ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಯಾವುದೇ ರೀತಿಯಲ್ಲಿ ನಕಲಿ ಅಂಕಪಟ್ಟಿ, ನಕಲಿ ಪದವಿ ಪ್ರದಾನ ಮಾಡಿಲ್ಲ. ಹಾಗಾಗಿ ವಿವಿ ಅಧಿಕಾರಿಗಳ ವಿರುದ್ಧ ನಕಲಿ ಅಂಕಪಟ್ಟಿ ಪ್ರಕರಣ ಸಂಬಂಧ ಯಾವುದೇ ರೀತಿಯ ಕ್ರಮ ಕೈಗೊಳ್ಳುವ ಪ್ರಶ್ನೆ ಇಲ್ಲ. ಆದರೆ ನಕಲಿ ಅಂಕಪಟ್ಟಿ ನೀಡಿ ಹುದ್ದೆ ಗಿಟ್ಟಿಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಹೇಳಿದ್ದಾರೆ.
ಪರಿಷತ್ನಲ್ಲಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಬಿ.ಕೆ ಹರಿಪ್ರಸಾದ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಕಲಿ ಅಂಕಪಟ್ಟಿ ಕುರಿತು ಮೂರು ಪ್ರಕರಣಗಳು ಪತ್ತೆಯಾವಗಿವೆ. ಅವು ವಿವಿಯಲ್ಲಿ ಆಗಿಲ್ಲ, ಹೊರಗೆ ಖಾಸಗಿಯಲ್ಲಿ ನೇಮಕಾತಿ ವೇಳೆ ಅಂಕಪಟ್ಟಿ ನಕಲಿ ಮಾಡಲಾಗಿದೆ. ವಿಶ್ವವಿದ್ಯಾಲಯದ ಪರಿಶೀಲನೆಗೆ ಕಳಿಸಿದಾಗ ಬೆಳಕಿಗೆ ಬಂದಿದೆ. ಪತ್ತೆಯಾಗುತ್ತಿದ್ದಂತೆ ದೂರು ದಾಖಲಿಸಿದ್ದು, ತನಿಖೆ ನಡೆಯಿತ್ತಿದೆ. ಸಂಬಂಧಪಟ್ಟ ವ್ಯಕ್ತಿಯನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಡಿಜಿ ಲಾಕರ್ ಮೂಲಕ ದಾಖಲಾತಿ ಪರಿಶೀಲನೆ
ಮುಂದಿನ ದಿನದಲ್ಲಿ ಇಂತಹ ಸಮಸ್ಯೆ ಆಗದ ರೀತಿ ನೋಡಲು ಡಿಜಿಟಲೈಸೇಷನ್ ಆಫ್ ಆಲ್ ಡಾಕ್ಟುಮೆಂಟ್ಸ್ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಡಿಜಿ ಲಾಕರ್ ಮೂಲಕ ಪ್ರತಿಯೊಬ್ಬ ವ್ಯಕ್ತಿಯ ದಾಖಲಾತಿ ಪರಿಶೀಲನೆ ಮಾಡಬಹುದಾಗಿದೆ. ಇನ್ಮುಂದೆ ಕಳೆದ 43 ವರ್ಷದ ದಾಖಲಾತಿ ಡಿಜಿಟಲೈಸ್ ಮಾಡಲಾಗುತ್ತದೆ, ಯಾವ ವ್ಯಕ್ತಿಯ ದಾಖಲೆ ವಿವಿ ಕೊಟ್ಟಿದ್ದರೆ ಅದು ಡಿಜಿಟಲೈಸ್ ಆಗಲಿದೆ ಎಂದು ವಿವರಿಸಿದರು.
ವಿವಿ ಕೊಟ್ಟಿರುವ ಅಂಕಪಟ್ಟಿ ನಕಲಿ ಅಲ್ಲ, ಮೂರು ವ್ಯಕ್ತಿಗಳ ಅಂಕಪಟ್ಟಿ ಪರಿಶೀಲನೆಗೆ ವಿವಿಗೆ ಬಂದಾಗ ಅಂಕ ಪಟ್ಟಿ ನಕಲು ಮಾಡಿರುವುದು ಬಹಿರಂಗವಾಗಿದೆ. ಇದು ವಿವಿ ಕೊಟ್ಟಿಲ್ಲ, ಇದು ಹೊರಗೆ ಆಗಿರೋದು. ಹಾಗಾಗಿ ವಿವಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳವುದಿಲ್ಲ. ನಕಲಿ ಮಾಡಿ ಉದ್ಯೋಗ ಪಡೆದುಕೊಂಡವರ ವಿರುದ್ದ ಕ್ರಮ ಆಗಬೇಕು, ಯಾರು ನಕಲಿ ಅಂಕಪಟ್ಟಿ ನೀಡಿ ನೌಕರರು ಆಗಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಶ್ವತ್ಥನಾರಾಯಣ ಹೇಳಿದರು.
ಶಾಸಕ, ಸಚಿವರಂದಲೇ ನಕಲಿ ಅಂಕ ಪಟ್ಟಿ:
ಸರ್ಕಾರ ವಿವಿ ವಿರುದ್ಧ ಕ್ರಮಕ್ಕೆ ಮುಂದಾಗದಿರುವುದಕ್ಕೆ ಕಿಡಿಕಾರದ ಕಾಂಗ್ರೆಸ್ ಸದಸ್ಯ ಬಿಕೆ ಹರಿಪ್ರಸಾದ್, ಇದೊಂದು ಗಂಭೀರ ಸ್ವರೂಪದ ಪ್ರಕರಣವಾಗಿದೆ. ಶಾಸಕರು, ಸಚಿವರು, ಕೇಂದ್ರ ಸಚಿವರು ಕೂಡ ನಕಲಿ ಅಂಕಪಟ್ಟಿ ಪಡೆದಿದ್ದಾರೆ. ಬೇಕಾದರೆ ಹೆಸರುಗಳನ್ನು ಬಹಿರಂಗಪಡಿಸುವುದಾಗಿ ಸದನಕ್ಕೆ ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಅಶ್ವತ್ಥನಾರಾಯಣ, ಪಟ್ಟಿ ಇದ್ದರೆ ಹೇಳಬಹುದು ಎಂದು ಹರಿಪ್ರಸಾದ್ ಕಾಲೆಳೆದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾಪತಿ ಹೊರಟ್ಟಿ, ಸದನದ ಹೊರಗೆ ಇದ್ದ ನಕಲಿ ಅಂಕಪಟ್ಟಿ ವಿವಾದ ಈಗ ಸದನದ ಒಳಗೂ ಬಂದ್ಬಿಡ್ತಾ ಎಂದು ಹಾಸ್ಯ ಚಟಾಕಿ ಹಾರಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ 10 ವರ್ಷದ ಟಾರ್ಗೆಟ್:
ಸಮಾಜದಲ್ಲಿ ಸಮಾನತೆ ಕೊಡಲು ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣ ವ್ಯವಸ್ಥೆಯಲ್ಲಿ ಇರುವ ನ್ಯೂನತೆ ಸರಿಪಡಿಸುವ ಎಲ್ಲ ವ್ಯವಸ್ಥೆಯನ್ನು ನೂತನ ಶಿಕ್ಷಣ ನೀತಿಯಲ್ಲಿ ಮಾಡಲಾಗುತ್ತದೆ, ಇದಕ್ಕಾಗಿ 10 ವರ್ಷದ ಟಾರ್ಗೆಟ್ನೊಂದಿಗೆ ಅಗತ್ಯ ಅನುದಾನ ಪಡೆದುಕೊಂಡು ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.