ಪಾಟ್ನಾ (ಬಿಹಾರ): ಬಿಹಾರದ ಸರನ್ ಕಳ್ಳಬಟ್ಟಿ ಸಾರಾಯಿ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬ ಸದಸ್ಯರಿಗೆ ಪರಿಹಾರ ನೀಡಲು ನಿರಾಕರಿಸಿದ ಸಿಎಂ ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮತ್ತು ಮಿತ್ರಪಕ್ಷಗಳು ವಾಗ್ದಾಳಿ ನಡೆಸಿವೆ.
ಸಾರಾಯಿ ದುರಂತದಲ್ಲಿ ಮಂಗಳವಾರ ರಾತ್ರಿಯಿಂದ ಈವರೆಗೆ 30 ಜನ ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯಾಡಳಿತ ದೃಢಪಡಿಸಿದೆ. ಈ ಘಟನೆ ಆರು ವರ್ಷಗಳ ಹಿಂದೆ ಸಾರಾಯಿ ನಿಷೇಧದ ನಂತರ ಬಿಹಾರದಲ್ಲಿ ಸಂಭವಿಸಿದ ಅತಿದೊಡ್ಡ ಸಾರಾಯಿ ದುರಂತವಾಗಿದೆ.
ಆದಾಗ್ಯೂ ಸಾವಿನ ಸಂಖ್ಯೆ 100 ಕ್ಕಿಂತ ಹೆಚ್ಚು ಎಂದು ಬಿಜೆಪಿ ಆರೋಪಿಸಿದೆ. ರಾಜ್ಯ ವಿಧಾನಸಭೆಯ ಒಳಗೆ ಮತ್ತು ರಾಜ್ಯಪಾಲ ಫಾಗು ಚೌಹಾಣ್ಗೆ ಸಲ್ಲಿಸಿದ ಮನವಿಯಲ್ಲಿ ಬಿಜೆಪಿ ಈ ಆರೋಪ ಮಾಡಿದೆ. ಎನ್ಡಿಎ ಪರ ಸಹಾನುಭೂತಿ ಹೊಂದಿರುವ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕಡುವಿರೋಧಿ ಚಿರಾಗ್ ಪಾಸ್ವಾನ್ ಕೂಡ ಬಿಜೆಪಿಯ ಅಭಿಪ್ರಾಯ ಬೆಂಬಲಿಸಿದ್ದಾರೆ.
ನಾನು ಇಂದು ಸರನ್ಗೆ ಭೇಟಿ ನೀಡಿ ದುಃಖತಪ್ತ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದೇನೆ. ಕಳ್ಳಬಟ್ಟಿ ಸಾರಾಯಿಯಿಂದ ಉಂಟಾದ ಸಾವುಗಳ ಮಾಹಿತಿಯನ್ನು ಬಹಿರಂಗಪಡಿಸದಂತೆ ಮತ್ತು ಸಾವು ಬೇರಾವುದೋ ಕಾರಣಕ್ಕೆ ಆಗಿದೆ ಎಂದು ಜಗತ್ತಿಗೆ ಹೇಳುವಂತೆ ಆಡಳಿತವು ಕುಟುಂಬಸ್ಥರ ಮೇಲೆ ಒತ್ತಡ ಹಾಕುತ್ತಿರುವುದು ಆತಂಕಕಾರಿಯಾಗಿದೆ. ಏನಿಲ್ಲವೆಂದರೂ ಕನಿಷ್ಠ 200 ಜನ ಈ ಸಾರಾಯಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಚಿರಾಗ್ ಪಾಸ್ವಾನ್ ಮಾಧ್ಯಮಗಳಿಗೆ ತಿಳಿಸಿದರು.