ಅನಂತನಾಗ್ (ಜೆ & ಕೆ):ಕಾಶ್ಮೀರದಲ್ಲಿ ಹುರಿಯತ್ ನಾಯಕರ ಮೇಲೆ ಕಠಿಣ ಕ್ರಮಗಳನ್ನು ಮುಂದುವರಿಸಿರುವ ಅಧಿಕಾರಿಗಳು, ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ ಅಂಗಡಿ, ಕಟ್ಟಡಗಳನ್ನು ಜೆಸಿಬಿ ಬಳಸಿ ನೆಲಸಮ ಮಾಡುವ ಕಾರ್ಯಾಚರಣೆ ಮಾಡುತ್ತಿದ್ದಾರೆ. ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಮೆಹಂದಿ ಕಡಲ್ ಪ್ರದೇಶದಲ್ಲಿ ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ಹಿರಿಯ ಹುರಿಯತ್ ನಾಯಕ ಖಾಜಿ ಯಾಸಿರ್ ಅವರಿಗೆ ಸೇರಿದ ಶಾಪಿಂಗ್ ಕಾಂಪ್ಲೆಕ್ಸ್ ಅನ್ನು ಒಡೆದು ಹಾಕಿದರು. ಇದೇ ವೇಳೆ ಹಲವು ಅಂಗಡಿಗಳಿಗೆ ಅಧಿಕಾರಿಗಳು ಸೀಲ್ ಹಾಕಿದರು.
ಅತಿಕ್ರಮಣ ವಿರೋಧಿ ಭಾಗವಾಗಿ ಅಧಿಕಾರಿಗಳ ತಂಡ ಇಂದು ಬೆಳಗ್ಗೆ ಬುಲ್ಡೋಜರ್ನೊಂದಿಗೆ ಸ್ಥಳಕ್ಕೆ ಆಗಮಿಸಿ, ಮೂರು ಅಂತಸ್ತಿನ ಶಾಪಿಂಗ್ ಕಾಂಪ್ಲೆಕ್ಸ್ ಅನ್ನು ಕೆಡವಿ ಹಾಕಿದರು. ಇದರ ವಿಡಿಯೋವನ್ನೂ ಹಂಚಿಕೊಳ್ಳಲಾಗಿದೆ. ಹುರಿಯತ್ ನಾಯಕರ ವಿರುದ್ಧದ ಕಠಿಣ ಕ್ರಮವನ್ನು ಇದು ಬಿಂಬಿಸುತ್ತದೆ. ಅನಂತನಾಗ್ ಜಿಲ್ಲಾಧಿಕಾರಿ ಬಶರತ್ ಖಯ್ಯೂಮ್ ಅವರ ಸೂಚನೆಯ ಮೇರೆಗೆ ಮುನ್ಸಿಪಲ್ ಕೌನ್ಸಿಲ್ ಮತ್ತು ಹಣಕಾಸು ಇಲಾಖೆಯ ಅಧಿಕಾರಿಗಳ ಜಂಟಿ ತಂಡ ಈ ಕಾರ್ಯಾಚರಣೆ ನಡೆಸಿದರು. ಹುರಿಯತ್ ನಾಯಕ ಖಾಜಿ ಯಾಸಿರ್ ಮತ್ತು ಆತನ ಸಹೋದರ ಖಾಜಿ ಶಿಬ್ಲಿ ಹಲವು ವರ್ಷಗಳಿಂದ ಜೈಲು ಪಾಲಾಗಿದ್ದಾರೆ.
ಆಕ್ರಮಿತ ಸರ್ಕಾರಿ ಭೂಮಿ ವಶ:2 ದಿನಗಳ ಹಿಂದಷ್ಟೇ ಮಾಜಿ ಸಚಿವರಾದ ಪೀರ್ಜಾದಾ ಮೊಹಮ್ಮದ್ ಸೈಯದ್, ಸೈಯದ್ ಫಾರೂಕ್ ಅಂದ್ರಾಬಿ, ಮಾಜಿ ಮುಖ್ಯಮಂತ್ರಿ ಸೈಯದ್ ಮೀರ್ ಖಾಸಿಂ ಅವರ ಕುಟುಂಬಸ್ಥರಿಗೆ ಸೇರಿದ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಲಾಗಿತ್ತು. ಇನ್ನೊಂದೆಡೆ ಅರಾ ಖೋಶಿಪೋರಾದಲ್ಲಿ ಕಾಂಗ್ರೆಸ್ ನಾಯಕ ಸಯೀದ್ ಅವರ ವಶದಲ್ಲಿದ್ದ ಸರ್ಕಾರಿ ಭೂಮಿಯನ್ನು ಅಧಿಕಾರಿಗಳು ವಶಪಡಿಸಿಕೊಂಡರು.
ಶಿಸ್ಟರ್ಗಾಮ್ನಲ್ಲಿ ಸರ್ಕಾರಿ ಭೂಮಿಯನ್ನು ತೋಟವನ್ನಾಗಿ ಪರಿವರ್ತಿಸಿಕೊಂಡಿದ್ದ ಕುಟುಂಬದಿಂದ ಭೂಮಿಯನ್ನು ಮರಳಿ ಪಡೆಯಲಾಗಿದೆ. ಅನಂತ್ನಾಗ್ನ ಮಟ್ಟಾನ್ ಪ್ರದೇಶದಲ್ಲಿ ಪೊಲೀಸ್ ಅಧಿಕಾರಿಯ ಕುಟುಂಬಕ್ಕೆ ಸೇರಿದ ತೋಟದ ಜಮೀನಿನ ಹೊರ ಗೋಡೆಯನ್ನು ಕಂದಾಯ ಇಲಾಖೆ ಕೆಡವಿದೆ. ಸುಮಾರು ಎಕರೆಯಷ್ಟ ಜಾಗವನ್ನು ಕುಟುಂಬ ಅಕ್ರಮವಾಗಿ ವಶಪಡಿಸಿಕೊಂಡಿತ್ತು ಎಂದು ಅಧಿಕಾರಿಗಳು ತಿಳಿಸಿದರು.