THE AUTHOR

...view details