ಕರ್ನಾಟಕ

karnataka

ಉತ್ತರಕಾಶಿ ಸುರಂಗ ಕುಸಿತ: ಕಾರ್ಮಿಕರೊಂದಿಗೆ ಮಾತನಾಡಿದ ಪ್ರಧಾನಿಗಳ ಪ್ರಧಾನ ಕಾರ್ಯದರ್ಶಿ

By ETV Bharat Karnataka Team

Published : Nov 27, 2023, 7:39 PM IST

ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರೊಂದಿಗೆ ಪ್ರಧಾನಿಗಳ ಪ್ರಧಾನ ಕಾರ್ಯದರ್ಶಿ ಮಾತನಾಡಿದ್ದಾರೆ.

ಕಾರ್ಮಿಕರೊಂದಿಗೆ ಪ್ರಧಾನಿ ಪ್ರಧಾನ ಕಾರ್ಯದರ್ಶಿ ಮಾತು...
ಕಾರ್ಮಿಕರೊಂದಿಗೆ ಪ್ರಧಾನಿ ಪ್ರಧಾನ ಕಾರ್ಯದರ್ಶಿ ಮಾತು...

ಉತ್ತರಕಾಶಿ:ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಇದರ ನಡುವೆಯೇ ಇಂದು ಪ್ರಧಾನಿ ಮೋದಿ ಅವರ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಕುಮಾರ್ ಮಿಶ್ರಾ, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಮತ್ತು ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ಎಸ್ ಎಸ್ ಸಂಧು ಅವರು ಘಟನಾ ಸ್ಥಳಕ್ಕೆ ತೆರಳಿ ಪರಿಸ್ಥಿತಿಯ ಪರಿಶೀಲನೆ ನಡೆಸಿದರು.

ಈ ವೇಳೆ, ಪ್ರಮೋದ್ ಕುಮಾರ್ ಮಿಶ್ರಾ ಅವರು ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರೊಂದಿಗೆ ನೇರವಾಗಿ ಮಾತನಾಡಿದರು. ಅವರ ಆರೋಗ್ಯದ ಸ್ಥಿತಿ ಬಗ್ಗೆ ವಿಚಾರಿಸಿದರು. ಸುರಂಗ ಕಾರ್ಯಾಚರಣೆ ಬಗ್ಗೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ನಿಗಾ ವಹಿಸುತ್ತಿದ್ದಾರೆ. ಮತ್ತೊಂದೆಡೆ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯಲ್ಲಿ ಆಗಿರುವ ಪ್ರಗತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ನಿರಂತರವಾಗಿ ಮಾಹಿತಿ ಪಡೆಯುತ್ತಿದ್ದಾರೆ. ಇದೇ ವೇಳೆ, ಕೇಂದ್ರ ಸಚಿವ ಜನರಲ್ ವಿಕೆ ಸಿಂಗ್ ಕಾರ್ಮಿಕರ ಸುರಕ್ಷಿತೆ ಬಗ್ಗೆ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಕಾರ್ಯಾಚರಣೆ ಬಗ್ಗೆ ಸುರಂಗ ತಜ್ಞ ಕ್ರಿಸ್​ ಕೂಪರ್ ಪ್ರತಿಕ್ರಿಯಿಸಿದ್ದಾರೆ. ​ಲೇಸರ್​ ಕಟ್ಟರ್​ನಿಂದ ಸುರಂಗದ ಒಳಗೆ ಕಾರ್ಯಾಚರಣೆ ವೇಳೆ ಆಗರ್​ ಯಂತ್ರ ಮುರಿದ ಭಾಗವನ್ನು ಹೊರ ತೆಗೆಯಲಾಗಿದೆ. ಇದೀಗ ಇಲ್ಲಿ ಮ್ಯಾನ್ಯುವಲ್ ಡ್ರಿಲ್ಲಿಂಗ್ ಕೆಲಸ ಆರಂಭವಾಗಲಿದ್ದು, ಭಾರತೀಯ ಸೇನೆಯ ಇಂಜಿನಿಯರಿಂಗ್ ಮೇಲ್ವಿಚಾರಣೆಯಲ್ಲಿ ಈ ಕಾರ್ಯ ಮುಂದುವರಿಯಲಿದೆ. ಕೈಯಿಂದ ಕೊರೆಯಲು ಗಣಿಗಾರಿಕೆ ವಿಧಾನವನ್ನು ಅಳವಡಿಸಿಕೊಳ್ಳಲಾಗುವುದು. ಕಲ್ಲಿದ್ದಲು ಗಣಿಗಳ ಮಾದರಿಯಲ್ಲಿ ಇಲ್ಲಿ ಸಣ್ಣ ಸುರಂಗಗಳನ್ನು ಕೊರೆಯಲಾಗುತ್ತದೆ. ಕೈಯಿಂದ ಕೊರೆಯುವಿಕೆ ಕಾರ್ಯ ಕೆಲವೇ ಗಂಟೆಗಳಲ್ಲಿ ಪ್ರಾರಂಭವಾಗಲಿದೆ. ಮ್ಯಾನ್ಯವಲ್​ ಆಗಿ 9 ಮೀಟರ್​ಗಳಷ್ಟು ಸುರಂಗ ಕೊರೆಯಬೇಕಾಗಿದೆ.

ಈ ಕಾರ್ಯಾಚರಣೆ ತ್ವರಿತವಾಗಿ ಆಗಬಹುದು ಅಥವಾ ಸ್ವಲ್ಪ ಸಮಯೂ ತೆಗೆದುಕೊಳ್ಳಬಹುದಾಗಿದೆ. ಏಕೆಂದರೆ ಸುರಂಗದೊಳಗಿನ ನೆಲವು ನಮ್ಮ ಮ್ಯಾನ್ಯುವಲ್​ ಕಾರ್ಯಾಚರಣೆಗೆ ಹೇಗೆ ಸಹಕರಿಸುತ್ತದೆ ಎಂಬುದರ ಮೇಲೆ ಇದು ನಿರ್ಧಾರವಾಗಲಿದೆ. ನ.12ರಂದು ನಿರ್ಮಾಣ ಹಂತದ ಸುರಂಗ ಕುಸಿದು ಬಿದ್ದಿತ್ತು. ಈ ವೇಳೆ, 41 ಕಾರ್ಮಿಕರು ಸುರಂಗದಲ್ಲಿ ಸಿಲುಕಿಕೊಂಡಿದ್ದಾರೆ. ಕೂಡಲೇ ಕಾರ್ಮಿಕರ ರಕ್ಷಣಾ ಕಾರ್ಯ ಆರಂಭಿಸಲಾಗಿತ್ತು. ಸುರಂಗ ಕೊರೆಯಲು ಅಮೆರಿಕ ನಿರ್ಮಿತ ಆಗರ್ ಯಂತ್ರ ಬಳಸಲಾಗಿತ್ತು. 46 ಮೀಟರ್​ ಉದ್ದ ಕೊರೆದ ಆಗರ್​ ಇನ್ನೇನು 15 ಮೀಟರ್​ನಷ್ಟು ದೂರ ಇರುವ ಕಾರ್ಮಿಕರನ್ನು ತಲುಪುವ ಮೊದಲೇ ಕೆಟ್ಟು ನಿಂತಿತ್ತು. ಇದೀಗ ಮ್ಯಾನ್ಯುವಲ್​ ಕಾರ್ಯಾಚಣೆ ಕೈಗೊಳ್ಳಲಾಗಿದೆ. ಘಟನೆ ಸಂಭವಿಸಿ ಇಂದಿಗೆ 16 ದಿನಗಳು ಕಳೆದಿವೆ.

ಇದನ್ನೂ ಓದಿ:ಸುರಂಗದಲ್ಲಿ ಸಿಕ್ಕಿಬಿದ್ದ ಕಾರ್ಮಿಕರ ಜೊತೆ ಪೈಪ್​ ಮೂಲಕ ಮಾತನಾಡಿದ ಕುಟುಂಬಸ್ಥರು - ವಿಡಿಯೋ

ABOUT THE AUTHOR

...view details