ಕರ್ನಾಟಕ

karnataka

By

Published : Jun 22, 2021, 8:34 PM IST

ETV Bharat / bharat

Lakshadweepa: ಆಡಳಿತಾಧಿಕಾರಿ ಕೈಗೊಂಡಿದ್ದ 2 ವಿವಾದಾತ್ಮಕ ಕ್ರಮಗಳಿಗೆ ಹೈಕೋರ್ಟ್ ತಡೆ..!

ಲಕ್ಷದ್ವೀಪದಲ್ಲಿನ ಡೈರಿ ಫಾರ್ಮ್​ ಗಳನ್ನು ಮುಚ್ಚುವುದು ಮತ್ತು ಶಾಲಾ ಮಕ್ಕಳ ಊಟದ ಮೆನುವಿನಿಂದ ಬೀಫ್‌, ಚಿಕನ್‌ ಸೇರಿದಂತೆ ಮಾಂಸಾಹಾರಗಳನ್ನು ರದ್ದುಪಡಿಸುವ ಆದೇಶಗಳಿಗೆ ಹೈಕೋರ್ಟ್‌ ತಡೆ ನೀಡಿದೆ.

Lakshadweep administrators
Lakshadweep administrators

ಎರ್ನಾಕುಲಂ (ಕೇರಳ): ಲಕ್ಷದ್ವೀಪದ ನೂತನ ಆಡಳಿತಾಧಿಕಾರಿ ಪ್ರಫುಲ್‌ ಖೋಡಾ ಪಟೇಲ್‌ ಆದೇಶ ನೀಡಿದ್ದ ಎರಡು ವಿವಾದಾತ್ಮಕ ಕಾನೂನುಗಳಿಗೆ ಕೇರಳ ಹೈಕೋರ್ಟ್‌ ತಡೆ ನೀಡಿದೆ. ಲಕ್ಷದ್ವೀಪದಲ್ಲಿನ ಡೈರಿ ಫಾರ್ಮ್​​​​ಗಳನ್ನು ಮುಚ್ಚುವುದು ಮತ್ತು ಶಾಲಾ ಮಕ್ಕಳ ಊಟದ ಮೆನುವಿನಿಂದ ಬೀಫ್‌, ಚಿಕನ್‌ ಸೇರಿದಂತೆ ಮಾಂಸಾಹಾರಗಳನ್ನು ರದ್ದುಪಡಿಸುವ ಆದೇಶಗಳಿಗೆ ಹೈಕೋರ್ಟ್‌ ತಡೆ ನೀಡಿದೆ.

ವಕೀಲ ಎ.ಅಕ್ಬರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಶೀಲಿಸಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಪ್ರಕರಣವನ್ನು ಆಲಿಸಿದ ಹೈಕೋರ್ಟ್‌ ನ್ಯಾಯಾಧೀಶರು ಈ ಎರಡು ವಿವಾದಾತ್ಮಕ ಕಾಯ್ದೆಗಳಿಗೆ ತಡೆ ನೀಡಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ಆಗುವವರೆಗೂ ಈ ತಡೆ ಜಾರಿಯಲ್ಲಿರಲಿದೆ ಎಂದು ಹೈಕೋರ್ಟ್‌ ತಿಳಿಸಿದೆ.

ಲಕ್ಷದ್ವೀಪದಲ್ಲಿ ಹೈನುಗಾರಿಕೆ ನಡೆಸುವ ಡೈರಿ ಫಾರ್ಮ್​​ಗಳನ್ನು ಮುಚ್ಚಬೇಕು ಎಂಬ ಆದೇಶವು ಏಕಪಕ್ಷೀಯವಾಗಿದೆ. ಇದನ್ನು ಮುಂದುವರಿಯಲು ಬಿಡಬಾರದು. ಪ್ರಫುಲ್‌ ಖೋಡಾ ಪಟೇಲ್‌ ರ ಈ ತೀರ್ಮಾನದ ಕಾರಣದಿಂದ ಹಲವಾರು ಪಶುಗಳು ಸಂರಕ್ಷಣೆಯಿಲ್ಲದೇ ಸಾಯುತ್ತಿವೆ. ಶಾಲಾ ಮಕ್ಕಳ ಊಟದ ಮೆನುವಿನಿಂದ ಬೀಫ್‌ ಅನ್ನು ತೆರವುಗೊಳಿಸಿರುವುದು ಒಂದು ರಾಜಕೀಯ ನಡೆಯಾಗಿದೆ.

ಆದ್ದರಿಂದ ಲಕ್ಷದ್ವೀಪದ ಜನರ ಜೀವನಕ್ಕೆ, ಸಂಸ್ಕೃತಿಗೆ ಬಾಧಕವಾಗುವ ಇಂತಹ ಎಲ್ಲಾ ನಿಯಮಗಳಿಗೆ ನ್ಯಾಯಾಲಯವು ಮಧ್ಯಪ್ರವೇಶಿಸಿ ನಿರ್ಣಯ ಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಗುಜರಾತ್ ಮಾಜಿ ಸಚಿವ ಪ್ರಫುಲ್ ಖೋಡಾ ಪಟೇಲ್ ದ್ವೀಪದ ಆಡಳಿತಾಧಿಕಾರಿಯಾಗಿ ನೇಮಕವಾದಾಗಿನಿಂದ ಅನೇಕ ಗೊಂದಲದ ಆದೇಶಗಳನ್ನು ಹೊರಡಿಸುತ್ತಿದ್ದಾರೆ.

ಈ ಗೊಂದಲದ ಆದೇಶಗಳನ್ನು ದ್ವೀಪವಾಸಿಗಳು ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳ ಉಲ್ಲಂಘನೆ ಎಂದು ಭಾವಿಸಿ, ಆಡಳಿತಾಧಿಕಾರಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ABOUT THE AUTHOR

...view details