ಕರ್ನಾಟಕ

karnataka

By

Published : Jun 28, 2021, 7:41 AM IST

ETV Bharat / bharat

ಕೇಂದ್ರದೊಂದಿಗಿನ ಶೀತಲ ಸಮರ ಉಲ್ಬಣ: ಟ್ವಿಟ್ಟರ್​ ಮುಖ್ಯ ಅನುಸರಣೆ ಅಧಿಕಾರಿ ರಾಜೀನಾಮೆ

ಹೊಸ ಐಟಿ ನಿಯಮಗಳಿಗೆ ಸಂಬಂಧಪಟ್ಟಂತೆ ಟ್ವಿಟ್ಟರ್ ಇಂಡಿಯಾ ಮತ್ತು ಕೇಂದ್ರ ಸರ್ಕಾರದ ನಡುವಿನ ಶೀತಲ ಸಮರ ತಾರಕಕ್ಕೇರಿದೆ. ಈ ನಡುವೆ ಟ್ವಿಟ್ವರ್​ನ ​ಮುಖ್ಯ ಅನುಸರಣೆ ಅಧಿಕಾರಿ ರಾಜೀನಾಮೆ ಕೊಟ್ಟಿದ್ದಾರೆ.

Twitter's Grievance Officer resigns
ಅನುಸರಣೆ ಅಧಿಕಾರಿ ರಾಜೀನಾಮೆ

ನವದೆಹಲಿ:ಹೊಸ ಮಾಹಿತಿ ತಂತ್ರಜ್ಞಾನ ನಿಯಮ (IT Rules)ದಂತೆ ತಿಂಗಳ ಹಿಂದೆ ಟ್ವಿಟ್ಟರ್ ಇಂಡಿಯಾ ನೇಮಕ ಮಾಡಿದ್ದಮಧ್ಯಂತರ ಕುಂದುಕೊರತೆ ಪರಿಹಾರ ಅಧಿಕಾರಿ ಅಥವಾ ಅನುಸರಣೆ ಅಧಿಕಾರಿ (Compliance Officer) ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೇಂದ್ರ ಸರ್ಕಾರ ಮತ್ತು ಟ್ವಿಟ್ಟರ್​​ ನಡುವಿನ ಶೀತಲ ಸಮರ ಉಲ್ಬಣಗೊಂಡಿರುವುದೇ ಅಧಿಕಾರಿಯ ರಾಜೀನಾಮೆಗೆ ಕಾರಣ ಎಂದು ಹೇಳಲಾಗುತ್ತಿದೆ.

ರೈತರ ಪ್ರತಿಭಟನೆಗಳನ್ನು ಬೆಂಬಲಿಸುವ ಟ್ವೀಟ್​ಗಳನ್ನು ತೆಗೆದು ಹಾಕುವುದು, ಬಿಜೆಪಿಯ ನಾಯಕರ ಟ್ವೀಟ್​ಗಳಿಗೆ ಪ್ಲ್ಯಾಗ್ ಮಾಡಿರುವುದು ಮತ್ತು ಹೊಸ ಐಟಿ ನಿಯಮಗಳನ್ನು ಅಳವಡಿಸಿಕೊಳ್ಳಲು ಹಿಂದೇಟು ಹಾಕಿರುವುದು ಸೇರಿದಂತೆ, ಹಲವು ವಿಚಾರಗಳಲ್ಲಿ ಟ್ವಿಟ್ಟರ್​ ಮತ್ತು ಕೇಂದ್ರ ಸರ್ಕಾರ ನಡುವೆ ಸಮರ ನಡೆಯುತ್ತಿದೆ.

ಟ್ವಿಟ್ಟರ್​ ವಿರುದ್ಧ ತೊಡೆ ತಟ್ಟಿರುವ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ, ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಅಸ್ತ್ರ ಪ್ರಯೋಗಕ್ಕೆ ಪ್ರಯತ್ನಿಸುತ್ತಿದೆ. ಹೊಸ ಐಟಿ ನಿಯಮದಂತೆ, ದೇಶಿಯ ಅನುಸರಣೆ ಅಧಿಕಾರಿಯನ್ನು ನೇಮಕ ಮಾಡುವಂತೆ ಟ್ವಿಟ್ಟರ್​​ಗೆ ಕೇಂದ್ರ ಸರ್ಕಾರ ಸೂಚಿಸಿತ್ತು. ಆರಂಭದಲ್ಲಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಮೈಕ್ರೋ ಬ್ಲಾಗಿಂಗ್ ಕಂಪನಿ, ಬಳಿಕ ಮೇ 31 ರಂದು ಕಾನೂನು ಸಂಸ್ಥೆಯ ಪಾಲುದಾರ ಧರ್ಮೇಂದ್ರ ಚತುರ್ ಅವರನ್ನು ಮುಖ್ಯ ಅನುಸರಣೆ ಅಧಿಕಾರಿಯಾಗಿ ನೇಮಕ ಮಾಡಿರುವುದಾಗಿ ದೆಹಲಿ ಹೈಕೋರ್ಟ್​ಗೆ ತಿಳಿಸಿತ್ತು.

ಆದರೆ, ಶಾಸನಬದ್ದ ಹುದ್ದೆಗಳಿಗೆ ಹೊರಗಿನವರ ನೇಮಕವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಬೆಳವಣಿಗೆಯ ನಡುವೆ ಇದೀಗ ಅನುಸರಣೆ ಅಧಿಕಾರಿ ರಾಜೀನಾಮೆ ನೀಡಿದ್ದಾರೆ.

ಇದನ್ನೂಓದಿ: ಟ್ವಿಟರ್ ನಿರ್ಬಂಧ ಹೇರೋದ್ಯಾಕೆ : ಕೇಂದ್ರ ಸಚಿವರಿಗೆ ಉದಾಹರಣೆ ಸಹಿತ ವಿವರಿಸಿದ ಸಂಸದ ಶಶಿ ತರೂರ್!!

ಈ ನಡುವೆ ಧಾರ್ಮಿಕ ವೈಷಮ್ಯ ಹರಡುವ ವಿಡಿಯೋಗಳನ್ನು ತಡೆಯಲು ವಿಫಲರಾಗಿದ್ದಾರೆ ಎಂಬ ಆರೋಪದಲ್ಲಿ ಟ್ಟಿಟ್ಟರ್​ ಇಂಡಿಯಾದ (Twitter India) ಮುಖ್ಯಸ್ಥ ಮನೀಶ್ ಮಹೇಶ್ವರಿ ಅವರನ್ನು ಉತ್ತರ ಪ್ರದೇಶ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.

ಬಳಕೆದಾರರು ಸೃಷ್ಟಿಸಿದ ವಿಷಯಕ್ಕೆ ಸಾಮಾಜಿಕ ಮಾಧ್ಯಮ ಕಂಪನಿಯನ್ನು ಹೊಣೆಗಾರರನ್ನಾಗಿ ಮಾಡುವ ಕಾನೂನು ಇದೇ ಮೊದಲ ಬಾರಿಗೆ ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿ ಜಾರಿಗೆ ಬಂದಿದೆ. ಹಾಗಾಗಿ, ಹೊಸ ಕಾನೂನಿಗೆ ಸೋಶಿಯಲ್ ಮಿಡಿಯಾ ಕಂಪನಿಗಳು ವಿರೋಧ ವ್ಯಕ್ತಪಡಿಸಿದೆ.

ಹೊಸ ಕಾನೂನಿನ ಷರತ್ತುಗಳನ್ನು ಪಾಲಿಸದ ಕಾರಣ ಟ್ವಿಟ್ಟರ್ ತನ್ನ ಕಾನೂನು ರಕ್ಷಣೆಯನ್ನು ಕಳೆದುಕೊಂಡಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇನ್ನು, ಮುಖ್ಯ ಅನುಸರಣೆ ಅಧಿಕಾರಿಯ ರಾಜೀನಾಮೆಯ ಬಗ್ಗೆ ಪ್ರತಿಕ್ರಿಯಿಸಲು ಟ್ವಿಟ್ಟರ್​ ವಕ್ತಾರರು ನಿರಾಕರಿಸಿದ್ದು, ಹೊಸ ನಿಯಮಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ.

ABOUT THE AUTHOR

...view details