ಕರ್ನಾಟಕ

karnataka

ರೈತರು ಕೃಷಿ ಕಾನೂನು ವಿರೋಧಿಸಿದ್ದೇಕೆ? ಸರ್ಕಾರ ಮಣಿದಿದ್ದೇಕೆ? ಇಲ್ಲಿದೆ ಫುಲ್​ ಡೀಟೇಲ್ಸ್​..

By

Published : Nov 19, 2021, 11:03 AM IST

Updated : Nov 19, 2021, 12:14 PM IST

ಇಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸರ್ಕಾರ ಜಾರಿಗೆ ತಂದಿದ್ದ ಎಲ್ಲಾ ಮೂರೂ ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ತಿಳಿಸಿದ್ದಾರೆ. ಸರ್ಕಾರ ಏಕೆ ಮಣಿಯಿತು?, ರೈತರು ಕೃಷಿ ಕಾನೂನು ವಿರೋಧಿಸಿದ್ದೇಕೆ? ಇಲ್ಲಿದೆ ಮಾಹಿತಿ..

ರೈತರು ಕೃಷಿ ಕಾನೂನು ವಿರೋಧಿಸಿದ್ದೇಕೆ
ರೈತರು ಕೃಷಿ ಕಾನೂನು ವಿರೋಧಿಸಿದ್ದೇಕೆ

ದೇಶಾದ್ಯಂತ ವ್ಯಾಪಕ ವಿರೋಧಕ್ಕೆ ಕಾರಣವಾಗಿದ್ದು ಕೇಂದ್ರದ ಮಹತ್ವಾಕಾಂಕ್ಷಿ ಮೂರು ಕೃಷಿ ಕಾನೂನುಗಳನ್ನು ವಾಪಸ್​ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಘೋಷಣೆ ಮಾಡಿದ್ದಾರೆ (PM Narendra Modi announces to repeal all three farm laws). ಗುರುನಾನಕ್​ ಜಯಂತಿಯಂದು ಈ ಮಹತ್ವದ ಘೋಷಣೆ ಮಾಡಿದ್ದಾರೆ. ಈ ಘೋಷಣೆ ಹಿಂದಿನ ಹೋರಾಟದ ಹಾದಿಯನ್ನು ಒಮ್ಮೆ ಮೆಲುಕು ಹಾಕಬೇಕಾಗಿದೆ.

ಯಾತಕ್ಕಾಗಿ ರೈತರು ಪ್ರತಿಭಟನೆ ನಡೆಸಿದ್ದರು?

ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಕಾನೂನುಗಳು ರೈತರಿಗೆ ಕನಿಷ್ಠ ಬೆಂಬಲ ಬೆಲೆ (Minimum Support Price-MSP) ನೀಡುವ ವ್ಯವಸ್ಥೆಯನ್ನು ತಪ್ಪಿಸುತ್ತದೆ ಎಂದು ಪಂಜಾಬ್‌ ಮತ್ತು ಹರ್ಯಾಣದ ರೈತ ಸಂಘಗಳು ಆರೋಪಿಸಿದ್ದವು. ಕಾಲಕ್ರಮೇಣ ಬೃಹತ್‌ ಕಾರ್ಪೋರೇಟ್‌ ಸಂಸ್ಥೆಗಳು ಈ ನಿಯಮಗಳನ್ನು ನಿರ್ದೇಶಿಸುತ್ತವೆ, ಮತ್ತು ರೈತರು ಕಡಿಮೆ ಬೆಲೆಯನ್ನು ಪಡೆದುಕೊಳ್ಳುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದವು. ಮಾರುಕಟ್ಟೆ ವ್ಯವಸ್ಥೆಯನ್ನು ವಿಸರ್ಜಿಸುವುದರಿಂದ ರೈತರು ತಮ್ಮ ಬೆಳೆಗಳಿಗೆ ಖಚಿತವಾದ ಬೆಲೆಯನ್ನು ಪಡೆಯುವುದಿಲ್ಲ. ಮತ್ತು ಕಮಿಷನ್ ಏಜೆಂಟ್‌ಗಳು ರೈತರಿಂದ ಸಾಲವನ್ನು ಪಡೆದು ವ್ಯವಹಾರದಿಂದ ಹೊರಗುಳಿಯುವಂತೆ ಮಾಡುತ್ತಾರೆ ಎಂಬ ಆತಂಕ ರೈತರದ್ದಾಗಿತ್ತು.

ಇದನ್ನೂ ಓದಿ: Big Breaking.. ಮೂರು ಕೃಷಿ ಕಾನೂನುಗಳು ರದ್ದು: ಪ್ರಧಾನಿ ಮೋದಿ ಘೋಷಣೆ..!

ಅನ್ನದಾತರ ಬೇಡಿಕೆ ಏನಾಗಿತ್ತು?

ತಮ್ಮ ಬೆಳೆಗಳ ಮಾರಾಟವನ್ನು ನಿಯಂತ್ರಿಸುವ ಕೇಂದ್ರ ಸರ್ಕಾರದ ಮೂರೂ ಕಾನೂನುಗಳನ್ನೂ ಹಿಂತೆಗೆದುಕೊಳ್ಳಬೇಕು. ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಮುಂದುವರಿಸುವ ಬಗ್ಗೆ ಕಾನೂನುಗಳಿಗೆ ತಿದ್ದುಪಡಿ ಮಾಡುವ ಮೂಲಕ ಕಾನೂನಾತ್ಮಕ ಭರವಸೆ ನೀಡಬೇಕು.

ವಿದ್ಯುತ್‌ ಸಬ್ಸಿಡಿ ಸ್ಥಗಿತಗೊಳ್ಳುವ ಆತಂಕದಿಂದ ಪ್ರಸ್ತಾವಿತ ವಿದ್ಯುತ್‌ ತಿದ್ದುಪಡಿ ಮಸೂದೆ-2020 ಯನ್ನು ಕೂಡ ಹಿಂಪಡೆಯಬೇಕು ಎಂಬುದು ರೈತರ ಪ್ರಮುಖ ಒತ್ತಾಯವಾಗಿತ್ತು. ಜೊತೆಗೆ ಬೆಳೆ ಬೆಳೆದ ನಂತರ ಉಳಿದಿರುವ ಒಣ ಹುಲ್ಲುಗಳನ್ನು ಸುಡುವುದರ ವಿರುದ್ಧದ ನಿಯಮಗಳು ಕೂಡ ರೈತರಿಗೆ ಅನ್ವಯವಾಗಬಾರದು ಎಂದೂ ರೈತರು ಸರ್ಕಾರವನ್ನು ಒತ್ತಾಯಿಸಿದ್ದರು.

ಎಂಎಸ್‌ಪಿ ರೈತರ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಕನಿಷ್ಠ ಬೆಂಬಲ ಬೆಲೆ (MSP) ಎಂದರೆ ರೈತರಿಂದ ಯಾವುದೇ ಬೆಳೆಗಳನ್ನು ಖರೀದಿಸುವಾಗ ಸರ್ಕಾರ ಪಾವತಿಸುವ ಕನಿಷ್ಠ ಬೆಲೆ. ಕೃಷಿ ವೆಚ್ಚವನ್ನು ಲೆಕ್ಕ ಹಾಕಿದ ನಂತರ ವಾರ್ಷಿಕ ಆಧಾರದ ಮೇಲೆ ಇಪ್ಪತ್ತೆರಡಕ್ಕೂ ಹೆಚ್ಚು ಸರಕುಗಳಿಗೆ ರಾಜ್ಯ ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗ(ಸಿಎಸಿಪಿ)ಕನಿಷ್ಠ ಬೆಂಬಲ ಬೆಲೆಯನ್ನು ನಿರ್ಧರಿಸುತ್ತದೆ.

ಫುಡ್‌ ಕಾರ್ಪೋರೇಷನ್ ಆಫ್ ಇಂಡಿಯಾ(ಎಫ್‌ಸಿಐ) ಇದು ರಾಜ್ಯದ ಪ್ರಮುಖ ಧಾನ್ಯ ಖರೀದಿ ಸಂಸ್ಥೆ. ಇಲ್ಲಿ ಹೆಚ್ಚಾಗಿ ಭತ್ತ ಮತ್ತು ಗೋದಿಯನ್ನು ಮಾತ್ರ ಬೆಲೆಗಳಲ್ಲಿ ಖರೀದಿಸಲಾಗುತ್ತದೆ. ಎಫ್‌ಸಿಐ ನಂತರ ಈ ಆಹಾರ ಧಾನ್ಯಗಳನ್ನು ಹೆಚ್ಚು ಸಬ್ಸಿಡಿ ದರದಲ್ಲಿ ಬಡವರಿಗೆ ಮಾರಾಟ ಮಾಡಲಾಗುತ್ತದೆ ಮತ್ತು ಆ ನಂತರ ಸರ್ಕಾರವು ಅದರ ನಷ್ಟವನ್ನು ಸರಿದೂಗಿಸುತ್ತದೆ.

ಈ ಹಿಂದೆ ಮೋದಿ ಹೇಳಿದ್ದೇನು?

ಸರ್ಕಾರ ತಂದಿರುವ ಮೂರು ಕೃಷಿ ಕಾನೂನುಗಳು ಕೃಷಿ ಕ್ಷೇತ್ರದ ಪ್ರಮುಖ ಸುಧಾರಣೆಗಳೆಂದೇ ಕೇಂದ್ರ ಸರ್ಕಾರ ಹೇಳುತ್ತಾ ಬಂದಿತ್ತು. ಈ ಕಾನೂನು ಮಧ್ಯವರ್ತಿಗಳನ್ನು ತೆಗೆದುಹಾಕಿ ರೈತರಿಗೆ ದೇಶದಲ್ಲಿ ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವಕಾಶ ನೀಡಿತ್ತು.

2020ರ ತನಕ ಕೃಷಿ ಉತ್ಪನ್ನಗಳ ಮೊದಲ ಮಾರಾಟವು ಕೃಷಿ ಉತ್ಪನ್ನ ಮಾರುಕಟ್ಟೆ ಅಂದರೆ ಎಪಿಎಂಸಿಯಲ್ಲಿ ಮಾತ್ರ ಮಾಡಬಹುದಿತ್ತು. ಕೇಂದ್ರ ಸರ್ಕಾರ ತಂದಿದ್ದ ಈ ಕಾನೂನು ಪ್ರಕಾರ ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಯ ಹೊರಗೂ ಮಾರಾಟ ಮಾಡಲು ಅನುಮತಿ ನೀಡಿತ್ತು. ಕೇಂದ್ರ ಸರ್ಕಾರ ಈ ಕಾನೂನನ್ನೇ ರೈತರು ವಿರೋಧಿಸಿದರು.

ಇದನ್ನೂ ಓದಿ: Repeal of 3 farm laws: ಅನ್ಯಾಯದ ವಿರುದ್ಧದ ವಿಜಯ ಎಂದ ರಾಗಾ ; ಸಂಸತ್ತಿನಲ್ಲಿ ಕೃಷಿ ಕಾನೂನುಗಳು ರದ್ದಾಗೋ ವರೆಗೂ ಪ್ರತಿಭಟನೆ - ಟಿಕಾಯತ್​

ಕೃಷಿ ಕಾಯ್ದೆ ವಾಪಸ್​ ಪಡೆದು ಇಂದು ಮೋದಿ ಹೇಳಿದ್ದೇನು?

ರೈತರ ಸಮಸ್ಯೆ ಬಗೆಹರಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ದೇಶದಲ್ಲಿ 100ರಲ್ಲಿ 80 ಪ್ರತಿಶತ ರೈತರು ಸಣ್ಣ ಹಿಡುವಳಿ ರೈತರಾಗಿದ್ದು, 10 ಕೋಟಿಗಿಂತ ಹೆಚ್ಚು ಸಣ್ಣ ರೈತರಿದ್ದಾರೆ. ಅವರ ಸಮಸ್ಯೆಗಳನ್ನು ನಾನು ಅರಿತಿದ್ದೇನೆ. ಅದನ್ನು ಬಗೆಹರಿಸಲು ಪ್ರಯತ್ನ ಮಾಡಲಾಗುತ್ತಿದೆ.

ಇದಕ್ಕಾಗಿಯೇ ಬೀಜ, ವಿಮೆ, ಮಾರುಕಟ್ಟೆ, ಉಳಿತಾಯಕ್ಕೆ ಯೋಜನೆಗಳಿಗಾಗಿ ರೈತರಿಗೆ ಫಸಲ್ ಬಿಮಾ, ನಿವೃತ್ತಿ ಯೋಜನೆ ಜಾರಿಗೆ ತಂದಿದ್ದೇವೆ. ಕೃಷಿ ಮಾರುಕಟ್ಟೆ ಆಧುನೀಕರಣಕ್ಕೆ ಕೋಟ್ಯಂತರ ರೂ. ಖರ್ಚು ಮಾಡಲಾಗುತ್ತಿದೆ.

ರೈತರು ಈಗ ಎಲ್ಲಿ ಬೇಕಾದರೂ ತಮ್ಮ ಬೆಳೆ ಮಾರಬಹುದು. ಕೃಷಿ ಬಜೆಟ್‌ ಮೊದಲಿಗಿಂತ 5 ಪಟ್ಟು ಹೆಚ್ಚಿಸಿದ್ದೇವೆ. ರೈತರಿಗೆ 22 ಕೋಟಿ ಸಾಯಿಲ್ ಹೆಲ್ತ್ ಕಾರ್ಡ್‌ ನೀಡಿದ್ದೇವೆ ಎಂದು ಪ್ರಧಾನಿ ಕೃಷಿ ಕಾನೂನುಗಳನ್ನು ವಾಪಸ್​ ಪಡೆಯುವ ಘೋಷಣೆ ಮಾಡುತ್ತಲೇ ತಮ್ಮ ಸರ್ಕಾರದ ನಿರ್ಧಾರದ ಹಿಂದಿನ ಉದ್ದೇಶವನ್ನು ದೇಶದ ಜನರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ.

Last Updated : Nov 19, 2021, 12:14 PM IST

ABOUT THE AUTHOR

...view details