ಕರ್ನಾಟಕ

karnataka

ETV Bharat / city

ಗದ್ದೆಗೆ ಔಷಧ ಸಿಂಪಡಿಸಲು ಬಂತು ಡ್ರೋನ್: ಎಕರೆ ಭೂಮಿಗೆ ಐದೇ ನಿಮಿಷ ಸಾಕು

ವಿವಿಧ ಕ್ಷೇತ್ರಗಳಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಾ ಯಶಸ್ಸು ಕಂಡಿರುವ ಡ್ರೋನ್ (Fertilizer spray Drone) ಇದೀಗ ಕೃಷಿ ಕ್ಷೇತ್ರಕ್ಕೂ ಪರಿಚಯಿಸಲಾಗಿದೆ. ಬೃಹತ್ ಗಾತ್ರದ ಡ್ರೋಣ್​ಗೆ ಹತ್ತಾರು ಲೀಟರ್ ಸಾಮರ್ಥ್ಯದ ರಾಸಾಯನಿಕ ಔಷಧ ತುಂಬಿದ ಟ್ಯಾಂಕ್​ಗೆ ಅಳವಡಿಸಿ, ಭತ್ತದ ಗದ್ದೆಯಲ್ಲಿ ಹಾಯಿಸಿ ಔಷಧ ಸಿಂಪಡಿಸುವ ತಂತ್ರಜ್ಞಾನವನ್ನು ದೇಶದ ವಿವಿಧ ರಾಜ್ಯಗಳಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ.

By

Published : Nov 11, 2021, 10:29 PM IST

agricultural-spray-drone-displayed-in-bangalore-agriculture-fair
ಕ್ರಿಮಿನಾಶಕ ಸಿಂಪಡಣೆ ಡ್ರೋನ್

ಬೆಂಗಳೂರು: ಕೃಷಿ ಕ್ಷೇತ್ರ ಸಕಾಲಕ್ಕೆ ಕಾರ್ಯನಿರ್ವಹಣೆಯನ್ನು ಬಯಸುತ್ತದೆ. ಸಾಧ್ಯವಾಗದಿದ್ದಾಗ ಸಾಕಷ್ಟು ಸಮಸ್ಯೆಗಳೂ ಎದುರಾಗಬಹುದು. ಔಷಧ ಸಿಂಪಡಣೆಯಂತೂ ಕೊಂಚ ಸಮಯ ತಡವಾದರೂ ಬೆಳೆ ನಾಶಕ್ಕೆ ಕಾರಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಇಂದು ಹಲವಾರು ಸಂಸ್ಥೆಗಳು ಬತ್ತದ ಗದ್ದೆಗಳಿಗೆ ಔಷಧ ಸಿಂಪಡಿಸಲು ಆಧುನಿಕ ತಂತ್ರಜ್ಞಾನ ಬಳಕೆಯ ಮೊರೆ ಹೋಗಿವೆ. ಅದರಲ್ಲಿ ಡ್ರೋಣ್ (Drone) ಕೂಡ ಒಂದು.


ಹೌದು, ವಿವಿಧ ಕ್ಷೇತ್ರಗಳಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಾ ಯಶಸ್ಸು ಕಂಡಿರುವ ಡ್ರೋನ್ ಇದೀಗ ಕೃಷಿ ಕ್ಷೇತ್ರಕ್ಕೂ ಪರಿಚಯಿಸಲಾಗಿದೆ. ಬೃಹತ್ ಗಾತ್ರದ ಡ್ರೋಣ್​ಗೆ (Fertilizer spray Drone) ಹತ್ತಾರು ಲೀಟರ್ ಸಾಮರ್ಥ್ಯದ ರಾಸಾಯನಿಕ ಔಷಧ ತುಂಬಿದ ಟ್ಯಾಂಕ್​ಗೆ ಅಳವಡಿಸಿ, ಭತ್ತದ ಗದ್ದೆಯಲ್ಲಿ ಹಾಯಿಸಿ ಔಷಧ ಸಿಂಪಡಿಸುವ ತಂತ್ರಜ್ಞಾನವನ್ನು ದೇಶದ ವಿವಿಧ ರಾಜ್ಯಗಳಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಹತ್ತಾರು ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಒಬ್ಬೊಬ್ಬರದ್ದೂ ಒಂದೊಂದು ವೈಶಿಷ್ಟ್ಯವಿದೆ.

ಬೆಂಗಳೂರಿನ ಜಕ್ಕೂರು ಸಮೀಪ ಇರುವ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ 2021ರ ಕೃಷಿ ಮೇಳ (2021 agricultural fair) ನಡೆಯುತ್ತಿದೆ. ಇಲ್ಲಿನ ಹಲವು ವೈಶಿಷ್ಟ್ಯಗಳಲ್ಲಿ ಡ್ರೋಣ್ ಸಹ ಒಂದು. ಐದಾರು ಕಂಪನಿಗಳು ತಮ್ಮ ಆವಿಷ್ಕಾರವನ್ನು ಇಲ್ಲಿ ಗ್ರಾಹಕರ ಆಯ್ಕೆಗೆ ಮುಂದಿಟ್ಟಿದ್ದಾರೆ.

ಡ್ರೋನ್​ ಬಹುಪಯೋಗಿ:

ಕೃಷಿ ಭೂಮಿಗಳಲ್ಲಿ ಕೀಟನಾಶಕ ಸಿಂಪಡಣೆಗೆ ಡ್ರೋನ್ ಸಿದ್ಧಪಡಿಸಿರುವ ಕಂಪನಿಗಳಲ್ಲಿ ಒಂದಾದ ಜನರಲ್ ಎರೊನಾಟಿಕ್ಸ್ ಕಂಪನಿ ಮಾರುಕಟ್ಟೆ ವಿಶ್ಲೇಷಕಿ ರಚನಾ ಪ್ರಕಾರ, ಕೃಷಿ ಡ್ರೋನ್ ಅ​ನ್ನು ಕೀಟನಾಶಕ ಔಷಧ ಸಿಂಪಡಣೆಗೆ ಬಳಸುತ್ತೇವೆ. ಕಡಿಮೆ ಅವಧಿಯಲ್ಲಿ ಹೆಚ್ಚು ಸ್ಥಳಕ್ಕೆ ಔಷಧಿ ಸಿಂಪಡಿಸಬಹುದು. ಕಡಿಮೆ ನೀರು ಬಳಕೆ ಮಾಡಬಹುದು. ಪ್ರತಿ ಎಕರೆ ಭೂಮಿಗೆ ಕೇವಲ ಐದು ನಿಮಿಷದಲ್ಲಿ ಔಷಧ ಸಿಂಪಡಿಸುವ ಸಾಮರ್ಥ್ಯ ಹೊಂದಿರುತ್ತದೆ. ನಮ್ಮ ಸಂಸ್ಥೆ 16 ಲೀಟರ್ ಸಾಮಥ್ಯದ ಟ್ಯಾಂಕ್ ಹೊಂದಿದ್ದು, ಇದರ ಒಂದು ಬ್ಯಾಟರಿ ಅರ್ಧ ಗಂಟೆ ಬಾಳಿಕೆ ಬರುತ್ತದೆ.

ಕಡಿಮೆ ವೆಚ್ಚದಲ್ಲಿ ಔಷಧ ಸಿಂಪಡಣೆ:

ದೇಶದ ಎಲ್ಲದ ರಾಜ್ಯಕ್ಕೂ ನಮ್ಮ ಉತ್ಪನ್ನ ಮಾರಾಟವಾಗುತ್ತಿದೆ. ದಕ್ಷಿಣ ಭಾರತದಲ್ಲಿ ಈಗೀಗ ಜನಪ್ರಿಯವಾಗುತ್ತಿದೆ. ಒಂದು ಎಕರೆಗೆ ಔಷಧ ಸಿಂಪಡಿಸಲು 250 ರಿಂದ 300 ರೂ. ವೆಚ್ಚವಾಗುತ್ತದೆ. ಯಂತ್ರಕ್ಕೆ 10 ಲಕ್ಷರೂ.ವರೆಗೂ ಬೆಲೆ ಇದೆ. ಒಬ್ಬರು ಕೊಂಡು ಹಲವು ಜಮೀನುಗಳಿಗೆ ಬಾಡಿಗೆ ರೂಪದಲ್ಲಿ ಬಳಸಬಹುದು. ಸರ್ಕಾರದ ಜತೆ ನಾವು ಮಾತುಕತೆ ನಡೆಸಿದ್ದು, ಸದ್ಯವೇ ಇದಕ್ಕೆ ಪರವಾನಗಿ ಸಿಗುವ ನಿರೀಕ್ಷೆ ಇದೆ. ಆಗ ಸಬ್ಸಿಡಿ ಸಹ ನೀಡಲು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details