ಮುಂಬೈ (ಮಹಾರಾಷ್ಟ್ರ) : ಪತಂಜಲಿ ಬಿಡುಗಡೆ ಮಾಡಿರುವ ಕೊರೊನಾ ಔಷಧಿಯ ಜಾಹಿರಾತನ್ನು ಆಯುಷ್ ಇಲಾಖೆ ತಡೆಹಿಡಿದ ಬೆನ್ನಲ್ಲೆ, ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ ಯೋಗ ಗುರು ಬಾಬಾ ರಾಮ್ದೇವ್ಗೆ ಎಚ್ಚರಿಕೆ ನೀಡಿದ್ದು, ನಮ್ಮ ರಾಜ್ಯದಲ್ಲಿ ನಕಲಿ ಔಷಧಿ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಜೈಪುರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಪತಂಜಲಿ ಆಯುರ್ವೇದದ ಕೊರೊನಿಲ್ ಔಷಧಿಯ ಕುರಿತು ಕ್ಲಿನಿಕಲ್ ಪ್ರಯೋಗ ನಡೆಸುತ್ತಿದೆ. ಅದ್ದರಿಂದ ನಮ್ಮ ರಾಜ್ಯದಲ್ಲಿ ನಕಲಿ ಔಷಧಿ ಮಾರಾಟಕ್ಕೆ ಯಾವುದೇ ಕಾರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಕ್ಲಿನಿಕಲ್ ಪ್ರಯೋಗ, ಮಾದರಿ ಗಾತ್ರದ ವಿವರಗಳನ್ನು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರದೆ ಇರುವುದರಿಂದ ಕೊರೊನಾ ಗುಣಪಡಿಸುತ್ತದೆ ಎಂದು ಹೇಳುವ ಪತಂಜಲಿಯ ಔಷಧಿ ಸ್ವೀಕಾರಾರ್ಹವಲ್ಲ. ಅಂತಹ ಔಷಧಿಯನ್ನು ನಿಷೇಧಿಸಿರುವುದು ಅತ್ಯಂತ ಉತ್ತಮ ನಿರ್ಧಾರ. ಜನರ ಆರೋಗ್ಯದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ದೇಶ್ಮುಖ್ ಹೇಳಿದ್ದಾರೆ.
ಕೋವಿಡ್ಗೆ ಔಷಧಿ ಎಂಬ ಹೆಸರಿನಲ್ಲಿ ಹರಿದ್ವಾರದ ಪತಂಜಲಿ ಯೋಗ ಪೀಠ ಜೂನ್ 23 ರಂದು ಕೊರೊನಿಲ್ ಮತ್ತು ಸ್ವಸಾರಿ ಎಂಬ ಎರಡು ಔಷಧಿಗಳನ್ನು ಬಿಡುಗಡೆ ಮಾಡಿತ್ತು. ಕ್ಲಿನಿಕಲ್ ಪ್ರಯೋಗದ ವೇಳೆ ಈ ಔಷಧಿ ಶೇ.100 ರಷ್ಟು ಅನುಕೂಲಕರ ಫಲಿತಾಂಶ ನೀಡಿದೆ ಎಂದು ಸಂಸ್ಥೆ ಹೇಳಿದೆ. ಆದರೆ, ಔಷಧ ಬಿಡುಗಡೆಯಾದ ಒಂದು ಗಂಟೆಯೊಳಗೆ ಆಯುಷ್ ಇಲಾಖೆ ಅದರ ಕ್ಲಿನಿಕಲ್ ಮಾನ್ಯತೆ ಬಗ್ಗೆ ವಿವರ ಕೇಳಿ ಔಷಧಿ ಮಾರಾಟ ಮತ್ತು ಜಾಹಿರಾತಿಗೆ ತಡೆಯಾಜ್ಞೆ ತಂದಿದೆ.