ಕರ್ನಾಟಕ

karnataka

By ETV Bharat Karnataka Team

Published : Aug 22, 2023, 9:02 AM IST

Updated : Aug 22, 2023, 10:21 AM IST

ETV Bharat / bharat

ಬಾಲಾಕೋಟ್​ನಲ್ಲಿ ಇಬ್ಬರು ಉಗ್ರರನ್ನು ಗುಂಡಿಕ್ಕಿ ಕೊಂದ ಭಾರತೀಯ ಸೇನೆ

two terrorists killed along LoC in J-K's Balakote: ಜಮ್ಮುವಿನ ಬಾಲಾಕೋಟ್ ಸೆಕ್ಟರ್‌ನ ಗಡಿ ರೇಖೆಯಲ್ಲಿ ಇಬ್ಬರು ನುಸುಳುಕೋರರ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ.

Security forces
Security forces

ಬಾಲಾಕೋಟ್(ಜಮ್ಮು ಮತ್ತು ಕಾಶ್ಮೀರ): ಪೂಂಚ್​ ಜಿಲ್ಲೆಯ ಬಾಲಾಕೋಟ್ ಸೆಕ್ಟರ್‌ನ ಗಡಿ ರೇಖೆಯಲ್ಲಿ ಸೋಮವಾರ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದೆ. ನುಸುಳುಕೋರರಿಂದ ಭದ್ರತಾ ಪಡೆಗಳು ಒಂದು ಎಕೆ 47, ಎರಡು ಮ್ಯಾಗಜೀನ್‌ಗಳು, 30 ರೌಂಡ್‌ಗಳು, ಎರಡು ಹ್ಯಾಂಡ್ ಗ್ರೆನೇಡ್‌ಗಳು ಮತ್ತು ಪಾಕಿಸ್ತಾನ ಮೂಲದ ಔಷಧ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ ಎಂದು ಭಾರತೀಯ ಸೈನ್ಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡ ಭಾರತೀಯ ಸೇನೆ ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿ ಆಗಿದೆ. ಬಾಲಾಕೋಟ್​ ವಲಯದಿಂದ ಭಯೋತ್ಪಾದಕರು ಒಳ ನುಸುಳಲು ಎಲ್‌ಒಸಿ ಬಳಿ ತಯಾರಾಗುತ್ತಿರುವುದನ್ನು ಗಮನಿಸಿ ಅಲ್ಲಿನ ಪೊಲೀಸರು ಸೇನೆಗೆ ಮಾಹಿತಿ ನೀಡಿತ್ತು. ಖಚಿತ ಮಾಹಿತಿಯ ಆಧಾರದ ಮೇಲೆ ಉಗ್ರರ ಮೇಲೆ ಸೇನೆ ಗುರಿ ಇಟ್ಟಿತ್ತು. ಹಮೀರ್‌ಪುರ ಪ್ರದೇಶದಲ್ಲಿ ಈ ಇಬ್ಬರು ಭಯೋತ್ಪಾದಕರು ಒಳ ನುಸುಳಲು ಕಾದು ಕುಳಿತಿದ್ದರು. ಪ್ರತಿಕೂಲ ಹವಾಮಾನಕ್ಕಾಗಿ ಇವರು ಎದುರು ನೋಡುತ್ತಿದ್ದರು. ಇದನ್ನು ಗಮನಿಸಿದ ಸೇನೆ ಇವರ ಮೇಲೆ ದಾಳಿ ಮಾಡಿ ಕಥೆ ಮುಗಿಸಿದೆ.

ಭದ್ರತಾ ಪಡೆ ಗುಂಡಿನ ದಾಳಿ ವೇಳೆ ಇಬ್ಬರು ಹತರಾದರೆ, ಇನ್ನಿಬ್ಬರು ಪ್ರತಿ ದಾಳಿ ನಡೆಸಲು ಸಾಧ್ಯವಾಗದೇ ಪರಾರಿಯಾಗಿದ್ದಾರೆ. ಮೊದಲು ಸೇನೆಯ ದಾಳಿಯಲ್ಲಿ ಒಬ್ಬ ಉಗ್ರ ಸ್ಥಳದಲ್ಲೇ ಹತನಾದರೆ, ಇನ್ನೊಬ್ಬ ಎಲ್‌ಒಸಿಯಿಂದ ಓಡಿ ಹೋಗುವ ಯತ್ನ ಮಾಡಿದ್ದ. ಆದರೆ ಸೇನೆಯ ಗುಂಡಿನಿಂದ ತಪ್ಪಿಸಿಕೊಳ್ಳಲಾಗದೇ, ಮೃತಪಟ್ಟಿದ್ದಾನೆ ಎಂದು ಸೇನಾ ಮೂಲಗಳು ಖಚಿತ ಪಡಿಸಿವೆ.

ಜಮ್ಮುವಿನಲ್ಲಿ ಹುದುಗಿಸಿಟ್ಟಿದ್ದ ಸ್ಫೋಟಕ ನಿಷ್ಕ್ರಿಯ: ಜಮ್ಮು ಕಾಶ್ಮೀರದ ಹೆದ್ದಾರಿಯಲ್ಲಿ ಸ್ಫೋಟಕ ಪತ್ತೆಯಾಗಿತ್ತು. ಶಂಕಿತ ಉಗ್ರರು ಸುಧಾರಿತ ಸ್ಫೋಟಕ ಸಾಧನವನ್ನು ಜಮ್ಮುವಿನ ನಗ್ರೋಟಾದ ಪಂಜ್‌ಗ್ರೇನ್ ಪ್ರದೇಶದಲ್ಲಿ ಹೆದ್ದಾರಿ ಪಕ್ಕದಲ್ಲಿ ಹುದುಗಿಸಿಟ್ಟಿದ್ದರು. ಪೊಲೀಸರಿಗೆ ಅನುಮಾಸ್ಪದವಾಗಿ ಕಂಡು ಬಂದ ಹಿನ್ನೆಲೆ ಆ ವಸ್ತುವಿನ ತಾಂತ್ರಿಕ ಪರೀಕ್ಷೆಯನ್ನು ಪ್ರಾರಂಭಿಸಿ ಹೆದ್ದಾರಿಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಪರೀಕ್ಷೆ ಮೂಲಕ ಆ ವಸ್ತು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಎಂದು ತಿಳಿಯುತ್ತದೆ. ತ್ವರಿತವಾಗಿ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಲಾಯಿತು. ನಂತರ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಭಾನುವಾರ ಪುಲ್ವಾಮಾದಲ್ಲಿ ಉಗ್ರರು ಅಡಗಿ ಕುಳಿತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸೇನೆ ಕಾರ್ಯಾಚರಣೆ ಕೈಗೊಂಡಿತ್ತು. ಈ ವೇಳೆ ಉಗ್ರರು ಮತ್ತು ಸೇನೆ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಅಂತಿಮವಾಗಿ ಸೇನೆಯ ಕೈಯಿಂದ ಉಗ್ರರು ತಪ್ಪಿಸಿಕೊಂಡು ಪರಾರಿಯಾಗಿದ್ದರು.

ಇದನ್ನೂ ಓದಿ:ಜಮ್ಮು- ಕಾಶ್ಮೀರ ಹೆದ್ದಾರಿಯಲ್ಲಿ ಸುಧಾರಿತ ಸ್ಫೋಟಕ ಪತ್ತೆ.. ನಿಷ್ಕ್ರಿಯಗೊಳಿಸಿದ ಭದ್ರತಾ ಸಿಬ್ಬಂದಿ

Last Updated : Aug 22, 2023, 10:21 AM IST

ABOUT THE AUTHOR

...view details