ಕರ್ನಾಟಕ

karnataka

By

Published : Jun 18, 2022, 6:41 AM IST

ETV Bharat / city

ಡಿನೋಟಿಫಿಕೇಶನ್ ಪ್ರಕರಣ: ಜನಪ್ರತಿನಿಧಿ ಕೋರ್ಟ್​ಗೆ ಜಾಮೀನು ಕೋರಿ ಯಡಿಯೂರಪ್ಪ ಅರ್ಜಿ ಸಲ್ಲಿಕೆ

ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಶುಕ್ರವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಮಂಜೂರು ಮಾಡುವಂತೆ ಕೋರ್ಟ್​ಗೆ ಮನವಿ ಮಾಡಿದರು.

ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ಬೆಳ್ಳಂದೂರು ಮತ್ತು ದೇವರಬೀಸನಹಳ್ಳಿ ಗ್ರಾಮಗಳಲ್ಲಿನ ಅಕ್ರಮ ಡಿನೋಟಿಫಿಕೇಶನ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಬೆಳ್ಳಂದೂರು ನಿವಾಸಿ ವಾಸುದೇವ ರೆಡ್ಡಿ ಸಲ್ಲಿಸಿದ ದೂರಿನ ಬಗ್ಗೆ ವಿಚಾರಣೆ ನಡೆಸುತ್ತಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರೊಂದಿಗೆ ಖುದ್ದಾಗಿ ಹಾಜರಾದ ಯಡಿಯೂರಪ್ಪ, ಜಾಮೀನು ಮಂಜೂರು ಮಾಡುವಂತೆ ಕೋರ್ಟ್​ಗೆ ಮನವಿ ಮಾಡಿದರು. ಜಾಮೀನು ನೀಡುವ ಕುರಿತಂತೆ ಅರ್ಜಿದಾರರಿಗೆ ಅಭಿಪ್ರಾಯ ತಿಳಿಸಲು ಸೂಚಿಸಿ ಪ್ರಕರಣವನ್ನು ಕೋರ್ಟ್ ಶನಿವಾರಕ್ಕೆ ಮುಂದೂಡಿದೆ.

ಡಿನೋಟಿಫಿಕೇಶನ್ ಪ್ರಕರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ತಮ್ಮ ಸ್ಥಾನ ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಆರೋಪಿಸಲಾಗಿಲ್ಲ. ಅಂತಿಮ ಬಿ ರಿಪೋರ್ಟ್ ವರದಿ ತಿರಸ್ಕರಿಸಿ, ಖಾಸಗಿ ದೂರನ್ನು ಆಧರಿಸಿ ನ್ಯಾಯಾಲಯವು ಸಂಜ್ಞೆ ಪರಿಗಣಿಸಿ, ಸಮನ್ಸ್‌ ಜಾರಿ ಮಾಡಿದೆ. ಇದರಂತೆ ಯಡಿಯೂರಪ್ಪ ನ್ಯಾಯಾಲಯದ ಮುಂದೆ ಹಾಜರಾಗಿರುವುದರಿಂದ ಅವರನ್ನು ವಶಕ್ಕೆ ಪಡೆಯುವ ಅಗತ್ಯವಿಲ್ಲ. ನಮ್ಮ ಕಕ್ಷಿದಾರರಿಗೆ ಜಾಮೀನು ನೀಡುವಂತೆ ಹಿರಿಯ ನ್ಯಾಯವಾದಿ ನಾಗೇಶ್ ಅವರು ಮನವಿ ಮಾಡಿದರು.

ನಮ್ಮ ಕಕ್ಷಿದಾರರಾದ ಯಡಿಯೂರಪ್ಪ ವಿರುದ್ಧ ಮಾಡಲಾಗಿರುವ ಸಂಪೂರ್ಣ ಆರೋಪವು ದೋಷಪೂರಿತ ಮತ್ತು ಕಟ್ಟುಕತೆಯಾಗಿದೆ. ದೂರುದಾರರು ಆರೋಪಿಸಿರುವಂತೆ ಯಾವುದೇ ಅಪರಾಧದಲ್ಲಿ ಅವರು ಭಾಗಿಯಾಗಿಲ್ಲ. ಯಡಿಯೂರಪ್ಪ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್‌ 13 (1)(ಡಿ) ಅಡಿ ಅಪರಾಧ ಎಸಗಿರುವುದಕ್ಕೆ ಯಾವುದೇ ದಾಖಲೆಗಳು ಇಲ್ಲ. ಅಲ್ಲದೇ, ಆರೋಪಿಸಲಾಗಿರುವ ಅಪರಾಧವು ಜೀವಾವಧಿ ಅಥವಾ ಮರಣ ದಂಡನೆ ವಿಧಿಸುವ ಶಿಕ್ಷೆ ಒಳಗೊಂಡಿಲ್ಲ. ಹೀಗಾಗಿ, ಜಾಮೀನು ನೀಡಲು ನ್ಯಾಯಾಲಯ ವಿಧಿಸುವ ಷರತ್ತುಗಳಿಗೆ ಬದ್ಧವಾಗಿರಲು ಸಿದ್ಧವಾಗಿರುವುದರಿಂದ ಜಾಮೀನು ಮಂಜೂರು ಮಾಡಬೇಕೆಂದು ಹಿರಿಯ ವಕೀಲ ನ್ಯಾ ಯಾಲಯಕ್ಕೆ ಮನವಿ ಮಾಡಿದರು.

ಏನಿದು ಪ್ರಕರಣ: ಜೆಡಿಎಸ್ - ಬಿಜೆಪಿ ಮೈತ್ರಿ ಸರ್ಕಾರದ ಆಡಳಿತದ ಸಂದರ್ಭದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ 2006ರ ಜೂನ್‌ 21ರಂದು ಸರ್ಕಾರಿ ಅಧಿಸೂಚನೆಯ ಮೂಲಕ ಬೆಳ್ಳಂದೂರು ಮತ್ತು ದೇವರಬೀಸನಹಳ್ಳಿ ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಂಡಿದ್ದ 15.30 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವ, ಕಾಂಗ್ರೆಸ್‌ ಶಾಸಕ ಆರ್‌ ವಿ ದೇಶಪಾಂಡೆ ಅವರನ್ನು ಪ್ರಥಮ ಆರೋಪಿಯನ್ನಾಗಿಯೂ, ಬಿ ಎಸ್‌ ಯಡಿಯೂರಪ್ಪ ಅವರನ್ನು ಎರಡನೇ ಆರೋಪಿಯನ್ನಾಗಿಯೂ ಉಲ್ಲೇಖಿಸಿ ಒಟ್ಟು ಹತ್ತು ಮಂದಿಯ ವಿರುದ್ಧ ವಾಸುದೇವ ರೆಡ್ಡಿ ದಾವೆ ಹೂಡಿದ ಪ್ರಕರಣದ ವಿಚಾರಣೆ ಇದಾಗಿದೆ.

ಇದನ್ನೂ ಓದಿ:ಅಕ್ರಮ ಡಿನೋಟಿಫಿಕೇಶನ್​ ಆರೋಪ ಪ್ರಕರಣ.. ಬಿಎಸ್​ವೈ ವಿರುದ್ಧ ಕ್ರಿಮಿನಲ್‌ ಕೇಸ್​ ದಾಖಲಿಸುವಂತೆ ಕೋರ್ಟ್​ ಆದೇಶ

ABOUT THE AUTHOR

...view details