ಕರ್ನಲ್ (ಹರಿಯಾಣ):ಭಾರತದ ಮೊದಲ ಮಹಿಳಾ ಗಗನಯಾತ್ರಿ ದಿವಂಗತ ಕಲ್ಪನಾ ಚಾವ್ಲಾ ಅವರ ತಂದೆ ಬನಾರಸಿ ಲಾಲ್ ಚಾವ್ಲಾ (94) ನಿಧನರಾಗಿದ್ದಾರೆ. ಹರಿಯಾಣದ ಕರ್ನಲ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಬನಾರಸಿ ಚಾವ್ಲಾ ಕೊನೆಯುಸಿರೆಳೆದಿದ್ದು, ಅವರು ಸಮಾಜ ಸೇವೆ ಮೂಲಕ ಜನಮಾನಸದಲ್ಲಿ ಗುರುತಿಸಿಕೊಂಡಿದ್ದರು. ತಮ್ಮ ಇಚ್ಛೆಯಂತೆ ಅವರ ಮೃತದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆಗಾಗಿ ದಾನ ಮಾಡಲು ನಿರ್ಧರಿಸಲಾಗಿದೆ. ಈ ಮೂಲಕ ಸಾವಿನಲ್ಲೂ ಚಾವ್ಲಾ ಮಾದರಿಯಾಗಿದ್ದಾರೆ.
ಬನಾರಸಿ ಲಾಲ್ ಚಾವ್ಲಾ ತಮ್ಮ ಇಡೀ ಜೀವನವನ್ನು ಸಮಾಜಸೇವೆಗೆ ಮುಡಿಪಾಗಿಟ್ಟರು. ಬಡ ಹೆಣ್ಣುಮಕ್ಕಳಿಗೆ ಉಚಿತ ಕಂಪ್ಯೂಟರ್ ತರಬೇತಿ ಮತ್ತು ಇತರ ಕೋರ್ಸ್ಗಳನ್ನು ಕಲಿಯಲು ಪ್ರೋತ್ಸಾಹಿಸುತ್ತಿದ್ದರು. ಇದಲ್ಲದೇ ಉಚಿತ ಶಿಕ್ಷಣ ನೀಡುವಂತಹ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದರು. ಯಾವುದೇ ಸಮಾರಂಭದಲ್ಲಿ ಹೂಗುಚ್ಛಗಳಾಗಲಿ ಅಥವಾ ಉಡುಗೊರೆಗಳನ್ನಾಗಲಿ ಅವರು ಸ್ವೀಕರಿಸುತ್ತಿರಲಿಲ್ಲ. ಅತಂತ್ಯ ಸರಳ ಜೀವನ ನಡೆಸುತ್ತಿದ್ದ ಅವರ ನಿಧನದಿಂದ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
''ಹರಿಯಾಣದ ಮಗಳು ಕಲ್ಪನಾ ಚಾವ್ಲಾ ಅವರ ತಂದೆ ಬನಾರಸಿ ಲಾಲ್ ಚಾವ್ಲಾ ಅವರ ನಿಧನದ ಬಗ್ಗೆ ಸುದ್ದಿ ಕೇಳಿ ದುಃಖವಾಗಿದೆ. ಅವರು ತಮ್ಮ ಮಗಳಿಗೆ ಕನಸು ಕಾಣಲು ಮತ್ತು ನಕ್ಷತ್ರಗಳನ್ನು ತಲುಪಲು ಸ್ವಾತಂತ್ರ್ಯವನ್ನು ನೀಡಿದ್ದರು. ಇದರಿಂದ ಪ್ರಪಂಚದಾದ್ಯಂತ ಭಾರತದ ವೈಭವ ಹೆಚ್ಚಿತು ಮತ್ತು ಇತರ ಹೆಣ್ಣುಮಕ್ಕಳಿಗೂ ಸ್ಫೂರ್ತಿ ತುಂಬಿತ್ತು. ಮೃತರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಮತ್ತು ದುಃಖತಪ್ತ ಕುಟುಂಬಕ್ಕೆ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ'' ಎಂದು ಸಿಎಂ ಮನೋಹರ್ ಲಾಲ್ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.