ಹೈದರಾಬಾದ್: ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಪ್ರಕ್ರಿಯೆ ನಿಲ್ಲಿಸಲು ಆಂಧ್ರ ಪ್ರದೇಶ ಸಚಿವ ಸಂಪುಟ ನಿರ್ಧರಿಸಿದೆ.
ಈ ಬಗ್ಗೆ ಮಾತನಾಡಿರುವ ಸಚಿವ ಪೆರ್ನಿ ನಾನಿ, ಅಲ್ಪಸಂಖ್ಯಾತ ಸಮುದಾಯಕ್ಕೆ ಎನ್ಪಿಆರ್ ಮಾರಕವಾಗಿದೆ ಎಂದಿದ್ದಾರೆ. ಎನ್ಪಿಆರ್ ಪ್ರಶ್ನಾವಳಿಯಲ್ಲಿ ಬದಲಾವಣೆಗಳನ್ನು ತರಲು ಕ್ಯಾಬಿನೆಟ್ ನಿರ್ಧರಿಸಿದೆ. ಪ್ರಶ್ನೆಗಳು ಬದಲಾವಣೆಯಾಗುವವರೆಗೆ ಎನ್ಪಿಆರ್ ಪ್ರಕ್ರಿಯೆಗಳನ್ನು ನಿಲ್ಲಿಸಲು ಜಗನ್ ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.
2010ರಲ್ಲಿ ಚಾಲ್ತಿಯಲ್ಲಿದ್ದ ಷರತ್ತುಗಳನ್ನು ಎನ್ಪಿಆರ್ ಜನಗಣತಿಯಲ್ಲೂ ಅಳವಡಿಸಬೇಕು. ಅಲ್ಲದೆ ಎನ್ಪಿಆರ್ ಬಗ್ಗೆ ಜನರಲ್ಲಿರುವ ಆತಂಕವನ್ನು ದೂರ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಸಚಿವ ಪೆರ್ನಿ ನಾನಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ಎನ್ಪಿಆರ್ನಲ್ಲಿ ಕೇಳಲಾಗುವ ಕೆಲವು ಪ್ರಶ್ನೆಗಳು ನಮ್ಮ ರಾಜ್ಯದ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಅಭದ್ರತೆ ಸೃಷ್ಟಿಸುತ್ತವೆ. 2010ರಲ್ಲಿ ಚಾಲ್ತಿಯಲ್ಲಿದ್ದ ಷರತ್ತುಗಳನ್ನು ಕೇಂದ್ರ ಒಪ್ಪಿಕೊಂಡು ಪ್ರಶ್ನಾವಳಿಯನ್ನು ಬದಲಾಯಿಸಬೇಕು. ಅಲ್ಲಿಯವರೆಗೂ ಎನ್ಪಿಆರ್ಗೆ ಆಂಧ್ರ ಸರ್ಕಾರ ಸಹಕಾರ ನೀಡುವುದಿಲ್ಲ. ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಎನ್ಪಿಆರ್ ವಿರುದ್ಧ ನಿರ್ಣಯ ಮಂಡಿಸಲು ಬಯಸುತ್ತೇವೆ ಎಂದಿದ್ದಾರೆ.