ನವದೆಹಲಿ:ಕಳೆದ ವರ್ಷ 2019ರ ಫೆಬ್ರವರಿ 14ರಂದು ಭದ್ರತಾ ಸಿಬ್ಬಂದಿ ಹೊತ್ತೊಯ್ಯುತ್ತಿದ್ದ ವಾಹನಕ್ಕೆ ಉಗ್ರರು ನಡೆಸಿದ್ದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಈ ಘಟನೆ ಸಂಭವಿಸಿ ವರ್ಷಗಳಾಗಿದ್ದು, ಇದೀಗ ರಾಷ್ಟ್ರೀಯ ತನಿಖಾ ತಂಡದಿಂದ ಮೊದಲ ಬಂಧನವಾಗಿದೆ.
ಪುಲ್ವಾಮಾ ದಾಳಿ ನಡೆಯಲು ಸಹಾಯ ಮಾಡಿದ್ದ ಕಾಕ್ಪೋರ್ದ 22 ವರ್ಷದ ಶಕೀರ್ ಬಶೀರ್ ಮ್ಯಾಗ್ರೇ ಎಂಬಾತನ ಬಂಧನ ಮಾಡಲಾಗಿದ್ದು, ಈ ವ್ಯಕ್ತಿ ದಾಳಿಗೆ ಸಂಬಂಧಿಸಿದಂತೆ ಸ್ಫೋಟಕ ಸಾಗಣೆಗೆ ನೆರವು ನೀಡಿದ್ದಾನೆ ಎಂಬ ಆರೋಪದ ಮೇಲೆ ಅರೆಸ್ಟ್ ಮಾಡಲಾಗಿದೆ.
ಕಟ್ಟಿಗೆ ಮಳಿಗೆಯ ಮಾಲಿಕನಾಗಿರುವ ಬಶೀರ್ ಪುಲ್ವಾಮಾ ದಾಳಿಕೋರ್ ಅದಿಲ್ ಅಹಮ್ಮದ್ಗೆ ಆಶ್ರಯ ನೀಡಿರುವ ಜತೆಗೆ ಸ್ಫೋಟಕ ವಸ್ತುಗಳ ಸಾಗಣೆಗೆ ಸಹಾಯ ಮಾಡಿದ್ದನು. 2018ರಲ್ಲಿ ಅದಿಲ್ಗೆ ಪರಿಚಯವಾಗಿದ್ದ ವ್ಯಕ್ತಿ ತದನಂತರ ಜೈಶ್ ಉಗ್ರ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ. ಈತನ ಮನೆಯಲ್ಲೇ ಐಇಡಿ ಸ್ಫೋಟಕ ತಯಾರು ಮಾಡಲು ಆತನ ಸಹಾಯ ಮಾಡಿದ್ದು, ಈ ಪ್ರದೇಶದಲ್ಲಿ ಸಿಆರ್ಪಿಎಫ್ ಯೋಧರ ಚಲನವಲನಗಳ ಕುರಿತು ಮೇಲಿಂದ ಮೇಲೆ ಮಾಹಿತಿ ನೀಡುತ್ತಿದ್ದ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ.
ದಾಳಿಗೆ ಬಳಕೆ ಮಾಡಲಾಗಿರುವ ಸ್ಫೋಟಕಗಳನ್ನ ಆನ್ಲೈನ್ನಲ್ಲಿ ಆರ್ಡರ್ ಮಾಡಲಾಗಿತ್ತು ಎಂಬ ಮಾಹಿತಿ ಸಹ ವಿಚಾರಣೆ ವೇಳೆ ಹೊರಬಿದ್ದಿದೆ. ಅಮೋನಿಯಂ ನೈಟ್ರೇಟ್, ನೈಟ್ರೋ-ಗ್ಲಿಸರಿನ್ ಮತ್ತು ಆರ್ಡಿಎಕ್ಸ್ ಸಹ ಇಲ್ಲಿಂದಲೇ ತರಿಸಿಕೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ.
2019ರಲ್ಲಿ ಇಬ್ಬರು ಜೈಶ್ ಸಂಘಟನೆಗೆ ಸೇರಿದ್ದ ಉಗ್ರರ ಹತ್ಯೆ ಮಾಡಿದ ನಂತರ ಅವರ ಬಳಿ ಸಿಕ್ಕ ಮೊಬೈಲ್ನಿಂದ ಪುಲ್ವಾಮಾ ದಾಳಿಯ ಮಹತ್ವದ ಅಂಶ ಗೊತ್ತಾಗಿದ್ದು, ಇದರಲ್ಲಿ ಬಶೀರ್ ಮೊಬೈಲ್ ನಂಬರ್ ಲಭ್ಯವಾಗಿದ್ದರ ಬಗ್ಗೆ ತಿಳಿದು ಬಂದಿದೆ.