ಬರೇಲಿ:ಮಲತಾಯಿಯೊಬ್ಬಳು ತನ್ನ 10 ವರ್ಷದ ಮಗಳಿಗೆ ಚಿತ್ರಹಿಂಸೆ ಕೊಟ್ಟು, ಚಾಕುವಿನಿಂದ ಇರಿದು ಕೊಲೆಗೈದು ಮನೆಯಲ್ಲೇ ಹೂತುಹಾಕಿರುವ ಘಟನೆ ಉತ್ತರ ಪ್ರದೇಶದ ಬರೇಲಿಯ ಇಜ್ಜತ್ನಗರದಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಕೊಲೆಗೈದ ತಾಯಿ ಹಾಗೂ ಕೊಲೆಗೆ ಸಹಾಯ ಮಾಡಿದ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ತಾಯಿಯು ಬರೇಲಿಯ ಮಹಾನಗರ ಪಾಲಿಕೆಯ ಉದ್ಯೋಗಿ ರವಿಬಾಬು ಅವರ ಪತ್ನಿ ರೀತು ಎಂದು ಗುರುತಿಸಲಾಗಿದೆ.
ಆ. 22ರಂದು ಮಧ್ಯಾಹ್ನ ಬಾಲಕಿಯು ಮನೆಕೆಲಸ ಮಾಡದೇ ಮಲಗಿದ್ದಳಂತೆ. ಇದರಿಂದ ಕೋಪಗೊಂಡ ರೀತು ಮನಬಂದಂತೆ ಬಾಲಕಿಯ ಮೇಲೆ ಹಲ್ಲೆ ಮಾಡಿದ್ದಾಳೆ. ಹಲ್ಲೆ ಸಹಿಸಿಕೊಳ್ಳದ ಬಾಲಕಿ, ತಾಯಿಯ ವಿರುದ್ಧ ವಾಗ್ವಾದಕ್ಕಿಳಿದಿದ್ದಳು. ಇದರಿಂದ ಮತ್ತಷ್ಟು ಕೋಪಗೊಂಡ ತಾಯಿ ರೀತು, ಮನಬಂದಂತೆ ಮಗಳಿಗೆ ಚಾಕುವಿನಿಂದ ಇರಿದಿದ್ದಾಳೆ. 15ಕ್ಕೂ ಹೆಚ್ಚು ಬಾರಿ ಇರಿತಕ್ಕೊಳಗಾದ ಬಾಲಕಿ ಅಲ್ಲಿಯೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಬಾಲಕಿಗೆ ಅವಳ ಮಲತಾಯಿ ಆಗಾಗ ಚಿತ್ರಹಿಂಸೆ ನೀಡುತ್ತಿದ್ದಳು. ಬಾಲಕಿಯ ಕೂಗಾಟ, ನರಳಾಟ ದಿನವೂ ನಡೆಯುತ್ತಲೇ ಇತ್ತು. ಆದರೆ, ಬಾಲಕಿ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದು, ಇದರಿಂದ ಅನುಮಾನ ವ್ಯಕ್ತಪಡಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಬಾಲಕಿಯನ್ನು ಕೊಂದು ಮನೆಯಲ್ಲಿಯೇ ಹೂತು ಹಾಕಿರುವುದು ಬೆಳಕಿಗೆ ಬಂದಿದೆ.
ಪೊಲೀಸರು ಬಾಲಕಿಯ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದು, ಚಾಕುವಿನಿಂದ ಇರಿದು ಕೊಂದಿರುವುದಾಗಿ ತಿಳಿದು ಬಂದಿದೆ. ಇನ್ನು ಪ್ರಕರಣದ ಸುದ್ದಿ ಹಬ್ಬುತ್ತಿದ್ದಂತೆ ರೀತು ಸ್ಥಳದಿಂದ ಪರಾರಿಯಾಗಿದ್ದಾಳೆ ಎಂದು ತಿಳಿದು ಬಂದಿದೆ. ಆಕೆಗಾಗಿ ಪೊಲೀಸರು ಶೋಧ ನಡೆಸಿದ್ದು, ಕೊಲೆಗೆ ಮತ್ತು ಬಾಲಕಿಯನ್ನು ಹೂಳಲು ಸಹಾಯ ಮಾಡಿದ ಆರೋಪದ ಹಿನ್ನೆಲೆ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಸಾಕ್ಷ್ಯಗಳನ್ನು ಮರೆಮಾಚಲು ಯತ್ನ ಮಾಡಿದ ವ್ಯಕ್ತಿ ಸೇರಿದಂತೆ, ಪ್ರಕರಣ ಸಂಬಂಧ ಒಟ್ಟು ಮೂವರ ಮೇಲೆ ದೂರು ದಾಖಲಾಗಿದೆ.