ದೇಶಾದ್ಯಂತ ವ್ಯಾಪಕ ವಿರೋಧಕ್ಕೆ ಕಾರಣವಾಗಿದ್ದು ಕೇಂದ್ರದ ಮಹತ್ವಾಕಾಂಕ್ಷಿ ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಘೋಷಣೆ ಮಾಡಿದ್ದಾರೆ (PM Narendra Modi announces to repeal all three farm laws). ಗುರುನಾನಕ್ ಜಯಂತಿಯಂದು ಈ ಮಹತ್ವದ ಘೋಷಣೆ ಮಾಡಿದ್ದಾರೆ. ಈ ಘೋಷಣೆ ಹಿಂದಿನ ಹೋರಾಟದ ಹಾದಿಯನ್ನು ಒಮ್ಮೆ ಮೆಲುಕು ಹಾಕಬೇಕಾಗಿದೆ.
ಯಾತಕ್ಕಾಗಿ ರೈತರು ಪ್ರತಿಭಟನೆ ನಡೆಸಿದ್ದರು?
ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಕಾನೂನುಗಳು ರೈತರಿಗೆ ಕನಿಷ್ಠ ಬೆಂಬಲ ಬೆಲೆ (Minimum Support Price-MSP) ನೀಡುವ ವ್ಯವಸ್ಥೆಯನ್ನು ತಪ್ಪಿಸುತ್ತದೆ ಎಂದು ಪಂಜಾಬ್ ಮತ್ತು ಹರ್ಯಾಣದ ರೈತ ಸಂಘಗಳು ಆರೋಪಿಸಿದ್ದವು. ಕಾಲಕ್ರಮೇಣ ಬೃಹತ್ ಕಾರ್ಪೋರೇಟ್ ಸಂಸ್ಥೆಗಳು ಈ ನಿಯಮಗಳನ್ನು ನಿರ್ದೇಶಿಸುತ್ತವೆ, ಮತ್ತು ರೈತರು ಕಡಿಮೆ ಬೆಲೆಯನ್ನು ಪಡೆದುಕೊಳ್ಳುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದವು. ಮಾರುಕಟ್ಟೆ ವ್ಯವಸ್ಥೆಯನ್ನು ವಿಸರ್ಜಿಸುವುದರಿಂದ ರೈತರು ತಮ್ಮ ಬೆಳೆಗಳಿಗೆ ಖಚಿತವಾದ ಬೆಲೆಯನ್ನು ಪಡೆಯುವುದಿಲ್ಲ. ಮತ್ತು ಕಮಿಷನ್ ಏಜೆಂಟ್ಗಳು ರೈತರಿಂದ ಸಾಲವನ್ನು ಪಡೆದು ವ್ಯವಹಾರದಿಂದ ಹೊರಗುಳಿಯುವಂತೆ ಮಾಡುತ್ತಾರೆ ಎಂಬ ಆತಂಕ ರೈತರದ್ದಾಗಿತ್ತು.
ಇದನ್ನೂ ಓದಿ: Big Breaking.. ಮೂರು ಕೃಷಿ ಕಾನೂನುಗಳು ರದ್ದು: ಪ್ರಧಾನಿ ಮೋದಿ ಘೋಷಣೆ..!
ಅನ್ನದಾತರ ಬೇಡಿಕೆ ಏನಾಗಿತ್ತು?
ತಮ್ಮ ಬೆಳೆಗಳ ಮಾರಾಟವನ್ನು ನಿಯಂತ್ರಿಸುವ ಕೇಂದ್ರ ಸರ್ಕಾರದ ಮೂರೂ ಕಾನೂನುಗಳನ್ನೂ ಹಿಂತೆಗೆದುಕೊಳ್ಳಬೇಕು. ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಮುಂದುವರಿಸುವ ಬಗ್ಗೆ ಕಾನೂನುಗಳಿಗೆ ತಿದ್ದುಪಡಿ ಮಾಡುವ ಮೂಲಕ ಕಾನೂನಾತ್ಮಕ ಭರವಸೆ ನೀಡಬೇಕು.
ವಿದ್ಯುತ್ ಸಬ್ಸಿಡಿ ಸ್ಥಗಿತಗೊಳ್ಳುವ ಆತಂಕದಿಂದ ಪ್ರಸ್ತಾವಿತ ವಿದ್ಯುತ್ ತಿದ್ದುಪಡಿ ಮಸೂದೆ-2020 ಯನ್ನು ಕೂಡ ಹಿಂಪಡೆಯಬೇಕು ಎಂಬುದು ರೈತರ ಪ್ರಮುಖ ಒತ್ತಾಯವಾಗಿತ್ತು. ಜೊತೆಗೆ ಬೆಳೆ ಬೆಳೆದ ನಂತರ ಉಳಿದಿರುವ ಒಣ ಹುಲ್ಲುಗಳನ್ನು ಸುಡುವುದರ ವಿರುದ್ಧದ ನಿಯಮಗಳು ಕೂಡ ರೈತರಿಗೆ ಅನ್ವಯವಾಗಬಾರದು ಎಂದೂ ರೈತರು ಸರ್ಕಾರವನ್ನು ಒತ್ತಾಯಿಸಿದ್ದರು.
ಎಂಎಸ್ಪಿ ರೈತರ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಕನಿಷ್ಠ ಬೆಂಬಲ ಬೆಲೆ (MSP) ಎಂದರೆ ರೈತರಿಂದ ಯಾವುದೇ ಬೆಳೆಗಳನ್ನು ಖರೀದಿಸುವಾಗ ಸರ್ಕಾರ ಪಾವತಿಸುವ ಕನಿಷ್ಠ ಬೆಲೆ. ಕೃಷಿ ವೆಚ್ಚವನ್ನು ಲೆಕ್ಕ ಹಾಕಿದ ನಂತರ ವಾರ್ಷಿಕ ಆಧಾರದ ಮೇಲೆ ಇಪ್ಪತ್ತೆರಡಕ್ಕೂ ಹೆಚ್ಚು ಸರಕುಗಳಿಗೆ ರಾಜ್ಯ ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗ(ಸಿಎಸಿಪಿ)ಕನಿಷ್ಠ ಬೆಂಬಲ ಬೆಲೆಯನ್ನು ನಿರ್ಧರಿಸುತ್ತದೆ.