ಪಣಜಿ: ಮಾಜಿ ತೆಹಲ್ಕಾ ಪ್ರಧಾನ ಸಂಪಾದಕ ತರುಣ್ ತೇಜ್ಪಾಲ್ ಅವರನ್ನು ಖುಲಾಸೆಗೊಳಿಸಿದ ಗೋವಾ, ನ್ಯಾಯಾಲಯದ ಆದೇಶ ಪ್ರಶ್ನಿಸಿ ಮೇಲ್ಮನವಿಯನ್ನು ಗೋವಾ ಸರ್ಕಾರ ಸಲ್ಲಿಸಿದೆ.
ಇದೊಂದು "ಆಘಾತಕಾರಿ" ಬೆಳವಣಿಗೆ ಹಾಗೆ ಬಲಿಪಶುವಿನ ವಿಶ್ವಾಸಾರ್ಹತೆ ಪ್ರಶ್ನಿಸುತ್ತದೆ ಎಂದು ತಿಳಿಸಿದೆ. ಈ ಸಂಬಂಧ ಗೋವಾ ಸರ್ಕಾರ ಬಾಂಬೆ ಹೈಕೋರ್ಟ್ ಮುಂದೆ ತಿದ್ದುಪಡಿ ಮಾಡಿದ ಮೇಲ್ಮನವಿಯಲ್ಲಿ ತಿಳಿಸಿದೆ.
ಈ ಆದೇಶವು ಖುಲಾಸೆಗೊಳಿಸುವ ಆದೇಶವನ್ನು ಬದಿಗಿಟ್ಟು ವಿಚಾರಣೆಯನ್ನು ನಿರ್ದೇಶಿಸಲು ಅರ್ಹವಾಗಿದೆ ಎಂದು ಮೇಲ್ಮನವಿಯಲ್ಲಿ ಉಲ್ಲೇಖ ಮಾಡಲಾಗಿದೆ. ವಿಚಾರಣಾ ನ್ಯಾಯಾಲಯವು ಆರೋಪಿ ಪರ ನೀಡಲಾದ ಸಾಕ್ಷ್ಯಗಳನ್ನು ಸತ್ಯ ಎಂದು ಪರಿಗಣಿಸಿದೆ. ಆದರೆ ಸಂತ್ರಸ್ತೆಯ ಪುರಾವೆಗಳನ್ನು ಪರಿಗಣಿಸಿಲ್ಲ ಎಂದು ಸರ್ಕಾರ ಹೇಳಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕ್ಷಮಾ ಜೋಶಿ ಅವರು ಮೇ 21 ರಂದು ತೇಜ್ಪಾಲ್ ಅವರನ್ನು ಅತ್ಯಾಚಾರ ಆರೋಪದಿಂದ ಖುಲಾಸೆಗೊಳಿಸಿದ್ದಾರೆ.
ಏನಿದು ಪ್ರಕರಣ :
ರಾಜ್ಯದ ಐಷಾರಾಮಿ ಹೋಟೆಲ್ನ ಲಿಫ್ಟ್ನೊಳಗೆ ಮಾಜಿ ಮಹಿಳಾ ಸಹೋದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿದ್ದ ತೆಹಲ್ಕಾ ಸುದ್ದಿ ಪತ್ರಿಕೆಯ ಸ್ಥಾಪಕ-ಸಂಪಾದಕ ತೇಜ್ಪಾಲ್ ಅವರನ್ನು ಕಳೆದ ಶುಕ್ರವಾರ(ಮೇ 21) ಗೋವಾದ ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿತ್ತು.
ನ್ಯಾಯಾಧೀಶರಾದ ಕ್ಷಮಾ ಜೋಶಿ, ದಾಖಲೆಯ ಸಾಕ್ಷ್ಯಗಳನ್ನು ಪರಿಗಣಿಸಿದಾಗ, ಆರೋಪಿಗೆ ಸಂಶಯದ ಲಾಭವನ್ನು ನೀಡಲಾಗುತ್ತದೆ. ಏಕೆಂದರೆ ದೂರು ನೀಡಿದ ಮಹಿಳೆ ಮಾಡಿದ ಆರೋಪಗಳನ್ನು ಬೆಂಬಲಿಸುವ ಯಾವುದೇ ದೃಢೀಕರಣದ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಹೇಳಿತ್ತು.