ಕೋಲ್ಕತಾ (ಪಶ್ಚಿಮ ಬಂಗಾಳ):ಟಿಎಂಸಿ ಭದ್ರಕೋಟೆ ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕೇಸರಿ ಪಾಳಯ ರಣತಂತ್ರ ಹೆಣೆದಿದೆ. ಬಂಗಾಳ ವಿಧಾನಸಭಾ ಚುನಾವಣೆಯನ್ನು ಈ ಬಾರಿ ಟಿಎಂಸಿ ಮತ್ತು ಬಿಜೆಪಿ ನಡುವಿನ ನೇರ ಹಣಾಹಣಿ ಎಂದೇ ಬಿಂಬಿಸಲಾಗಿದೆ. ಟಿಎಂಸಿ ಪಕ್ಷದ ಚುನಾವಣಾ ಪ್ರಚಾರದ ಸಲಹೆಗಾರ ಪ್ರಶಾಂತ್ ಕಿಶೋರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದು ಸುದ್ದಿಯಲ್ಲಿದೆ. ಈ ಆಡಿಯೋ ಬಂಗಾಳ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದೆ.
ಟಿಎಂಸಿ ಪಕ್ಷದ ಚುನಾವಣಾ ಪ್ರಚಾರದ ಸಲಹೆಗಾರ ಪ್ರಶಾಂತ್ ಕಿಶೋರ್ ಅವರದ್ದು ಎನ್ನಲಾದ ಈ ಆಡಿಯೋದಲ್ಲಿ ಬಿಜೆಪಿಗೆ ಗೆಲುವು ಲಭಿಸುವ ಬಗ್ಗೆ ಮಾತುಕತೆ ನಡೆದಿದೆ. ಬಿಜೆಪಿಯ ಬಲದ ಬಗ್ಗೆ ಟಿಎಂಸಿಗೆ ಈಗ ಅರಿವಾಗಿದೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಸರಣಿ ಟ್ವೀಟ್ ಮಾಡಿದ್ದಾರೆ ಹಾಗೂ ಅದಕ್ಕೆ ಸ್ವತಃ ಪ್ರಶಾಂತ್ ಕಿಶೋರ್ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:ಬಂಗಾಳ ಚುನಾವಣೆಯಲ್ಲಿ ಭುಗಿಲೆದ್ದ ಹಿಂಸಾಚಾರ: ನಾಲ್ವರು ಟಿಎಂಸಿ ಬೆಂಬಲಿಗರು ಸಾವು
ಆಡಿಯೋದಲ್ಲಿರುವ ಅಂಶಗಳು:ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪಶ್ಚಿಮ ಬಂಗಾಳದಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ ಮತ್ತು ದೇಶಾದ್ಯಂತ ಮೋದಿಯ ಸುತ್ತ ಒಂದು ಆರಾಧನೆ ಇದೆ ಎಂದು ಆಡಿಯೋ ಟೇಪ್ನಲ್ಲಿ ಕಿಶೋರ್ ಅವರ ಧ್ವನಿಯಲ್ಲಿ ಹೇಳಿಕೆ ಇದೆ.
ರಾಜ್ಯದಲ್ಲಿ ಹಿಂದಿ ಮಾತನಾಡುವ ಜನಸಂಖ್ಯೆಯ ಒಂದು ದೊಡ್ಡ ಭಾಗವು ಮೋದಿಯನ್ನು ದೇವರಂತೆ ಪರಿಗಣಿಸುತ್ತದೆ. ಟಿಎಂಸಿ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ. ಕಳೆದ 20 ವರ್ಷಗಳಿಂದ ಟಿಎಂಸಿ ಅಲ್ಪಸಂಖ್ಯಾತರನ್ನು ಸಮಾಧಾನಪಡಿಸುತ್ತಿದೆ ಎಂಬ ಅಂಶವನ್ನು ನಾವು ಒಪ್ಪಿಕೊಳ್ಳಬೇಕಾಗಿದೆ. ಕಳೆದ 20 ವರ್ಷಗಳಲ್ಲಿ ಎಡ, ಕಾಂಗ್ರೆಸ್ ಮತ್ತು ಟಿಎಂಸಿ ಪರಿಸರ ವ್ಯವಸ್ಥೆಯು ಅಲ್ಪಸಂಖ್ಯಾತರನ್ನು ಸೆಳೆಯಲು ಪ್ರಯತ್ನಿಸಿದೆ. ರಾಜ್ಯದ ಹಿಂದೂಗಳು ಈಗ ಅವರಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದು ಭಾವಿಸುತ್ತಾರೆ.
ಇದನ್ನೂ ಓದಿ:ಬಂಗಾಳ ಚುನಾವಣೆ: ಬಿಜೆಪಿ ನಾಯಕಿ ಲಾಕೆಟ್ ಚಟರ್ಜಿ ಕಾರಿನ ಮೇಲೆ ದಾಳಿ
ಆಡಳಿತ ವಿರೋಧಿ ಮತ್ತು ಎಸ್ಸಿ ಮತಗಳಂತಹ ಅಂಶಗಳು ಬಿಜೆಪಿಯ ಪರವಾಗಿವೆ. ಮಾಟುವಾಸ್ ಎಲ್ಲರೂ ಬಿಜೆಪಿಗೆ ಮತ ಹಾಕುತ್ತಿದ್ದಾರೆ. ಕೇಸರಿ ಪಕ್ಷವು ರಾಜ್ಯದಲ್ಲಿ ಅಪಾರ ಸಂಖ್ಯೆಯ ತಳಮಟ್ಟದ ಕಾರ್ಮಿಕರನ್ನು ಹೊಂದಿದೆ. ರಾಜ್ಯದ ಬಹುಪಾಲು ಪ್ರದೇಶಗಳಲ್ಲಿ ಬಿಜೆಪಿ ಭದ್ರಕೋಟೆ ಹೊಂದಿದೆ ಎಂದು ಬಿಡುಗಡೆಯಾದ ಆಡಿಯೋದಲ್ಲಿದೆ.
ಪ್ರಶಾಂತ್ ಕಿಶೋರ್ ಪ್ರತಿಕ್ರಿಯೆ: ಇದಕ್ಕೆ ಪ್ರತಿಕ್ರಿಯಿಸಿದ ಪ್ರಶಾಂತ್ ಕಿಶೋರ್, ಬಿಜೆಪಿ ನನ್ನ ಕ್ಲಬ್ಹೌಸ್ ಚಾಟ್ ಅನ್ನು ಅದರ ನಾಯಕರ ಮಾತುಗಳಿಗಿಂತ ಹೆಚ್ಚು ಗಂಭೀರವಾಗಿ ಪರಿಗಣಿಸುತ್ತಿದೆ. ಮಾತುಕತೆಯಲ್ಲಿ ತಮಗೆ ಬೇಕಾದ ಭಾಗವನ್ನು ಮಾತ್ರ ಆರಿಸಿಕೊಂಡು ಬಿಡುಗಡೆ ಮಾಡುವುದಲ್ಲ. ಪೂರ್ಣ ಸಂಭಾಷಣೆಯನ್ನು ಬಿಡುಗಡೆ ಮಾಡಲಿ. ಬಿಜೆಪಿ ನೂರಕ್ಕಿಂತಲೂ ಅಧಿಕ ಸ್ಥಾನ ಪಟೆಯುವುದಿಲ್ಲ ಎಂದು ಸವಾಲೆಸೆದಿದ್ದಾರೆ.
ಇದನ್ನೂ ಓದಿ:ಗಲಭೆ ಪ್ರಚೋದಿಸುತ್ತಿರುವ ಅಮಿತ್ ಶಾರನ್ನ ನಿಯಂತ್ರಿಸಿ: ಪ್ರಧಾನಿಗೆ ದೀದಿ ಮನವಿ
ಕಾಲೆಳೆದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ: ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, ಟಿಎಂಸಿಯ ಆಂತರಿಕ ಸರ್ವೇ ಕೂಡ ಬಿಜೆಪಿಗೆ ಬಹುಮತ ಬರುವ ಬಗ್ಗೆ ಅಭಿಪ್ರಾಯ ಹೊರಹಾಕಿದೆ ಎಂದು ಗೊತ್ತಾಗಿದೆ. ಪಶ್ಚಿಮ ಬಂಗಾಳದ ಎಸ್ಸಿ ಸಮುದಾಯ ಸಹ ಬಿಜೆಪಿಗೆ ಮತ ಹಾಕುತ್ತಿದೆ ಎಂದು ಹೇಳಿದ್ದಾರೆ. ಟಿಎಂಸಿ ಹಾಗೂ ಮಮತಾ 20 ವರ್ಷಗಳಿಂದ ಮುಸ್ಲಿಂ ಸಮುದಾಯಕ್ಕೆ ಏನು ಮಾಡಿದ್ದಾರೋ ಅದರ ಪ್ರತಿಫಲ ಈ ಬಾರಿ ಚುನಾವಣಾ ಫಲಿತಾಂಶದಲ್ಲಿ ಕಾಣಲಿದೆ. ಇಲ್ಲಿಯವರೆಗೆ ಜಾತಿ ಆಧಾರಿತ ಚುನಾವಣೆ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರಲಿಲ್ಲ. ಹಾಗಂತ, ಮೊದಲು ಆಳಿದ ಕಮ್ಯುನಿಸ್ಟರು ಮತ್ತು ಆ ನಂತರ ಬಂದ ತೃಣ ಮೂಲ ಕಾಂಗ್ರೆಸ್ ಬಹಳ ಪ್ರಬುದ್ಧತೆ ತೋರಿಸಿದ್ದರು ಎಂಬ ಅರ್ಥ ಅಲ್ಲ. ಎಸ್ಸಿ ಸಮುದಾಯದ ಮತಗಳೇ ಬಿಜೆಪಿಗೆ ಲಾಭ ತಂದುಕೊಡಲಿವೆ ಎಂದು ಟಿಎಂಸಿ ಪಕ್ಷದ ಚುನಾವಣಾ ಪ್ರಚಾರದ ಸಲಹೆಗಾರರೇ ಹೇಳುತ್ತಿದ್ದಾರೆ. ಅವರಿಗೆ ತಾವು ಸಾರ್ವಜನಿಕವಾಗಿ ಈ ಗುಟ್ಟುಗಳನ್ನು ಹಂಚಿಕೊಳ್ಳುತ್ತಿದ್ದೇವೆ ಎಂದು ಅರಿವು ಇದ್ದಿರಲಿಕ್ಕಿಲ್ಲ. ಈಗ ಅವರ ಗುಟ್ಟು ಬಯಲಾಗಿದೆ ಎಂದು ಹೇಳಿದ್ದಾರೆ.
44 ಸ್ಥಾನಗಳಲ್ಲಿ ನಾಲ್ಕನೇ ಹಂತದ ಚುನಾವಣೆ ನಡೆಯುತ್ತಿರುವ ಸಮಯದಲ್ಲಿ ಈ ಬೆಳವಣಿಗೆ ಕಂಡು ಬಂದಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.