ಕರ್ನಾಟಕ

karnataka

By ETV Bharat Karnataka Team

Published : Nov 13, 2023, 9:21 PM IST

ETV Bharat / bharat

ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ದಿನ ಊರಲ್ಲಿ ಪೂಜೆ ಸಲ್ಲಿಸಿ: ಹಿಂದೂ ಸಮುದಾಯಕ್ಕೆ ವಿಎಚ್‌ಪಿ ಕರೆ

2024 ಜನವರಿ 22 ರಂದು ಭವ್ಯ ರಾಮ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದ ಭಾಗವಾಗಲು 10 ಕೋಟಿ ಕುಟುಂಬಗಳಿಗೆ ವಿಶ್ವ ಹಿಂದೂ ಪರಿಷತ್​ (ವಿಎಚ್‌ಪಿ) ಕರೆ ನೀಡಿದೆ.

ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ
ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ

ನವದೆಹಲಿ:ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ಮಂದಿರದಲ್ಲಿ ಜನವರಿ 22ರ ಭಗವಾನ್​ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಭಾಗವಾಗುವಂತೆ ದೇಶ ಮತ್ತು ವಿದೇಶಗಳಲ್ಲಿನ 10 ಕೋಟಿಗೂ ಅಧಿಕ ಹಿಂದು ಕುಟುಂಬಗಳಿಗೆ ಮನವಿ ಮಾಡುವುದಾಗಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸೋಮವಾರ ತಿಳಿಸಿದೆ.

ಇಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಎಚ್‌ಪಿ ಕೇಂದ್ರ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್, ವಿಶ್ವ ಹಿಂದೂ ಪರಿಷತ್​ ಸೇರಿದಂತೆ ಇತರ ಹಿಂದೂ ಸಂಘಟನೆಗಳೊಂದಿಗೆ ಸೇರಿ ಜನವರಿ 1 ರಿಂದ 15 ರವರೆಗೆ ದೇಶದ ವಿವಿಧ ನಗರಗಳು, ಹಳ್ಳಿಗಳಲ್ಲಿನ ಹಿಂದೂ ಕುಟುಂಬಗಳನ್ನು ಭೇಟಿ ಮಾಡಿ 'ಶ್ರೀರಾಮನ ಪಟ್ಟಾಭಿಷೇಕ' ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಕೋರಲಾಗುವುದು ಎಂದರು.

10 ಕೋಟಿಗೂ ಅಧಿಕ ಹಿಂದು ಕುಟುಂಬಗಳಿಗೆ ಕಾರ್ಯಕ್ರಮಕ್ಕೆ ಆಹ್ವಾನಿಸುವುದರ ಜೊತೆಗೆ ಪ್ರತಿ ಕುಟುಂಬಕ್ಕೆ ಭಗವಾನ್ ಶ್ರೀರಾಮ, ಭವ್ಯ ಮಂದಿರದ ಚಿತ್ರ ಮತ್ತಿತರ ಅಗತ್ಯ ಮಾಹಿತಿಯ ಕೈಪಿಡಿಯನ್ನು ನೀಡಲಾಗುವುದು. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇದಕ್ಕೆ ಅನುಮತಿ ನೀಡಿದೆ. ವಿದೇಶದಲ್ಲಿರುವ ಹಿಂದೂಗಳಿಗೂ ಇದನ್ನು ತಲುಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಅಯೋಧ್ಯೆಗೆ ಆಹ್ವಾನವಲ್ಲ, ಊರಲ್ಲೇ ಪೂಜಿಸಿ:ಹಿಂದು ಕುಟುಂಬಗಳನ್ನು ಭೇಟಿ ಮಾಡಿ ನೀಡಲಾಗುವ ಆಹ್ವಾನ ಅಯೋಧ್ಯೆಗೆ ಬರಲು ಅಲ್ಲ, ಅವರಿದ್ದ ಊರಲ್ಲೇ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುವ ಮೂಲಕ ಜನರು ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿದೆ. ರಾಮನ ಪಟ್ಟಾಭಿಷೇಕದ ಹಿನ್ನೆಲೆ ನವೆಂಬರ್ 5 ರಿಂದಲೇ ಭಕ್ತಿಯ 'ಅಕ್ಷತ ಕಲಶ'ವನ್ನು ಈಗಾಗಲೇ ದೇಶಾದ್ಯಂತ ಕಳುಹಿಸಲಾಗಿದೆ. ವಿಎಚ್‌ಪಿ ತಂಡಗಳು ಹಿಂದೂಗಳ ಕುಟುಂಬಗಳ ಭೇಟಿಯ ವೇಳೆ ಭಕ್ತರಿಂದ ಯಾವುದೇ ಉಡುಗೊರೆ, ದೇಣಿಗೆ ಅಥವಾ ಇತರ ವಸ್ತುಗಳನ್ನು ಸ್ವೀಕರಿಸುವುದಿಲ್ಲ. ಈ ಬಾರಿ ನಾವು ಸಮಾಜದಿಂದ ಏನನ್ನೂ ನಿರೀಕ್ಷಿಸುತ್ತಿಲ್ಲ. ಬದಲಿಗೆ ರಾಮನ ಪೂಜೆಯಲ್ಲಿ ತೊಡಗಲು ಮಾತ್ರ ಕೋರಲಾಗುವುದು ಎಂದರು.

ಅಯೋಧ್ಯೆಯ ರಾಮಮಂದಿರದಲ್ಲಿ ಅಂದು ನಡೆಯಲಿರುವ ಭವ್ಯ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಿ ಮತ್ತು ಐತಿಹಾಸಿಕ ವಿದ್ಯಮಾನವನ್ನು ಭಕ್ತರು ಕಣ್ತುಂಬಿಕೊಳ್ಳಬೇಕು. ಪ್ರಪಂಚದಾದ್ಯಂತ 5 ಲಕ್ಷಕ್ಕೂ ಹೆಚ್ಚು ದೇವಾಲಯಗಳಲ್ಲಿ ಅದೇ ದಿನ ಪೂಜಾ ಕೈಂಕರ್ಯಗಳು ನಡೆಯಲಿವೆ. ಲಕ್ಷಾಂತರ ಹಿಂದೂಗಳು ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಗಣ್ಯರು, ಸಾವಿರಾರು ಸಂತರು ದೇಶದ ಪವಿತ್ರ ಸಮಾರಂಭದಲ್ಲಿ ಹಾಜರಿರಲಿದ್ದಾರೆ ಎಂದು ಅವರು ತಿಳಿಸಿದರು.

ಶ್ರೀರಾಮ 14 ವರ್ಷಗಳ ವನವಾಸದ ಮುಗಿಸಿ ಬಂದಿದ್ದರ ದ್ಯೋತಕವಾಗಿ ದೀಪಾವಳಿ ಆಚರಿಸುತ್ತೇವೆ. ಜನವರಿ 22 ಜಗತ್ತು ಮತ್ತೊಮ್ಮೆ ದೀಪಾವಳಿ ಆಚರಿಸಲಿದೆ. 500 ವರ್ಷಗಳ ನಂತರ 'ಅಮೃತ ಕಾಲ'ದಲ್ಲಿ ರಾಮ ತನ್ನ ಜನ್ಮಸ್ಥಳಕ್ಕೆ ಮರಳಲಿದ್ದಾನೆ ಎಂದು ಐತಿಹಾಸಿಕ ಘಟನೆಯನ್ನು ಅಲೋಕ್ ಕುಮಾರ್ ವಿವರಿಸಿದರು.

ಬಲಿದಾನ ಮಾಡಿದ ಕುಟುಂಬಗಳಿಗೆ ದರ್ಶನ:ರಾಮ ಜನ್ಮಭೂಮಿ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದ ಕುಟುಂಬದ ಸದಸ್ಯರನ್ನು ರಾಮಮಂದಿರ ಭೇಟಿಗೆ ಕರೆದೊಯ್ಯಲಾಗುವುದು. ಜನವರಿ 27 ರಿಂದ ಫೆಬ್ರವರಿ 22 ರವರೆಗೆ ಗುಂಪುಗಳಾಗಿ ವಿಂಗಡಿಸಿ ರಾಮನ ದರ್ಶನ ಮಾಡಿಸಲಾಗುವುದು. ಸುಮಾರು ಒಂದು ಲಕ್ಷ ಜನರಿಗೆ ವ್ಯವಸ್ಥೆ ಮಾಡಲಾಗಿದೆ. ರಾಮನ ಪಟ್ಟಾಭಿಷೇಕ ದಿನದ ರಾತ್ರಿ ಐದು ದೀಪಗಳನ್ನು ಬೆಳಗಿಸಿ ಎಂದು ಅವರು ಕೋರಿದರು.

ಇದನ್ನೂ ಓದಿ:ಲಕ್ಷ್ಮಿ ದೇವಿ ಬಗ್ಗೆ ವಿವಾದಾತ್ಮಕ ಹೇಳಿಕೆ: ಎಸ್​ಪಿ ನಾಯಕನ ವಿರುದ್ಧ ಆಚಾರ್ಯ ಪ್ರಮೋದ್ ಕೃಷ್ಣಂ ವಾಗ್ದಾಳಿ

ABOUT THE AUTHOR

...view details