ಕರ್ನಾಟಕ

karnataka

By

Published : Nov 27, 2020, 3:13 PM IST

ETV Bharat / city

ಪೊಲೀಸ್ ಇಲಾಖೆ ಆಧುನೀಕರಣಕ್ಕಾಗಿ 100 ಕೋಟಿ ಮೀಸಲು.. ಸಿಎಂ ಯಡಿಯೂರಪ್ಪ ಭರವಸೆ

ಅಪರಾಧ ಪ್ರಕರಣಗಳ ತನಿಖೆ ಹಾಗೂ ವಿಚಾರಣೆಗೆ ನೂತನ ವಿಧಿ ವಿಜ್ಞಾನ ಪ್ರಯೋಗಾಲಯ ಸಹಕಾರಿಯಾಗಿದೆ. ತಂತ್ರಜ್ಞಾನದಲ್ಲಿ ಒಂದು ಹೆಜ್ಜೆ ಮುಂದೆ ಇದ್ದೇವೆ. ಅಪರಾಧ ಪತ್ತೆ ಕಾರ್ಯದಲ್ಲಿ ಸಾಕಷ್ಟು ಮಹತ್ವದ ದಾಖಲಾತಿಗಳನ್ನು ಒದಗಿಸುವ ನಿಟ್ಟಿನಲ್ಲಿ ನಾವು ಮುಂದುವರೆದಿದ್ದೇವೆ..

ಪೊಲೀಸ್ ಸಮುದಾಯ ಭವನದ ಶಂಕುಸ್ಥಾಪನೆ
ಪೊಲೀಸ್ ಸಮುದಾಯ ಭವನದ ಶಂಕುಸ್ಥಾಪನೆ

ಬೆಂಗಳೂರು: ಪೊಲೀಸ್ ಇಲಾಖೆಯ ಆಧುನೀಕರಣಕ್ಕಾಗಿ ಮುಂದಿನ ಬಜೆಟ್​ನಲ್ಲಿ 100 ಕೋಟಿ ರೂಪಾಯಿ ಮೀಸಲಿಡುವ ಬಗ್ಗೆ ಗಮನಹರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ‌.

ಪೊಲೀಸ್ ಸಮುದಾಯ ಭವನದ ಶಂಕುಸ್ಥಾಪನೆ

₹36 ಕೋಟಿ ವೆಚ್ಚದಲ್ಲಿ ಮಡಿವಾಳದಲ್ಲಿ ತಲೆ ಎತ್ತಿರುವ ನ್ಯಾಯ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ಕಟ್ಟಡ ಉದ್ಘಾಟನೆ ಹಾಗೂ ಪೊಲೀಸ್ ಸಮುದಾಯ ಭವನದ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನೂತನ ಎಫ್‌ಎಸ್‌ಎಲ್ ಕಚೇರಿಯನ್ನು ಸಂತೋಷದಿಂದ ಉದ್ಘಾಟನೆ ಮಾಡಿದ್ದೇವೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಎಷ್ಟು ಮುಖ್ಯವೋ ಹಾಗೆಯೇ ಅಪರಾಧಿಗಳಿಗೆ ಶಿಕ್ಷೆ ನೀಡುವಂತೆ ಮಾಡುವುದು ಅಷ್ಟೇ ಮುಖ್ಯ..

ಅಪರಾಧಿಗಳು ತಂತ್ರಜ್ಞಾನ ಉಪಯೋಗಿಸಿ ಬಹಳ ಅಪರಾಧ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಪ್ರಯೋಗಾಲಯವು ಕೂಡ ಅತ್ಯಂತ ತಂತ್ರಜ್ಞಾನದಿಂದ ಕೂಡಿರಬೇಕು‌‌. ಪೊಲೀಸ್ ಇಲಾಖೆಯ ಆಧುನೀಕರಣಕ್ಕಾಗಿ ಮುಂದಿನ ಬಜೆಟ್​ನಲ್ಲಿ ₹100 ಕೋಟಿ ಮೀಸಲಿಡಲಾಗುವುದು ಎಂದರು.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿ, ಪೊಲೀಸ್ ಇಲಾಖೆಯ ಇತಿಹಾಸದಲ್ಲಿ ಇದು ಪ್ರಮುಖ ದಿನ. ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಗೆ ಬಲ ಕೊಡುವಂತಹ ಕಾರ್ಯವಾಗಿದೆ. ಅಪರಾಧ ಪ್ರಕರಣಗಳ ತನಿಖೆ ಹಾಗೂ ವಿಚಾರಣೆಗೆ ನೂತನ ವಿಧಿ ವಿಜ್ಞಾನ ಪ್ರಯೋಗಾಲಯ ಸಹಕಾರಿಯಾಗಿದೆ. ತಂತ್ರಜ್ಞಾನದಲ್ಲಿ ಒಂದು ಹೆಜ್ಜೆ ಮುಂದೆ ಇದ್ದೇವೆ. ಅಪರಾಧ ಪತ್ತೆ ಕಾರ್ಯದಲ್ಲಿ ಸಾಕಷ್ಟು ಮಹತ್ವದ ದಾಖಲಾತಿಗಳನ್ನು ಒದಗಿಸುವ ನಿಟ್ಟಿನಲ್ಲಿ ನಾವು ಮುಂದುವರೆದಿದ್ದೇವೆ.

ಸೈಬರ್ ಕ್ರೈಂ, ಬ್ಯಾಂಕಿಂಗ್ ಕ್ರೈಂನಲ್ಲಿ ಅತಿ ಹೆಚ್ಚು ವಂಚನೆಗಳಾಗುತ್ತಿವೆ‌. ಬ್ಯಾಂಕರ್​ಗಳ ಜೊತೆ ಮಾತನಾಡಿದಂತೆ ವಂಚನೆಗೊಳಗಾದ ವ್ಯಕ್ತಿಯಿಂದ ಮೊಬೈಲ್​ನಲ್ಲಿ ಕರೆ ಮಾಡಿ ಹೇಳಿದ ತಕ್ಷಣ ಬ್ಯಾಂಕ್ ಖಾತೆ ಜಪ್ತಿ ಮಾಡುವ ವ್ಯವಸ್ಥೆಯಿದೆ.

ಇದನ್ನು ರಾಜ್ಯದಲ್ಲಿ ಮೊದಲ ಬಾರಿಗೆ ತಂದಿದ್ದು, ಪೊಲೀಸ್ ಇಲಾಖೆಯ ಆಧುನೀಕರಣಕ್ಕಾಗಿ 100 ಕೋಟಿ ರೂಪಾಯಿ ಮೀಸಲಿಡಲು ಚಿಂತನೆ ನಡೆದಿದೆ. ರಾಜ್ಯದಲ್ಲಿ ಇನ್ನು ಆಧುನಿಕವಾಗಿ 5 ಲ್ಯಾಬ್ ಬರಲಿವೆ. ಹಾಗೂ ಪ್ರತಿ ಜಿಲ್ಲೆಯಲ್ಲಿ ಒಂದು ಲ್ಯಾಬ್ ತೆರೆಯುವಂತೆ ಚರ್ಚೆ ನಡೆದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮಾತನಾಡಿ, ಆತ್ಯಾಧುನಿಕ‌ ಮಾದರಿ ಹಾಗೂ ವಿದೇಶಗಳಿಂದ ತಾಂತ್ರಿಕ ಉಪಕರಣಗಳನ್ನು ತರಿಸಿಕೊಂಡು‌ ಎಲ್ಲಾ ಆಧುನಿಕ ತಂತ್ರಜ್ಞಾನ ಒಳಗೊಂಡಂತಹ‌ ಸುಸಜ್ಜಿತ ಎಫ್‌ಎಸ್ಎಲ್‌ ಕೇಂದ್ರ ಉದ್ಘಾಟಿಸಲಾಗಿದೆ. ಪ್ರಮುಖವಾಗಿ ನಾರ್ಕೊಟಿಕ್ಸ್, ಡಿಎನ್ಎ ಸೇರಿದಂತೆ ಎಲ್ಲಾ ಮಾದರಿಯ ಪ್ರತ್ಯೇಕ ಲ್ಯಾಬ್​ಗಳಿವೆ‌.

ಈ ಹಿಂದೆ ಅಪರಾಧ ಪ್ರಕರಣಗಳಲ್ಲಿ ನಿಖರ ಸಾಕ್ಷ್ಯಾಧಾರಕ್ಕಾಗಿ ಮಾದರಿಗಳನ್ನು ಪರೀಕ್ಷೆಗೊಳಪಡಿಸಲು ಹೈದರಾಬಾದ್, ಗುಜರಾತ್​ಗೆ ಕಳುಹಿಸಲಾಗುತಿತ್ತು. ಇನ್ನು ಮುಂದೆ ಬೆಂಗಳೂರಿನಲ್ಲೇ ಮಾಡಬಹುದಾಗಿದೆ.‌ ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಪ್ರತಿಯೊಂದು ಜಿಲ್ಲೆಗಳಲ್ಲಿ ಎಫ್‌ಎಸ್‌ಎಲ್‌ ಕೇಂದ್ರ ತೆರೆಯುವ ವಿಶ್ವಾಸ ವ್ಯಕ್ತಪಡಿಸಿದೆ ಎಂದರು.

ABOUT THE AUTHOR

...view details