ಹೈದರಾಬಾದ್: ದೇಶಕ್ಕೆ ಸ್ವಾತಂತ್ರ್ಯ ಬಂದು ಏಳೂವರೆ ದಶಕಗಳಾಗಿದೆ. ಆದರೂ, ಪೌಷ್ಟಿಕಾಂಶದ ಭದ್ರತೆ ಮತ್ತು ಆರೋಗ್ಯಕರ ಜೀವನವು ದೇಶದ ಅಸಂಖ್ಯಾತ ನಾಗರಿಕರಿಗೆ ದೂರದ ಕನಸಾಗಿ ಉಳಿದಿದೆ. ಲಕ್ಷಾಂತರ ಮಕ್ಕಳ ಭವಿಷ್ಯವು ಬಿಟ್ಟುಬಿಡದೇ ಕಾಡುತ್ತಿರುವ ಅಪೌಷ್ಟಿಕತೆಯ ಭೀತಿಯಿಂದ ಹಾಳಾಗುತ್ತಿದೆ. ಹುಟ್ಟಿದ ಕ್ಷಣದಿಂದಲೇ ಮಕ್ಕಳು ಈ ಅವಸ್ಥೆ ಅನುಭವಿಸಬೇಕಾಗಿದೆ. ಇದರ ಭೀಕರ ಸ್ಥಿತಿಯನ್ನು ವಿಶ್ವ ಹಸಿವು ಸೂಚ್ಯಂಕ (World Hunger Index) ತೆರೆದಿಟ್ಟಿದೆ.
2020ರಲ್ಲಿ ಭಾರತವು ವಿಶ್ವ ಹಸಿವು ಸೂಚ್ಯಂಕದಲ್ಲಿ 94ನೇ ಸ್ಥಾನ ಹೊಂದಿತ್ತು. ನಂತರದ ವರ್ಷಗಳಲ್ಲಿ 101 ಹಾಗೂ 107 ಸ್ಥಾನಕ್ಕೆ ಇಳಿದಿತು. ಪ್ರಸ್ತುತ, ಇತ್ತೀಚಿನ ಸೂಚ್ಯಂಕದಲ್ಲಿ 125 ರಾಷ್ಟ್ರಗಳ ಪೈಕಿ ಭಾರತವು 111ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಈ ಸೂಚ್ಯಂಕವು ಹಸಿವಿನ ಬಹುಆಯಾಮದ ಸ್ವರೂಪಗಳಾದ ಅಪೌಷ್ಟಿಕತೆ, ಮಕ್ಕಳ ಬೆಳವಣಿಗೆ ಕುಂಠಿತ, ಮಕ್ಕಳ ಬೆಳವಣಿಗೆ ಕ್ಷೀಣತೆ ಮತ್ತು ಮಕ್ಕಳ ಮರಣ ಎಂಬ ನಾಲ್ಕು ಪ್ರಮುಖ ಸೂಚಕಗಳನ್ನು ವಿಶ್ಲೇಷಿಸುತ್ತಿದೆ. ಈ ಆತಂಕಕಾರಿ ವಾಸ್ತವಕ್ಕೆ ತದ್ವಿರುದ್ಧವಾಗಿ ಕೇಂದ್ರ ಸರ್ಕಾರವು ವಿಶ್ವ ಹಸಿವು ಸೂಚ್ಯಂಕದ ಸಂಶೋಧನೆಗಳನ್ನು ತಳ್ಳಿ ಹಾಕಿದೆ. ಇದು 'ಹಸಿವಿನ ದೋಷಪೂರಿತ ಮಾಪನ'ವಾಗಿದ್ದು, ಇದು ಭಾರತದ ನಿಜವಾದ ಸ್ಥಿತಿಯನ್ನು ನಿಖರವಾಗಿ ಚಿತ್ರಿಸಲು ವಿಫಲವಾಗಿದೆ ಎಂದು ಸರ್ಕಾರ ಹೇಳಿದೆ.
ಸರ್ಕಾರ ಏನೇ ಹೇಳಿದರೂ, 2016-18ರ ಸಮಗ್ರ ರಾಷ್ಟ್ರೀಯ ಪೌಷ್ಟಿಕಾಂಶ ಸಮೀಕ್ಷೆಯೇ ಈ ಅಶುಭದ ಎಚ್ಚರಿಕೆ ಕೊಟ್ಟಿದೆ. ಆಹಾರದ ಕೊರತೆಯ ಭೀತಿಯು ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಮಿತಿ ಮೀರಿ ತನ್ನ ವ್ಯಾಪ್ತಿಯನ್ನು ಆವರಿಸಿಕೊಂಡಿದೆ. ಐದು ವರ್ಷದೊಳಗಿನ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿದೆ ಎಂದು ವರದಿಯು ನಿಸ್ಸಂದಿಗ್ಧವಾಗಿ ಪ್ರಕಟಿಸಿದೆ. ಇದು ನಮ್ಮ ರಾಷ್ಟ್ರದ ಆರೋಗ್ಯದ ಕಠೋರ ಚಿತ್ರಣವನ್ನೂ ಬಿಂಬಿಸಿದೆ. ವಿಜ್ಞಾನ ಮತ್ತು ಪರಿಸರ ಕೇಂದ್ರ ನಡೆಸಿದ ಇತ್ತೀಚಿನ ಸಂಶೋಧನೆಯು, ಶೇ.71ರಷ್ಟು ಭಾರತೀಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದೆ. ಇದು ವಾರ್ಷಿಕವಾಗಿ 17 ಲಕ್ಷ ಜನರ ಜೀವವನ್ನು ಬಲಿತೆಗೆದುಕೊಳ್ಳುತ್ತಿದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಕುಂಠಿತ ಬೆಳವಣಿಗೆಯಿಂದ ಬಳಲುತ್ತಿರುವ ಶೇ.68ರಷ್ಟು ಮಕ್ಕಳ ಸಾವಿಗೆ ಅಪೌಷ್ಟಿಕತೆಯೇ ಕಾರಣ ಎಂದು ಅಧ್ಯಯನಗಳು ಹೇಳುತ್ತವೆ.
ದೇಶದಲ್ಲಿ ಹಲವಾರು ತಾಯಂದಿರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಮತ್ತು ಶಿಶುಗಳ ಅಪೌಷ್ಟಿಕತೆಯು ಮುಗ್ಧ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಪೋಷಣ್ ಅಭಿಯಾನ ಮತ್ತು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (ಪಿಎಂಎಂವಿವೈ) ನಂತಹ ನಿರ್ಣಾಯಕ ಯೋಜನೆಗಳಿಗೆ ಮೀಸಲಿಟ್ಟ ಹಣದ ಪರಿಣಾಮಕಾರಿ ಬಳಕೆ ಮಾಡದ ಬಗ್ಗೆ ಡಾ. ವಿನಯ್ ಸಹಸ್ರಬುದ್ಧೆ ಅಧ್ಯಕ್ಷತೆಯ ಸಂಸದೀಯ ಸ್ಥಾಯಿ ಸಮಿತಿಯ ವರದಿಯು ಬೆಳಕು ಚೆಲ್ಲುವ ಮೂಲಕ ಆತಂಕಕಾರಿ ಸಂಗತಿಗಳನ್ನು ಹೊರ ಹಾಕಿದೆ. ದೇಶವು ಇತರ ರಂಗಗಳಲ್ಲಿ ಕ್ಷಿಪ್ರ ಪ್ರಗತಿಯನ್ನು ಸಾಧಿಸುತ್ತಿದ್ದರೂ ನಾಗರಿಕರು ಹಸಿವಿನಿಂದ ಉಂಟಾಗುವ ಸಾವು-ನೋವುಗಳಿಗೆ ಬಲಿಯಾಗುತ್ತಿದ್ದಾರೆ ಎಂಬ ಹೃದಯ ವಿದ್ರಾವಕ ಸತ್ಯಕ್ಕೆ ಸುಪ್ರೀಂ ಕೋರ್ಟ್ ಹೇಳಿಕೆ ಕೂಡ ನಿದರ್ಶನವಾಗಿದ್ದು, ಸಾಧ್ಯವಾದಷ್ಟು ಜನರಿಗೆ ಪಡಿತರಗಳನ್ನು ವಿತರಿಸಲು ನಿರ್ದೇಶನ ನೀಡಿದೆ.