ಬೆಳಗಾವಿ: ಸಿದ್ದರಾಮಯ್ಯ ಆರ್ಎಸ್ಎಸ್ ಅನ್ನು ತಾಲಿಬಾನ್ಗೆ ಹೋಲಿಕೆ ಮಾಡಿರುವ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಸಿಪಾ, ಸಿದ್ದರಾಮಯ್ಯರ ಆಪಾದನೆ ಆಧಾರರಹಿತ, ಬಾಲಿಶ ಹೇಳಿಕೆ ಎಂದರು.
ತಾಲಿಬಾನ್, ಪಾಕಿಸ್ತಾನ ಬೆಂಬಲಿಸುವವರು ಯಾರು ಅಂತ ಚೆನ್ನಾಗಿ ಗೊತ್ತಿದೆ. ಕಾಂಗ್ರೆಸ್ನವರು, ಓವೈಸಿ ತಾಲಿಬಾನ್, ಪಾಕಿಸ್ತಾನ ಬೆಂಬಲಿಸಿ ಬರುವಂತವರು. ರಾಷ್ಟ್ರೀಯವಾದ, ರಾಷ್ಟ್ರೀಯ ಏಕತೆಗೆ ಒತ್ತು ಕೊಡೋದು ಬಿಜೆಪಿ ಧ್ಯೇಯ ಎಂದು ಹೇಳಿದರು.
'ಪಾಕಿಸ್ತಾನ ಬೆಂಬಲಿಸುವ ಸಂಸ್ಕೃತಿ ಕಾಂಗ್ರೆಸ್ ನಾಯಕರದ್ದು' ರಮೇಶ್ ಜಾರಕಿಹೊಳಿ ಹಾಗೂ ಮಿತ್ರಮಂಡಳಿ ಶಾಸಕರ ಮಧ್ಯೆ ಲವ್ ಬ್ರೇಕ್ ಆಗಿದೆಯಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲಿಯೂ ಬ್ರೇಕ್ ಇಲ್ಲ, ಫೇಕ್ ಇಲ್ಲ. ಏನ್ ಲವ್ ಇರಬೇಕೋ ಇದ್ದೇ ಇದೆ. ವಲಸಿಗ ಶಾಸಕರು ಕಾಂಗ್ರೆಸ್ಗೆ ಮರಳ್ತಾರೆ ಎಂಬ ಸುದ್ದಿಯನ್ನು ಕಾಂಗ್ರೆಸ್ ಪಕ್ಷದವರು ಹರಿಬಿಡುತ್ತಿದ್ದಾರೆ. ಏನಾದರೂ ಮಾಡಿ ಬೆಂಕಿ ಹಚ್ಚಬೇಕೆಂಬ ಕೆಲಸ ಕಾಂಗ್ರೆಸ್ ಮಾಡ್ತಿದೆ. ನಾವ್ಯಾರೂ ವಲಸೆ ಬಂದಂತವರಲ್ಲ, ರಾಜೀನಾಮೆ ಕೊಟ್ಟು ಬಂದವರು. ಮತ್ತೆ ಕಾಂಗ್ರೆಸ್ಗೆ ಮರಳುವ ಪ್ರಶ್ನೆಯೇ ಇಲ್ಲ. ಸುಮ್ಮನೆ ಅರಿವೆ ಹಾವು ಬಿಡುವಂತಹ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಟೀಕಿಸಿದರು.
'ಉಪ ಚುನಾವಣೆಯಲ್ಲಿ ನಮದೇ ಗೆಲುವು':
ಹಾನಗಲ್, ಸಿಂದಗಿ ಎರಡೂ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ತಕ್ಷಣ ಹಾನಗಲ್ನಲ್ಲಿ ಸಭೆ ಮಾಡುವಂತೆ ಪಕ್ಷದ ಕಚೇರಿಯಿಂದ ಸೂಚನೆ ಬಂದಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸಲಾಗುವುದು. ನಾಳೆ ಅಥವಾ ನಾಡಿದ್ದು ಹಾನಗಲ್ನಲ್ಲಿ ಸಭೆ ಮಾಡಿ ಪಟ್ಟಿ ಮಾಡುತ್ತೇವೆ. ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್ಗೆ ಕಳಿಸುತ್ತೇವೆ. ವಿಜಯೇಂದ್ರ ಹಾನಗಲ್ನಿಂದ ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ಗೊತ್ತಿಲ್ಲ. ಸದ್ಯಕ್ಕೆ ಆ ರೀತಿ ಯಾವುದೇ ಯೋಚನೆ ಇಲ್ಲ. ಉದಾಸಿ ಕುಟುಂಬಕ್ಕೆ ಟಿಕೆಟ್ ನೀಡುವ ವಿಚಾರವನ್ನು ನಾವು ಯಾರು ತೀರ್ಮಾನ ಮಾಡಲು ಬರಲ್ಲ, ಹೈಕಮಾಂಡ್ ತೀರ್ಮಾನಿಸುತ್ತದೆ. ಆಕಾಂಕ್ಷಿಗಳ ಪಟ್ಟಿ ಅಳೆದು ತೂಗಿ ಗೆಲ್ಲಲು ಸಮರ್ಥ ಇರುವ ಅಭ್ಯರ್ಥಿಗೆ ಟಿಕೆಟ್ ಕೊಡುತ್ತೇವೆ ಎಂದರು.
'ಬಿಎಸ್ವೈಗೆ ಯಾರೂ ಬ್ರೇಕ್ ಹಾಕಿಲ್ಲ':
ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಹೈಕಮಾಂಡ್ ಬ್ರೇಕ್ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪರಿಗೆ ಯಾರೂ ಸಹ ಬ್ರೇಕ್ ಹಾಕಿಲ್ಲ. ಯಡಿಯೂರಪ್ಪ ಮಾರ್ಗದರ್ಶನ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆಗೆ ಹೋಗುತ್ತವೆ. ನೆರೆ ಸಂತ್ರಸ್ತರಿಗೆ 38 ಕೋಟಿ ರೂ. ಪರಿಹಾರ ಬಿಡುಗಡೆಯಾಗಿದ್ದು, 30 ಕೋಟಿ ಬೆಳಗಾವಿ ಜಿಲ್ಲೆಗೆ ಬಂದಿದೆ. ಉಳಿದ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.