ಬೆಂಗಳೂರು :ನಕಲಿ ದಾಖಲಾತಿ ಸೃಷ್ಟಿಸಿ ವಿದೇಶಿ ಪ್ರಜೆಗಳ ವೀಸಾ ಹಾಗೂ ಪಾಸ್ ಪೋರ್ಟ್ ನವೀಕರಿಸಲು ಸಹಕರಿಸಿ ಭಾರತದಲ್ಲಿ ಸುಮಾರು 17 ವರ್ಷಗಳಿಂದ ಅಕ್ರಮವಾಗಿ ವಾಸ್ತವ್ಯ ಹೂಡಿದ್ದ ಉಗಾಂಡ ದೇಶದ ಪ್ರಜೆಯನ್ನು ಗಡಿಪಾರು ಮಾಡಲಾಗಿದೆ. ಬೋಸ್ಕೋ ಕಾವೇಸಿ ಗಡಿಪಾರಾದ ಉಗಾಂಡ ಮೂಲದ ಅರೋಪಿಯಾಗಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
1995ರಲ್ಲಿ ಸ್ಟೂಡೆಂಟ್ ವೀಸಾದಡಿ ಭಾರತಕ್ಕೆ ಬೋಸ್ಕೋ ಕಾವೇಸಿ ಬಂದಿದ್ದ. ಇವರ ವೀಸಾ ಅವಧಿ 2005ರಲ್ಲಿ ಮುಗಿದರೂ ಅಕ್ರಮವಾಗಿ ಭಾರತದಲ್ಲಿ ವಾಸವಾಗಿದ್ದ. 2006 ರಲ್ಲಿ ಆರೋಪಿಗೆ ಅನಧಿಕೃತ ವಾಸ ಹಿನ್ನೆಲೆಯಲ್ಲಿ ಆರು ತಿಂಗಳ ಸಜೆಯಾಗಿತ್ತು. ದೇಶ ಬಿಟ್ಟು ಹೋಗುವಂತೆ ನೋಟಿಸ್ ಜಾರಿ ಮಾಡಿದ್ದರೂ ಅಕ್ರಮವಾಗಿ ಇಲ್ಲೇ ಉಳಿದುಕೊಂಡಿದ್ದ.
ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಈತ ಭಾರತೀಯ ಯುವತಿಯನ್ನು ಮದುವೆಯಾಗಿರುವುದಾಗಿ ಹೇಳಿ ಇಲ್ಲಿ ನೆಲೆಸಲು ಅವಕಾಶ ಕೋರಿದ್ದನು. ವಿಚಾರಣೆ ನಡೆಸಿದ್ದ ಕೋರ್ಟ್ 2022 ರಲ್ಲಿ ಈತನ ಅರ್ಜಿ ತಿರಸ್ಕೃತಗೊಳಿಸಿತ್ತು. ಈ ಸಂಬಂಧ ವಿದೇಶಿ ನೋಂದಣಿ ಕೇಂದ್ರ(ಎಫ್ಐಆರ್ಓ) ಕೇಂದ್ರ ಗೃಹ ಸಚಿವಾಲಯಕ್ಕೆ ನೀಡಿದ ಮಾಹಿತಿ ಮೇರೆಗೆ ದೆಹಲಿ ಇಮಿಗ್ರೇಷನ್ ಅಧಿಕಾರಿಗಳು ಜುಲೈ 19ರಂದು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು.