ನವದೆಹಲಿ: ಯುದ್ಧೋನ್ಮಾದಲ್ಲಿದ್ದ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿ ವಿಶ್ವಮಟ್ಟದಲ್ಲಿ ಭಾರತದ ಸಾಮರ್ಥ್ಯವನ್ನು ಸಾಬೀತುಪಡಿಸಿದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅನಾರೋಗ್ಯ ರಜೆ ನಿಮಿತ್ತ ಶ್ರೀನಗರಕ್ಕೆ ತೆರಳಿದ್ದಾರೆ.
ಪಾಕಿಸ್ತಾನದಿಂದ ಭಾರತಕ್ಕೆ ಹಿಂತಿರುಗಿದ ಬಳಿಕ ವಿವಿಧ ಪರೀಕ್ಷೆಗಳಿಗೆ ಒಳಪಟ್ಟ ನಂತರ ಇದೀಗ ವೈದ್ಯರ ಸಲಹೆ ಮೇರೆಗೆ ಅಭಿನಂದನ್ ನಾಲ್ಕು ವಾರಗಳ ಅನಾರೋಗ್ಯ ರಜೆ ಪಡೆದು ಶ್ರೀನಗರದತ್ತ ಪ್ರಯಾಣ ಬೆಳೆಸಿದ್ದಾರೆ.
ಈ ರಜೆಯಲ್ಲಿ ಕುಟುಂಬಸ್ಥರೊಂದಿಗೆ ಅಭಿನಂದನ್ ಸಮಯ ಕಳೆಯುವ ಅವಕಾಶವನ್ನೂ ಹೊಂದಿದ್ದರು. ಆದರೆ ಅಭಿನಂದನ್, ಚೆನ್ನೈಗೆ ಹೋಗುವ ಬದಲಿಗೆ ಈ ರಜೆಯಲ್ಲಿ ಶ್ರೀನಗರದಲ್ಲಿರುವ ಸ್ಕ್ವಾಡ್ರನ್ರನ್ನು ಭೇಟಿ ಮಾಡಿ ತಮ್ಮ ಸಾಮರ್ಥ್ಯವನ್ನ ಸಾಬೀತುಪಡಿಸಲು ನಿರ್ಧರಿಸಿದ್ದಾರೆ. ನಾಲ್ಕು ವಾರಗಳ ಬಳಿಕ ಅವರು ಮತ್ತೆ ನವದೆಹಲಿಗೆ ತೆರಳಲಿದ್ದಾರೆ.
ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಪಾಕಿಸ್ತಾನ ಪ್ರವೇಶಿಸಿದ್ದ ಅಭಿನಂದನ್ ಅವರನ್ನು ಪಾಕ್ ಆರ್ಮಿ ಬಂಧಿಸಿತ್ತು.
ಇದಾದ ಕೆಲ ದಿನದಲ್ಲೇ ಭಾರತದ ಒತ್ತಡಕ್ಕೆ ಮಣಿದಿದ್ದ ಇಮ್ರಾನ್ ಖಾನ್ ಸರ್ಕಾರ ಅಭಿನಂದನ್ರನ್ನು ಭಾರತಕ್ಕೆ ಒಪ್ಪಿಸಿತ್ತು.